ಹೊಸೂರು ರಸ್ತೆ: ಬಸ್ -ಕಾರು ಡಿಕ್ಕಿಯಾಗಿ ಇಬ್ಬರು ಸಜೀವ ದಹನ
ಬೆಂಗಳೂರು, ಜುಲೈ 22: ಹೊಸೂರು ರಸ್ತೆಯ ಹೆನ್ನಾಗರ ಗೇಟ್ ಬಳಿ ಭಾನುವಾರ ಮುಂಜಾನೆ ಭೀಕರ ದೃಶ್ಯಕ್ಕೆ ಅನೇಕ ಮಂದಿ ಸಾಕ್ಷಿಯಾದರು. ಕಣ್ಮುಂದೆ ಎರಡು ಪ್ರಾಣಗಳು ಬೆಂಕಿಗೆ ಆಹುತಿಯಾದರೂ ಏನು ಮಾಡಲಾಗದೆ ನೊಂದುಕೊಳ್ಳುವಂಥ ಪರಿಸ್ಥಿತಿ ಎದುರಿಸಿದರು. ಬಸ್ -ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಹೊಸೂರು ಕಡೆಗೆ ಹೊರಟ್ಟಿದ್ದ ಕಾರು, ಅತಿ ವೇಗವಾಗಿ ಚಲಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಾರಣ, ಡಿವೈಡರ್ ಗೆ ಗುದ್ದಿದೆ. ನಂತರ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳಿಗೂ ಬೆಂಕಿ ತಗುಲಿದೆ.

ನಾರಾಯಣ ಹೃದಯಾಲಯದಿಂದ ಕೂಗಳತೆ ದೂರದಲ್ಲಿರುವ ಹೆನ್ನಾಗರ ಗೇಟ್ ಸಮೀಪ ಬೆಳಗ್ಗೆ ಸುಮಾರು 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ. ಬೆಂಕಿ ತಗುಲಿಕೊಂಡ ತಕ್ಷಣವೇ ಕಾರಿನಲ್ಲಿದ್ದ ಇಬ್ಬರು, ಕಾರಿನ ಡೋರ್ ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರು ಕೆಳಗಿಳಿದು ನೋಡುವಷ್ಟರಲ್ಲಿ ಬೆಂಕಿ ತೀವ್ರಗೊಂಡು ಕಾರು ಸುಟ್ಟುಕರಕಲಾಗಿದೆ.
ಘಟನಾ ಸ್ಥಳಕ್ಕೆ ಆದಷ್ಟು ಬೇಗ ಬಂದರೂ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಜೀವ ಉಳಿಸಲು ಸಾಧ್ಯವಾಗಿಲ್ಲ. ಬಸ್ ಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಸೂರ್ಯ ಸಿಟಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications