ನಮ್ಮ ಮೆಟ್ರೋಗೆ ಎರಡು ವರ್ಷದ ಸಂಭ್ರಮ
ಬೆಂಗಳೂರು, ಅ.20: ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಯೋಜನೆ ' ನಮ್ಮ ಮೆಟ್ರೋ', ಕನಸು ಸಾಕಾರಗೊಂಡು ಇಂದಿಗೆ(ಅ.20) ಎರಡು ವರ್ಷ ತುಂಬುತ್ತಿದೆ. ಬೆಂಗಳೂರಿನ ಕನಸಿನ ಸಾರಿಗೆ
ಬಿಎಂಆರ್ ಸಿಎಲ್ ನಮ್ಮ ಮೆಟ್ರೋಗೆ ಎರಡು ವರ್ಷಗಳ ಹಿಂದೆ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲಸಾಥ್ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದ್ದನ್ನು ಈಗ ಸ್ಮರಿಸಬಹುದು.
ನಮ್ಮ ಮೆಟ್ರೋ ಎಂಬ ಹೆಸರಿದ್ದರೂ ಬಿಎಂಆರ್ ಸಿಎಲ್ ಕಂಪನಿ ಮೆಟ್ರೋ ರೈಲುಗಳು ನಮ್ಮ ಕನ್ನಡತನ ಮೆರೆಯುವಲ್ಲಿ ವಿಫಲವಾಗಿವೆ. ಸಾರ್ವಜನಿಕರಿಂದಳು ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಪ್ರಯಾಣ ದರ ದುಬಾರಿ, ಮೆಟ್ರೋ ನಿಲ್ದಾಣದ ಆಸು ಪಾಸು ದೊರೆಯುವ ವಸ್ತುಗಳ ಬೆಲೆ ಹೆಚ್ಚು, ಮೆಟ್ರೋ ಕಾಮಗಾರಿ ದುರಂತಗಳು, ಮೆಟ್ರೋ ನಿಲ್ದಾಣಕ್ಕೆ ಹೆಸರು, ಪರಿಸರ ನಾಶ ಇತ್ಯಾದಿ ಸಮಸ್ಯೆಗಳ ನಡುವೆ ಈಗಲೂ ಮೆಟ್ರೊ ರೈಲು ಸೇವೆಯು ರಸ್ತೆ ದಟ್ಟಣೆಗೆ ಪರಿಹಾರಾತ್ಮಕವಾಗಲಿದೆ ಎಂದು ಬಿಎಂಆರ್ ಸಿಎಲ್ ಹೇಳುತ್ತಿದೆ.
ಆದರೆ ಮೆಟ್ರೋ ಬಂದು ಎರಡು ವರ್ಷವಾದರೂ ಮೆಟ್ರೋ ಮಾರ್ಗದಲ್ಲಿನ ಸಂಚಾರ ದಟ್ಟಣೆ ಮಾತ್ರ ಯಥಾಸ್ಥಿತಿಯಲ್ಲಿದೆ. ಆದರೆ, ಕಚೇರಿಗೆ ಹೋಗುವ ಹಲವಾರು ಮಂದಿ ಕಾರು, ಬೈಕುಗಳನ್ನು ಬಿಟ್ಟು ಮೆಟ್ರೋ ಏರುತ್ತಿದ್ದಾರೆ. ಮೆಟ್ರೋ ಪಕ್ಕದಲ್ಲೇ ಸೈಕಲ್ ಸವಾರರನ್ನು ಹೆಚ್ಚಿಸುವ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಮೆಟ್ರೋ ಎರಡನೇ ಹಂತ ಇನ್ನೂ ಕುಂಟುತ್ತಾ ಸಾಗಿದೆ.ನಮ್ಮ ಮೆಟ್ರೋಗೆ ಹುಟ್ಟುಹಬ್ಬ ಸಂಭ್ರಮದ ನಡುವೆ ಎದ್ದಿರುವ ಕೆಲವು ಪ್ರಶ್ನೆಗಳು ಇಲ್ಲಿವೆ ಓದಿ..

