ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ; ಬಾಲಚಂದ್ರ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ
ಬೆಂಗಳೂರು, ಮಾರ್ಚ್ 7: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ದೂರು ಹಿಂಪಡೆಯಲು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮುಂದಾಗಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.
ಬೆಂಗಳೂರಿನ ಅರಮನೆ ರಸ್ತೆಯ ಕುಮಾರ ಕೃಪಾ ಗೆಸ್ಟ್ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಯುವತಿಯನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ದೂರಿದ್ದಾರೆ. ಈ ಕೇಸ್ ಅನ್ನು ದಿನೇಶ್ ಅವರು ವಾಪಸ್ ಪಡೆದುಕೊಂಡರೂ ನಾವು ಸುಮ್ಮನಿರುವುದಿಲ್ಲ. ನಾವು ಪ್ರಕರಣ ದಾಖಲಿಸುತ್ತೇವೆ. ಪ್ರಕರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಯುವತಿಯೊಂದಿಗಿದ್ದ ವಿಡಿಯೋ ಸಿ.ಡಿಯೊಂದು ಈಚೆಗೆ ಬೆಳಕಿಗೆ ಬಂದಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಸಚಿವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾನುವಾರ ಈ ದೂರು ಹಿಂಪಡೆಯುವುದಾಗಿ ದಿನೇಶ್ ಕಲ್ಲಹಳ್ಳಿ ಮಾತನಾಡಿದ್ದರು. ಮುಂದೆ ಓದಿ...

"ಬಿಜೆಪಿಗೆ ಕೆಟ್ಟ ಹೆಸರು ತರುವ ಹುನ್ನಾರ"
ಪ್ರಸ್ತುತ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಹೀಗಾಗಿಯೇ ಬಿಜೆಪಿಗೆ ಕೆಟ್ಟ ಹೆಸರು ಬರಬೇಕು ಎಂಬ ಉದ್ದೇಶವೂ ಇದರ ಹಿಂದಿದೆ. ಈ ಪ್ರಕರಣದಲ್ಲಿ ಯುವತಿಯ ಹಿಂದೆ ನಾಲ್ಕು ಪುರುಷರಿದ್ದಾರೆ. ಆ ನಾಲ್ಕು ಜನರು ಯಾರು ಎಂದು ತಿಳಿಯಬೇಕು. ಆಗ ಪ್ರಕರಣ ಸಂಪೂರ್ಣವಾಗಿ ಹೊರಗೆ ಬರಲಿದೆ. ಸತ್ಯ ತಿಳಿಯಲಿದೆ ಎಂದು ಆರೋಪಿಸಿದ್ದಾರೆ.

"ರಾಜಕೀಯವಾಗಿ ರಮೇಶ್ ಜಾರಕಿಹೊಳಿ ಮುಗಿಸಲು ಷಡ್ಯಂತ್ರ"
ಈಗಲೂ ನಾನು ಮಾತನಾಡುತ್ತಿರುವುದನ್ನು ಷಡ್ಯಂತ್ರ ಮಾಡಿದವರು ನೋಡುತ್ತಿದ್ದಾರೆ. ದಿನೇಶ್ ಕಲ್ಲಹಳ್ಳಿ ಅವರನ್ನು ಈ ಪ್ರಕರಣದಲ್ಲಿ ದಾರಿ ತಪ್ಪಿಸಲಾಗಿದೆ. ಅವರಿಗೆ ಮಾಹಿತಿ ಕೊಟ್ಟಿರುವವರು ಅವರನ್ನು ದಾರಿ ತಪ್ಪಿಸಿರುವ ಸಾಧ್ಯತೆಯಿದೆ. ರಾಜಕೀಯವಾಗಿ ರಮೇಶ್ ಜಾರಕಿಹೊಳಿ ಮುಗಿಸಲು ಷಡ್ಯಂತ್ರ ನಡೆದಿದೆ. ರಮೇಶ್ ಜಾರಕಿಹೊಳಿ ಅವರು ದೂರು ಕೊಡದಿದ್ದರೆ ನಾವೇ ಕೊಡುತ್ತೇವೆ. ಅವರನ್ನು ಸಂಪರ್ಕಿಸಿ ಅವರು ಒಪ್ಪಿದ ಬಳಿಕ ನಾವು ದೂರು ಕೊಡುತ್ತೇವೆ ಎಂದು ತಿಳಿಸಿದ್ದಾರೆ.

"ಸಚಿವ ಸ್ಥಾನ ಮರಳಿಸುವ ಬಗ್ಗೆ ಮಾತುಕತೆ ನಡೆಸುತ್ತೇವೆ"
ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ಸಚಿವ ಸ್ಥಾನ ಮರಳಿಸುವ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಮೊದಲು ಹೊರಗೆ ಬಂದು ರಮೇಶ್ ಜಾರಕಿಹೊಳಿ ಅವರು ದೂರು ಕೊಡಲಿ. ಈ ಪ್ರಕರಣ ಯಾವಾಗ ಏನು ತಿರುವು ಪಡೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ. ರಾಜೀನಾಮೆ ಕೊಟ್ಟ ದಿನ ರಮೇಶ್ ಸಿಕ್ಕಿದ್ದರು, ಬಳಿಕ ಅವರು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
Recommended Video

ಸೂಕ್ತ ತನಿಖೆಗೆ ಬಾಲಚಂದ್ರ ಜಾರಕಿಹೊಳಿ ಆಗ್ರಹ
ದಿನೇಶ್ ಕಲ್ಲಹಳ್ಳಿ ಈಗ ದೂರು ವಾಪಸ್ ಪಡೆದುಕೊಳ್ಳುವ ಮಾತನ್ನಾಡುತ್ತಿದ್ದಾರೆ. ಆದರೆ ನಾವು ಸುಮ್ಮನಾಗುವುದಿಲ್ಲ. ಈ ಪ್ರಕರಣದ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯುತ್ತೇವೆ. ಈಗಾಗಲೇ ಬಿಡುಗಡೆ ಆಗಿರುವ 'ಸಿ.ಡಿ'ಯನ್ನು ಪರೀಕ್ಷೆಗೆ ಕಳುಹಿಸಬೇಕು. ಈ ಸಿ.ಡಿ ನಕಲಿ ಎಂದು ನಾನು ಈ ಮೊದಲು ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಈ ಸಿ.ಡಿ ನಕಲಿ ಎಂದು ನಾವು ನೀವು ಹೇಳಿದರೆ ಆಗುವುದಿಲ್ಲ, ಅದನ್ನು ಪರೀಕ್ಷೆ ಮಾಡಿ ತನಿಖೆ ಬಳಿಕ ನಕಲಿ ಎಂದು ಬಯಲಾಗಬೇಕು ಎಂದು ಆಗ್ರಹಿಸಿದ್ದಾರೆ.











Click it and Unblock the Notifications