ಆನಂದ್ ಸಿಂಗ್ ಎಲ್ಲಿದ್ದಾರೆ? ಮುಗಿದಿಲ್ಲ ಹುಡುಕಾಟ
ಬೆಂಗಳೂರು, ಅ.16 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ಆನಂದ್ ಸಿಂಗ್ ಎಲ್ಲಿ? ಈ ಪ್ರಶ್ನೆಗೆ ಸ್ವತಃ ಸಿಬಿಐ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಏಕೆಂದರೆ ಕಳೆದೊಂದು ವಾರದಿಂದ ಆನಂದ್ ಸಿಂಗ್ ಗಾಗಿ ಸಿಬಿಐ ಹುಡುಕಾಟ ನಡೆಸುತ್ತಲೇ ಇದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಬಳ್ಳಾರಿ ವಿಜಯನಗರ ಶಾಸಕ ಆನಂದ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.7ರಂದು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಅಂದಿನಿಂದಲೇ ಅವರಿಗಾಗಿ ಹುಡುಕಾಟ ಆರಂಭವಾಗಿದೆ.
ಆನಂದ್ ಸಿಂಗ್ ಎಲ್ಲಿದ್ದಾರೆ? ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಾಗ, ತಾವು ಅನಾರೋಗ್ಯದ ಕಾರಣ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಾಮೀನು ನೀಡಬೇಕೆಂದು ಸಿಂಗ್ ಮನವಿ ಮಾಡಿದ್ದರು.
ಆದರೆ, ಆನಂದ್ ಸಿಂಗ್ ಅವರ ಪಾಸ್ ಪೋರ್ಟ್ಅನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಾಗಾದರೆ ಅವರು ಸಿಂಗಾಪುರಕ್ಕೆ ತೆರಳಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ನಕಲಿ ಪಾಸ್ ಪೋರ್ಟ್ ಬಳಿಸಿ ಸಿಂಗಾಪುರಕ್ಕೆ ಹಾರಿದ್ದಾರೆಯೇ ಎಂಬ ಬಗ್ಗೆಯೂ ಸಂಶಯ ಎದುರಾಗಿದೆ. (ಆನಂದ್ ಸಿಂಗ್ ವಿರುದ್ಧ ಆರೋಪಗಳೇನು)

ಕರ್ನಾಟಕದಲ್ಲೇ ಇದ್ದಾರೆ
ಆನಂದ್ ಸಿಂಗ್ ಸಿಂಗಾಪುರದಲಿಲ್ಲ ಕರ್ನಾಟಕದಲ್ಲೇ ಇದ್ದಾರೆ. ಬೆಂಗಳೂರಿನಲ್ಲಿ ತಲೆ ಮರಿಸಿಕೊಂಡಿದ್ದಾರೆ. ನ್ಯಾಯಾಲಯದ ಮುಂದೆ ಶರಣಾಗಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೂ ಆನಂದ್ ಸಿಂಗ್ ಮಾತ್ರ ಸಿಬಿಐ ಕೈಗೆ ಸಿಕ್ಕಿಲ್ಲ.

ರೆಡ್ ಕಾರ್ನರ್ ನೋಟಿಸ್
ಎರಡು ದಿನದಲ್ಲಿ ಆನಂದ್ ಸಿಂಗ್ ದೊರೆಯದಿದ್ದರೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಸಿಬಿಐ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈಗಾಗಲೇ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಆನಂದ್ ಸಿಂಗ್ ಬಂಧನವಾಗುವುದು ಖಚಿತವಾಗಿದೆ.

ಏನಿದು ರೆಡ್ ಕಾರ್ನರ್
ಆನಂದ್ ಸಿಂಗ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಸಿಬಿಐ ವಿಶೇಷ ನ್ಯಾಯಾಲಯದ ಅನುಮತಿ ದೊರೆತಿಲ್ಲ. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಯಾವ ದೇಶದಲ್ಲಿ ಇರುತ್ತಾರೆಯೋ, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್ ಪೋಲ್ ನೆರವಿನೊಂದಿಗೆ ಅರೋಪಿಯನ್ನು ಬಂಧಿಸಿ ದೇಶಕ್ಕೆ ಕರೆ ತರಲಾಗುತ್ತದೆ.

ಆರೋಪವೇನು?
ವೈಷ್ಣವಿ ಮಿನರಲ್ಸ್ನಿಂದ ಅಕ್ರಮವಾಗಿ ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಮಾಡಿದ ಆರೋಪ ಆನಂದ್ ಸಿಂಗ್ ಮೇಲಿದೆ. ಆದ್ದರಿಂದ ಅವರು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಈಗಾಗಲೇ ಅನೇಕ ಬಾರಿ ಆನಂದ್ ಸಿಂಗ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಇದರಿಂದ ಅವರ ಜಾಮೀನು ಅರ್ಜಿ ವಜಾಗೊಂಡಿದೆ.

ಆನಂದ್ ಸಿಂಗ್ ಮಾತ್ರ ಬಾಕಿ
ಈಗಾಗಲೇ ಈ ಪ್ರಕರಣದಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಗಿ ಶಾಸಕ ನಾಗೇಂದ್ರ, ಕಾರವಾರದ ಶಾಸಕ ಸತೀಶ್ ಸೈಲ್ ಬೇಲೇಕೇರಿ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಸದ್ಯ ಸತೀಶ್ ಸೈಲ್ ಪೆರೋಲ್ ಪಡೆದು ಹೊರಗೆ ಬಂದಿದ್ದಾರೆ.ಸದ್ಯ ಆನಂದ್ ಸಿಂಗ್ ಬಂಧನ ಮಾತ್ರ ಬಾಕಿ ಉಳಿದಿದೆ.












Click it and Unblock the Notifications