ಕನ್ನಡತನ ಎಲ್ಲಿದೆ?
ಮೆಟ್ರೋ ಆರಂಭವಾದ ಮೊದಲ ದಿನವೇ 900 ಜನ ಸುಖ ಪ್ರಯಾಣ ಕಂಡಿದ್ದರು. ಆದರೆ, ಬಿಎಂಆರ್ ಸಿಎಲ್ ಸಿಬ್ಬಂದಿ ಕನ್ನಡತನ ಮರೆತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ತಮಟೆ ಬಾರಿಸಿ ಎಚ್ಚರಿಕೆ ಮೂಡಿಸಿದ್ದರು.
ಮೆಟ್ರೋ ನಿಲ್ದಾಣದ ಫಲಕಗಳು, ಮೆಟ್ರೋ ಒಳಾಂಗಣ ಎಲ್ಲವೂ ಇನ್ನಷ್ಟು ಕನ್ನಡ ಮಯವಾಗಬೇಕು. ನಿಲ್ದಾಣಗಳಲ್ಲಿ ಕನ್ನಡತನ ಇರಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿವೆ. ಹುಳುಕು ಭಾಷಾ ನೀತಿ ಬಗ್ಗೆ ವಿವರ ಇಲ್ಲಿದೆ

ಮೆಟ್ರೋ ಶಂಕರ್ ಹೆಸರು
ಮೆಟ್ರೋ ರೈಲಿನ ಬಗ್ಗೆ ಸುಮಾರು 20 ವರ್ಷಗಳ ಹಿಂದೆ ಕನಸು ಕಂಡಿದ್ದ ಕನ್ನಡದ ಅದ್ಭುತ ಪ್ರತಿಭೆ ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ಮೆಟ್ರೋ ರೈಲಿಗೆ ಇಡಬೇಕು ಅಥವಾ ಮೆಟ್ರೋ ಸ್ಟೇಷನ್ ಗಳಿಗೆ ಶಂಕರ್ ಹೆಸರಿಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಾ ಬಂದಿದ್ದಾರೆ.
ಈ ಅಧಿಕೃತವಾಗಿ ಯಾವುದೇ ಮನವಿ ಕೈ ಸೇರಿಲ್ಲ. ಸದ್ಯಕ್ಕಂತೂ ಈ ಬಗ್ಗೆ ಚಿಂತಿಸಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಮೆಟ್ರೋ ಅಧಿಕಾರಿಗಳು ಹೇಳಿದ್ದರು.

ಮೊದಲ ಹಂತ
ಮಹಾತ್ಮಾ ಗಾಂಧಿ ರಸ್ತೆಯಿಂದ ಬೈಯ್ಯಪ್ಪನ ಹಳ್ಳಿಗೆ ಕ್ರಮಿಸುವ ಮೊದಲ ಹಂತದ ಯೋಜನೆಗೆ 140 ಕೋಟಿ ರೂ ವೆಚ್ಚವಾಗಿದೆ. 2014ರ ಕೊನೆಗೆ ವೇಳೆಗೆ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಲಿದೆ ಎಂಬ ಆಶಯವಿದೆ. ಎಂಜಿ ರಸ್ತೆಯಿಂದ ಭೈಯಪ್ಪನಹಳ್ಳಿ ಸಂಚಾರ ಮಾರ್ಗ ಸೇರಿದಂತೆ ಮೊದಲ ಹಂತದಲ್ಲಿ 42 ಕಿ.ಮೀ ಮೆಟ್ರೋ ಮಾರ್ಗ ಬರಲಿದೆ.
ಮೊದಲ ಹಂತದಲ್ಲೇ ಸ್ಮಾರ್ಟ್ ಆದ ಮೆಟ್ರೋ : ಶೇ 70 ರಷ್ಟು ಟೋಕನ್ ಟಿಕೆಟ್, ಶೇ 30 ರಷ್ಟು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಸುಮಾರು 65 ಸಾವಿರ ಸ್ಮಾರ್ಟ್ ಕಾರ್ಡ್ ಮಾರಾಟವಾಗಿದೆ. ಪ್ರಯಾಣಿಕರಿಗಾಗಿ ರೈಲಿನಲ್ಲಿ ಉಚಿತ ವೈಫೈ ಸೇವೆ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಸಂಚರಿಸುವ ಟ್ರೇನ್ ನಂ 9 ರಲ್ಲಿ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಎರಡನೇ ಹಂತ
ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತಕ್ಕೆ ಕರ್ನಾಟಕ ಸರ್ಕಾರ ಗ್ರೀನ ಸಿಗ್ನಲ್ ನೀಡಿದೆ.72ಕಿ.ಮೀ ಉದ್ದದ ಈ ಯೋಜನೆ 2017ಕ್ಕೆ ಪೂರ್ಣಗೊಳ್ಳಲಿದ್ದು, 27,000 ಕೋಟಿ ರೂ. ವೆಚ್ಚ ತಗುಲುವುದೆಂದು ಅಂದಾಜಿಸಲಾಗಿದೆ.
ಮೆಟ್ರೋ ಯೋಜನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆಯಿದೆ. ಆದರೆ ಈಗ ಮೊದಲ ಹಂತ ನಿರ್ಮಾಣ ಹಂತದಲ್ಲಿದ್ದು, ಎರಡನೇ ಹಂತಕ್ಕೆ ಕೇಂದ್ರದ ಅನುಮೋದನೆ ಸಿಗಬೇಕಿದೆ. ಎರಡೂ ಹಂತಗಳು ಪೂರ್ಣಗೊಂಡರೆ ಬೆಂಗಳೂರಿನ 114.5 ಕಿ.ಮೀ ಉದ್ದಕ್ಕೆ ನಮ್ಮ ಮೆಟ್ರೋ ವಿಸ್ತರಿಸಲಿದೆ. ಈ ಎರಡೂ ಹಂತ ಮುಗಿದ ಮೇಲಾದರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೂರೆಯಬಹುದು

ಪ್ರಯಾಣ ದರ ಏರಿಕೆ
ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ. 2011ರಲ್ಲಿ ಸೇವೆ ಪ್ರಾರಂಭವಾಗಿದೆ. ಇದುವರೆಗೂ ಈ ಮಾರ್ಗದಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಈ ಮಾರ್ಗದಲ್ಲಿ ಸದ್ಯ 15ರೂ. ಪ್ರಯಾಣದರವಿದೆ.
ಪೀಣ್ಯ-ಸಂಪಿಗೆ ರಸ್ತೆ ಮಾರ್ಗದಲ್ಲಿ ಪ್ರತಿ ಕಿ.ಮೀಗೆ 2.14ರೂ.ನಂತೆ ಪ್ರಯಾಣ ದರ ನಿಗದಿಪಡಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ. ಕನಿಷ್ಠ ಪ್ರಯಾಣದರ 10 ರೂ.ಗಳಾಗಲಿದ್ದು, 22 ರೂ.ವರೆಗೆ ಪ್ರಯಾಣ ದರ ಹೆಚ್ಚಳವಾಗಬಹುದು.

ಪ್ರಯಾಣಿಕರು, ಆದಾಯ ವಿವರ
* ಮೊದಲ ಹಂತದ 6.7 ಕಿ.ಮೀ ಮಾರ್ಗದಲ್ಲಿ ಈ ವರೆಗೂ 1.45 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ.
* ಟಿಕೆಟ್ ಮೂಲಕ 19.78 ಕೋಟಿ ರು ಆದಾಯ ಬಂದಿದೆ.
* ಅ.23,2011ರಂದು ಅತಿ ಎಚ್ಚು 85 ಸಾವಿರ ಜನ ಪ್ರಯಾಣಿಕರು ಸಂಚರಿಸಿದ್ದರು. ಮೇ 12, 2013 ರಲ್ಲಿ 33,731 ಜನ ಪ್ರಯಾಣ ಕಂಡಿದ್ದರು.
* ಒಟ್ಟಾರೆ ದಿನವೊಂದರಲ್ಲಿ ಸರಾಸರಿ 19-20 ಸಾವಿರ ಜನ ಮೆಟ್ರೋ ಬಳಸುತ್ತ್ತಿದ್ದಾರೆ.

ಭರವಸೆ
2006ರಲ್ಲಿ ಪ್ರಾರಂಭವಾದ ನಮ್ಮ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡತಡೆಗಳ ನಡುವೆಯೂ ಐದು ವರ್ಷಗಳ ನಂತರ ಚಾಲನೆ ಪಡೆಯಿತು. ಮಾಜಿ ಸಿಎಂ ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಸುಮಾರು 3 ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟರು. ಮೆಟ್ರೋ ತ್ವರಿತ ಚಾಲನೆಗೆ ಶ್ರಮಿಸಿದರು. ಸದಾನಂದ ಗೌಡರ ಕಾಲದಲ್ಲಿ ಅಂತೂ ಓಡಾಟ ಅರಂಭಗೊಂಡಿತು.
ಸಂಚಾರ ದಟ್ಟಣೆ ನಿವಾರಣೆ ಸಮಸ್ಯೆ ಇನ್ನೂ ಇದ್ದರೂ ತಿಂಗಳಿಗೆ ಸುಮಾರು 2,100 ಮಂದಿ ಕಾರು ಪ್ರಯಾಣಿಕರು ಹಾಗೂ 3,600 ಮಂದಿ ಬೈಕುಸವಾರರು ಮೆಟ್ರೋದತ್ತ ಮುಖ ಮಾಡಿದ್ದಾರೆ ಎಂಬ ಅಂಕಿ ಅಂಶ ಆಶಾದಾಯಕವಾಗಿದೆ

ಮೆಟ್ರೋ ದುರಂತಗಳು-1
* ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನಮಕ್ಕಲ್ ಮೂಲದ ನಟ್ಕಲ್ ಎಂಬ 18 ವರ್ಷದ ನಟ್ಕಲ್ ಯುವಕ ವಿದ್ಯುತ್ ಶಾಕ್ ಗೆ ಬಲಿ. ನವರಂಗ್ ಸಿನಿಮಾ ಮಂದಿರ ಜಂಕ್ಷನ್ ಜೆಸಿಬಿ ಹರಿದು 55 ವರ್ಷದ ಮಹಿಳೆ ಬಲಿ. ಕಾಂಕ್ರೀಟ್ ಮಿಕ್ಸರ್ ಹರಿದು ಪಶ್ಚಿಮ ಬಂಗಾಳದ 19 ವರ್ಷ ವಯಸ್ಸಿನ ವಿಕಾಸ್ ಮಂಡಲ್ ಸಾವು.
* ಜೂ.28, 2013ರಂದು ನಮ್ಮ ಮೆಟ್ರೋ ಕಾಮಗಾರಿಯ ಎರಡು ಪ್ರತ್ಯೇಕ ಪ್ರಕರಣದಲ್ಲಿ, ಒಬ್ಬ ಕಾರ್ಮಿಕ ಮೃತಪಟ್ಟು ನಾಗರೀಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
* ಶ್ರೀರಾಮಪುರ ಬಳಿ ಜೂ.24ರಂದು ಮೆಟ್ರೊ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ರೂಪೇಶ್ ಸಿಂಗ್ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ನಾಲ್ಕು ದಿನ ನೋವು ತಿಂದು ಸಾವನ್ನಪ್ಪಿದ್ದರು.
* ಪೀಣ್ಯ- ಯಶವಂತಪುರ ಮೆಟ್ರೋ ಕಾಮಗಾರಿಗೆ ಒಳಪಡುವ ತುಮಕೂರು ರಸ್ತೆ ಜಾಲಹಳ್ಳಿ ಕ್ರಾಸ್ ಬಳಿ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕ್ರೇನ್ ಕುಸಿದು ಬಿದ್ದು ತಮಿಳುನಾಡಿನ ವಾಣಿಯಂಬಾಡಿ ಮೂಲದ ಗೋವಿಂದರಾಜು ಮೃತಪಟ್ಟಿದ್ದರು.

