IMA ಪ್ರಕರಣ; ಕಡೆಗೂ ಪೊಲೀಸ್ ಅಧಿಕಾರಿಗಳ ಮೇಲೆ ಎಫ್ಐಆರ್
ಬೆಂಗಳೂರು, ಫೆಬ್ರವರಿ 4: IMA ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ರಾಜ್ಯದ ಪ್ರಮುಖ ಪೊಲೀಸ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಿದೆ.
ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐವರು ಪೊಲೀಸ್ ಅಧಿಕಾರಿಗಳ ವಿರುದ್ದ ಸಿಬಿಐ ಮಂಗಳವಾರ ಎಫ್ಐಆರ್ ದಾಖಲಿಸಿಕೊಂಡಿದೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಅಜಯ್ ಹಿಲೋರಿ, ಸಿಐಡಿ ಡಿಎಸ್ಪಿ ಇ ಬಿ ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಂ ರಮೇಶ್, ಸಬ್ ಇನ್ಸಪೆಕ್ಟರ್ ಗೌರಿಶಂಕರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಇದಲ್ಲದೆ ಮನ್ಸೂರ್ ಅಲಿಖಾನ್, ಐಎಂಎ ಸಂಸ್ಥೆ ಹಾಗೂ ಇತರೆ ಅಪರಿಚಿತ ನಾಲ್ಕು ಸರ್ಕಾರಿ ಅಧಿಕಾರಿಗಳ ಮೇಲೆ ಎಫ್ಐಆರ್ನ್ನು ಸಿಬಿಐ ದಾಖಲಿಸಿದೆ.

ಸರ್ಕಾರಕ್ಕೆ ಅನುಮತಿ ಕೇಳಿದ್ದ ಸಿಬಿಐ
ಈ ಐದೂ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲು ಸರ್ಕಾರದ ಅನುಮತಿಯನ್ನು ಸಿಬಿಐ ತಂಡ ಪಡೆದುಕೊಂಡಿತ್ತು. ಈ ಮೊದಲು ಎಫ್ಐಆರ್ ದಾಖಲು ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಸಿಬಿಐ ಅನುಮತಿ ಕೇಳಿತ್ತು. IMA ಪ್ರಕರಣದಲ್ಲಿ ಸಿಐಡಿ ಆರ್ಥಿಕ ಅಪರಾಧ ವಿಭಾಗ ಈ ಐವರೂ ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.

ಆರ್ಬಿಐ ಸೂಚನೆ ಉಲ್ಲಂಘನೆ
2 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎನ್ನಲಾದ IMA ಪ್ರಕರಣದಲ್ಲಿ ಪ್ರಮುಖ ಆರೋಪಿ IMA ಮುಖ್ಯಸ್ಥ ಮನ್ಸೂರ್ ಅಲಿಖಾನ್ ಈಗಾಗಲೇ ಸಿಬಿಐ ವಶದಲ್ಲಿದ್ದಾನೆ. IMA ಜನರಿಗೆ ವಂಚನೆ ಮಾಡುತ್ತಿರಬಹುದು, ತನಿಖೆ ನಡೆಸಿ ಎಂದು ಕಮರ್ಷಿಯಲ್ ಸ್ಟ್ರಿಟ್ ಪೊಲೀಸ್ ಠಾಣೆಗೆ ಆರ್ಬಿಐ ಹೇಳಿತ್ತು. ಆದರೆ, ಬೆಂಗಳೂರಿನ ಕೆಲ ಪೊಲೀಸ್ ಅಧಿಕಾರಿಗಳು ಹಣ ಪಡೆದು ಮನ್ಸೂರ್ನನ್ನು ರಕ್ಷಿಸಲು ನೋಡಿದ್ದರು ಎಂಬ ಆರೋಪ ಈ ಪೊಲೀಸ್ ಅಧಿಕಾರಿಗಳ ಮೇಲೆ ಕೇಳಿ ಬಂದಿದೆ.

ಅಧಿಕಾರಿಗಳು ಮೇಲೆ ಇರುವ ಆರೋಪ ಏನು?
ಆರ್ಬಿಐ ಸೂಚನೆಯನ್ನು ನಿರ್ಲಕ್ಷಿಸಿದ್ದ ಆರೋಪ ಕಮರ್ಷಿಯಲ್ ಸ್ಟ್ರಿಟ್ ಪೊಲೀಸ್ ಮೇಲೆ ಹಾಗೂ ಡಿಸಿಪಿ ರಮೇಶ್ ಮೇಲೆ ಕೇಳಿ ಬಂದಿದೆ. ಮನ್ಸೂರ್ ಅಲಿಖಾನ್ ವಿದೇಶಕ್ಕೆ ಪರಾರಿಯಾಗಲು ಸಹಾಯ ಮಾಡಿದ್ದರು ಎಂಬ ಆರೋಪ ಹೇಮಂತ್ ನಿಂಬಾಳ್ಕರ್ ಮೇಲೆ ಇದೆ. ಇನ್ನೊಬ್ಬ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ 25 ಕೆಜಿ ಚಿನ್ನ, ತಿಂಗಳಿಗೆ 1 ಕೋಟಿಯಂತೆ 13 ಕೋಟಿ ನೀಡಲಾಗಿದೆ ಎಂದು ಮನ್ಸೂರ್ ಖಾನ್ ಹೇಳಿದ್ದ.

ಬಿಜೆಪಿ ಸರ್ಕಾರ ಬಂದ ನಂತ ಸಿಬಿಐಗೆ
2019 ರ ಜೂನ್ನಲ್ಲಿ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾದ ಬಳಿಕ ಐಎಂಎ ಹಗರಣ ಬೆಳಕಿಗೆ ಬಂದಿತ್ತು. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತನಿಖೆಯನ್ನು ಎಸ್ಐಟಿಗೆ ವಹಿಸಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತನಿಖೆ ಸಿಬಿಐಗೆ ಹಸ್ತಾಂತರವಾಗಿದೆ.












Click it and Unblock the Notifications