ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ: ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್
ಬೆಂಗಳೂರು ಫೆಬ್ರವರಿ 27: ಕೊರೊನಾ ಸಂಕಷ್ಟದಲ್ಲಿ ಇಂದು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಪ್ರತೀ ವರ್ಷ ಫೆಬ್ರವರಿ 27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಹಾಗೂ ಅವರ ಹಿತೈಶಿಗಳಿಂದ ಆಚರಿಸಲಾಗುತ್ತದೆ.
ಆದರೆ ಕಳೆದೆರೆಡು ವರ್ಷಗಳಿಂದ ಕೊರೊನಾ ಪ್ರಕರಣಗಳನ್ನು ತಗ್ಗಿಸಲು ಜನ ಸೇರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಎಲ್ಲರ ಹಿತದೃಷ್ಟಿಯಿಂದ ಯಡಿಯೂರಪ್ಪ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸದೇ ಇರಲು ತೀರ್ಮಾನಿಸಿದ್ದಾರೆ. ಹೀಗಾಗಿ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕಾರ್ಯಕರ್ತರಿಗೆ ಮತ್ತು ಹಿತೈಶಿಗಳಿಗೆ ಮನವಿ ಮಾಡಿದ್ದಾರೆ.
ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ.
— B.S. Yediyurappa (@BSYBJP) February 26, 2022
"ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ, ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ'' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೀಡಲಾದ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೆಪ್ಟಂಬರ್ನಲ್ಲಿ ನೀಡಲಾಗಿದೆ. ಯಡಿಯೂರಪ್ಪ ಅವರು ಶಾಸಕರಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸುದೀರ್ಘವಾಗಿ ಜನಪರವಾದಂತಹ ಕಾರ್ಯಗಳನ್ನು ಮಾಡಿದ್ದಾರೆ.
ಅಲ್ಲದೆ, ಎಷ್ಟೇ ಕೆಲಸ ಕಾರ್ಯಗಳು ಇದ್ದರೂ ಶಾಸನ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರ ಸೇವೆಯನ್ನು ಗಮನಿಸಿ ಮೊದಲ ಪ್ರಶಸ್ತಿಗೆ ಅವರನ್ನು ಸಮಿತಿಯು ಆಯ್ಕೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿರುವ ಎಸ್.ಜಿ.ಇಂಟರ್ ನ್ಯಾಷನಲ್ ಸ್ಕೂಲ್ ಮುಂಭಾಗದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಹಾಗೂ ಅಂಗವಿಕಲರಿಗೆ ಚಕ್ರವಾಹನ ಗಳನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಎಸ್.ಹರೀಶ್, ರಾಘವೇಂದ್ರ ಶೆಟ್ಟಿ, ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಯಡಿಯೂರಪ್ಪ ನಿವಾಸಕ್ಕೆ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಭೇಟಿ ನೀಡಿದರು. ಸಿಹಿ ತಿನಿಸಿ ಯಡಿಯೂರಪ್ಪಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.












Click it and Unblock the Notifications