ಪ್ರತಿಭಾ ಹತ್ಯೆ ಪ್ರಕರಣ, ಶಿವಕುಮಾರ್ ಗೆ ಜೀವಾವಧಿ ಶಿಕ್ಷೆ ಕಾಯಂ
ಬೆಂಗಳೂರು, ಮೇ 31: ಬಿಪಿಒ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕ್ಯಾಬ್ ಡ್ರೈವರ್ ಶಿವಕುಮಾರ್ ಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಮಂಗಳವಾರ ಹೈಕೋರ್ಟ್ ಆದೇಶಿಸಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯ ಎಚ್ ಪಿ ಗ್ಲೋಬಲ್ ಸಾಫ್ಟ್ ಸಂಸ್ಥೆ ಉದ್ಯೋಗಿಯಾಗಿದ್ದ ಪ್ರತಿಭಾ ಶ್ರೀಕಂಠಮೂರ್ತಿ(27) ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11ನೇ ತ್ವರಿತಗತಿ ನ್ಯಾಯಾಲಯ 2010ರಲ್ಲಿ ಅಪರಾಧಿ ಕ್ಯಾಬ್ ಡ್ರೈವರ್ ಶಿವಕುಮಾರ್ ಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು. ಈ ಆದೇಶವನ್ನು ಜಸ್ಟೀಸ್ ಎಚ್ ಬಿಲ್ಲಪ್ಪ ಹಾಗೂ ಜಸ್ಟೀಶ್ ಕೆಎನ್ ಫಣೀಂದ್ರ ಅವರಿದ್ದ ನ್ಯಾಯಪೀಠ ಎತ್ತಿ ಹಿಡಿದಿದೆ.[ಪ್ರತಿಭಾ ಕೊಲೆ ಪ್ರಕರಣ: ಕ್ಯಾಬ್ ಡ್ರೈವರ್ ಗೆ ಜೀವಾವಧಿ ಶಿಕ್ಷೆ]

ಪ್ರತಿಭಾ ಅವರು ರಾತ್ರಿಪಾಳಿಗೆ ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕ ಶಿವಕುಮಾರ್ ನಿಂದ 2005ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದರು. 2006ರಲ್ಲಿ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ವೃದ್ಧಜೀವಿ, ಪ್ರತಿಭಾ ಅವರ ತಾಯಿ ಗೌರಮ್ಮ ಅವರು ನ್ಯಾಯ ಸಿಕ್ಕಿರಲಿಲ್ಲ. [ಪ್ರತಿಭಾ ಕೊಲೆಗಡುಕನಿಗೆ ಗಲ್ಲು ವಿಧಿಸಿ: ಸರ್ಕಾರದ ಮೇಲ್ಮನವಿ]
2010ರಲ್ಲಿ ತ್ವರಿತಗತಿ ನ್ಯಾಯಾಲಯದಿಂದ ಗೌರಮ್ಮ ಅವರಿಗೆ ಶುಭ ಸುದ್ದಿ ಸಿಕ್ಕಿತ್ತು. ತ್ವರಿತಗತಿ ನ್ಯಾಯಾಲಯದಲ್ಲಿ ಶಿವಕುಮಾರ್ ತಪ್ಪು ಸಾಬೀತಾಗಿತ್ತು. ಆದರೆ, ಶಿವಕುಮಾರ್ ಪತ್ನಿ ಸುಮಾ ಅವರು ಕೋರ್ಟ್ ಮುಂದೆ ರಂಪಾಟ ಮಾಡಿ ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
'ತೀರ್ಪಿನಿಂದ ಸಮಾಧಾನವಾಗಿದೆ. ಕೊನೆಗೂ ನ್ಯಾಯ ದೊರಕಿದೆ. ಆದರೆ, ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಬಾರದು' ಎಂದು ಪ್ರತಿಭಾ ಅವರ ತಾಯಿ ಗೌರಮ್ಮ(86) ಅವರು ಮನವಿ ಸಲ್ಲಿಸಿದ್ದರು.












Click it and Unblock the Notifications