ಹಗರಣದ ಆರೋಪ, ವೈಟ್ ಟಾಪಿಂಗ್ಗೆ ಬ್ರೇಕ್ ಹಾಕಿದ ಯಡಿಯೂರಪ್ಪ
ಬೆಂಗಳೂರು, ಆಗಸ್ಟ್ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿ ತನಕ ನಡೆದಿರುವ ವೈಟ್ ಟ್ಯಾಪಿಂಗ್ ಯೋಜನೆಯಲ್ಲಿ ಭಾರಿ ಅವ್ಯವಹಾರ ಕಂಡು ಬಂದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಯೋಜನೆಗೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಹಿಂದಿನ ಸರ್ಕಾರಗಳು ಮಂಜೂರು ಮಾಡಿದ ಎರಡು ಹಂತದ ವೈಟ್ ಟ್ಯಾಪಿಂಗ್ ಯೋಜನೆಯಿಂದ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ಗಳು ಆರೋಪ ಮಾಡಿದ್ದರು.
ವೈಟ್ ಟ್ಯಾಪಿಂಗ್: 2017ರಲ್ಲಿ ಬಿಜೆಪಿ ಮುಖಂಡ ಎನ್ .ಆರ್ ರಮೇಶ್ ಅವರು ಮೊದಲಿಗೆ ವೈಟ್ ಟ್ಯಾಪಿಂಗ್ ಹಗರಣದ ಬಗ್ಗೆ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಕೋರ್ಟಿಗೆ ದೂರು ನೀಡಿದ್ದರು. ಎರಡು ಹಂತದಲ್ಲಿ ಯೋಜನೆಗೆ ಅನುಮತಿ ಸಿಕ್ಕಿದ್ದು, ಸುಮಾರು 1,490 ಕೋಟಿ ರೂ.ಗಳಲ್ಲಿ ಅಂದಾಜು ವೆಚ್ಚದ ವೈಟ್ ಟ್ಯಾಪಿಂಗ್ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಯಡಿಯೂರಪ್ಪ ಸರ್ಕಾರಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಮುಖ್ಯಕಾರ್ಯದರ್ಶಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ವೈಟ್ ಟ್ಯಾಪಿಂಗ್ ಯೋಜನೆಯಡಿ ಎರಡು ಹಂತದಲ್ಲಿ ಕಾಮಗಾರಿಗೆ ಸಿದ್ದರಾಮಯ್ಯ ಸರ್ಕಾರ ಅನುಮತಿ ನೀಡಿತ್ತು. ಪ್ರತಿ ಕಿಲೋ ಮೀಟರ್ ಗೆ 3 ಕೋಟಿ ರು ವೆಚ್ಚ ತಗುಲಲಿದೆ. ಆದರೆ, ಪ್ರತಿ ಕಿ.ಮೀಗೆ 11 ಕೋಟಿ ರು ಬಿಲ್ ತೋರಿಸಲಾಗಿದೆ. ಇದರಿಂದ ಕಾಂಗ್ರೆಸ್ ನಾಯಕರಿಗೆ ಕಿಕ್ ಬ್ಯಾಕ್ ಸಿಕ್ಕಿದೆ ಎಂದು ಆರೋಪಿಸಿದ್ದರು. ಯಡಿಯೂರಪ್ಪ ಅವರ ಆದೇಶದಿಂದಾಗಿ ವೈಟ್ ಟ್ಯಾಪಿಂಗ್ ಮೂರನೇ ಹಂತದ ಯೋಜನೆಗೆ ಬ್ರೇಕ್ ಬೀಳಲಿದೆ.












Click it and Unblock the Notifications