ಮೆಟ್ರೋ ದುರಂತಗಳು-2
* ಅಂಬೇಡ್ಕರ್ ವೀದಿಯಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ನೆಹರು ಹಾಗೂ ಸುಭಾಷ್ ಚಂದ್ರಬೋಸ್ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ದಲಿತ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಕೂಡಾ ಸುಮ್ಮನಾಗಿತ್ತು.
* ನೂರಾರು ವರ್ಷಗಳಿಂದಲೂ ಇದ್ದ ಅಂಗಡಿಗಳು, ತಲೆತಲಾಂತರದಿಂದ ವಾಸವಿದ್ದ ವಸತಿ ಕಟ್ಟಡಗಳು, ಸದಾ ಹಸಿರಿನಿಂದ ನಳನಳಿಸುತ್ತಿದ್ದ ಗಿಡಮರಗಳು, ಅಲ್ಲಿ ವಾಸವಿದ್ದ ಪಕ್ಷಿ ಜೀವ ಜಂತುಗಳು ಮೆಟ್ರೊ ರೈಲಿಗೆ ಬಲಿಯಾಗಿದೆ. ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಸುರಕ್ಷತೆ ಯಾರು ಹೊಣೆ
ಬಿಎಂಆರ್ ಸಿಎಲ್ ಮೆಟ್ರೋ ಯೋಜನೆ ಕಾಮಗಾರಿ ಸುರಕ್ಷತೆ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇದೆ. ಆದರೆ, ಮೆಟ್ರೋ ಕಾಮಗಾರಿಯಿಂದ ದುರಂತಗಳು ಸಂಭವಿಸುತ್ತಲೇ ಇದೆ
ಕಾರ್ಮಿಕರ ಸುರಕ್ಷತೆ ಬಗ್ಗೆ ಸ್ಯಾಮುಯಲ್ ಸತ್ಯಶೀಲನ್ ಎಂಬುವರ ತಂಡ ಸುಮಾರು ಎರಡು ವರ್ಷ ಅಧ್ಯಯನ ನಡೆಸಿ ವರದಿಯನ್ನು ತೆಗೆದುಕೊಂಡು ಕರ್ನಾಟಕ ಕಾರ್ಮಿಕ ಇಲಾಖೆಗೆ ಸಲ್ಲಿಸಿದೆ. ಆದರೆ, ಯಾವುದೇ ಕ್ರಮ ಜರುಗಿಲ್ಲ.
1970ರ ಗುತ್ತಿಗೆದಾರ ಕಾರ್ಮಿಕ ಕಾಯ್ದೆ, ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ನಿಮಯಗಳನ್ನು ಬಿಎಂಆರ್ ಸಿಎಲ್ ಮೀರಿದೆ ಎಂದು ಎಂದು ಆರ್ ಟಿಐ ಕಾರ್ಯಕರ್ತ ಸತ್ಯಶೀಲನ್ ಹೇಳಿದ್ದಾರೆ.
ಕಾರ್ಮಿಕರ ಜೀವಕ್ಕೆ ಬೆಲೆ ನೀಡಿದೆ ಬಿಎಂಆರ್ ಸಿಎಲ್ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಕಾಮಗಾರಿ ವಿಳಂಬಕ್ಕೂ ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸತ್ಯಶೀಲನ್ ಹೇಳಿದ್ದಾರೆ.












Click it and Unblock the Notifications