ಜಲಮಂಡಳಿ ಭ್ರಷ್ಟಾಚಾರ ಜಾಲಾಡಿದ ಮುಖ್ಯಮಂತ್ರಿ ಸಿದ್ದು
ಬೆಂಗಳೂರು, ಜೂ. 26: ರಾಜಧಾನಿಗೆ ನೀರು ಪೂರೈಸುವ ಜಲಮಂಡಳಿಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲರಾಗಿದ್ದಾರೆ. 'ಜಲಮಂಡಳಿಯು ಭ್ರಷ್ಟಾಚಾರದ ಕೂಪವಾಗಿದೆ. ಅದಕ್ಕೆ ಮೇಜರ್ ಸರ್ಜರಿ ಮಾಡುತ್ತೇವೆ' ಎಂದು BWSSB ವಿರುದ್ಧ ಸಿದ್ದರಾಮಯ್ಯ ಅವರು ಸದನದಲ್ಲಿ ವೀರಾವೇಶ ತೋರಿದ್ದಾರೆ.
ನೀರಿನ ದರ ಹೆಚ್ಚಳ ಯಾವಾಗ?: ಮಂಡಲಿಯಲ್ಲಿ ಶೇ. 51 ರಷ್ಟು ಹಣ ಮತ್ತು ನೀರು ಮಾತ್ರ ಸದುಪಯೋಗವಾಗುತ್ತಿದೆ. ಮಂಡಳಿಯನ್ನು ಅಧಿಕಾರಿಗಳು ಸಮರ್ಥವಾಗಿ ನಡೆಸಲಾಗದೆ ಅದನ್ನು ನಷ್ಟದ ಬಾಬತ್ತಿಗೆ ತಳ್ಳಿದ್ದಾರೆ. ಆದರೆ ಆ ನಷ್ಟವನ್ನು ಸರಿದೂಗಿಸಲು ಮುಂದಿನ ದಿನಗಳಲ್ಲಿ ನೀರಿನ ದರ ಏರಿಕೆ ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಳೆದ 9 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಮತ್ತೊಂದು ಕಡೆ ಜಲಮಂಡಳಿಯ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಹೀಗಾಗಿ ನೀರಿನ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಮಾಡದೆ ಹೋದರೆ ಮಂಡಳಿ ಸಂಪೂರ್ಣ ನೆಲ ಕಚ್ಚಿ ಹೋಗುತ್ತದೆ ಎಂದು ಮುಖ್ಯಮಂತ್ರಿ ಮಂಡಳಿಯ ಆರ್ಥಿಕ ಚೈತನ್ಯದ ಬಗ್ಗೆ ವಿಶ್ಲೇಷಿಸಿದ್ದಾರೆ.

'ಹೊರ ರಾಜ್ಯಗಳಲ್ಲಿ ಯಾವ ರೀತಿ ನೀರಿನ ದರ ಪರಿಷ್ಕರಣೆ ಮಾಡಲಾಗಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ಅದು ಒಂದು ಅಂತಿಮ ಹಂತಕ್ಕೆ ಬಂದ ನಂತರ ಜಲಮಂಡಳಿ ದರ ಹೆಚ್ಚಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ' ಎಂದು ಸಿಎಂ ಸಿದ್ದು ನೀರಿನ ದರ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. (ಬೆಂಗಳೂರು : ಜೂನ್ ನಲ್ಲಿ ನೀರಿನ ದರ ಏರಿಕೆ ಇಲ್ಲ)
ಸರ್ಕಾರ ಕೆಲವು ಬಿಗಿ ಕ್ರಮ ತೆಗೆದುಕೊಳ್ಳದೆ ಹೋದರೆ ಬೆಂಗಳೂರು ಜಲಮಂಡಳಿ ಮುಚ್ಚಿ ಹೋಗುತ್ತದೆ. ಆದ್ದರಿಂದ ಸರ್ಕಾರ ಮಂಡಳಿಯನ್ನು ಉಳಿಸಬೇಕಾದರೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ. ಜಡ್ಡುಗಟ್ಟಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತೇವೆ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜಲಮಂಡಳಿಯಲ್ಲಿ ಶೇ. 49ರಷ್ಟು ವೆಚ್ಚಗಳಿಗೆ ಲೆಕ್ಕಾನೂ ಇಲ್ಲ, ಪುಸ್ತಕವೂ ಇಲ್ಲ. ಯಾವುದೇ ದಾಖಲೆಗಳನ್ನು ಪಾಲಿಸದೆ ಅದನ್ನು ಅಕ್ರಮ, ಅವ್ಯವಹಾರಗಳ ಕೂಪವನ್ನಾಗಿಸಿದ್ದಾರೆ. ಆದರೆ ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಬದ್ಧವಾಗಿದೆ ಎಂದು ಮಂಡಳಿಯ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.
'ಮಂಡಳಿಯಲ್ಲಿ ಬಹಳಾ ದಿನಗಳಿಂದ ಈ ಅವ್ಯವಹಾರ, ಕಳ್ಳ ವ್ಯವಹಾರ ನಡೆದುಕೊಂಡು ಬಂದಿದೆ. ಇದಕ್ಕೆ ಮೇಜರ್ ಸರ್ಜರಿ ಮಾಡಲೇ ಬೇಕಿದೆ. ಸರ್ಕಾರ ಮಾಡಿಯೇ ಮಾಡುತ್ತದೆ' ಎಂದು ಸಿಎಂ ಸಿದ್ದು ಅವರು ಎಚ್ಚರಿಸಿದರು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತಾರ ಮಾಡಿದ ನಂತರ ಅಕ್ರಮವಾಗಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬುದು ಸರ್ಕಾರದ ಗಮನಕ್ಕೂ ಬಂದಿದೆ. ಅಕ್ರಮವಾಗಿ ಯಾರು ನೀರು ಪಡೆಯುತ್ತಿದ್ದಾರೋ ಅವರನ್ನು ಪತ್ತೆ ಮಾಡಿ ಅವರ ಮನೆಗಳಿಗೆ ಮೀಟರ್ ಹಾಕಿ ಅವರಿಂದ ಕನಿಷ್ಟ ದರ ವಸೂಲಿ ಮಾಡಲಾಗುವುದು.












Click it and Unblock the Notifications