ಹೊಸಕೋಟೆ; ಎಂಟಿಬಿ ಮ್ಯಾಜಿಕ್, ಶಾಸಕ ಶರತ್ ಕಂಗಾಲು!
Recommended Video
ಬೆಂಗಳೂರು, ಫೆಬ್ರವರಿ 11: ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಗೆ ಈಗ ದೊಡ್ಡ ಗೆಲುವು ಸಿಕ್ಕಿದೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಮ್ಯಾಜಿಕ್ಗೆ ಪಕ್ಷೇತರ ಶಾಸಕರ ಶರತ್ ಬಚ್ಚೇಗೌಡ ಕಂಗಾಲಾಗಿ ಹೋಗಿದ್ದಾರೆ.
ಮಂಗಳವಾರ ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 31 ವಾರ್ಡ್ಗಳ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಪಡೆದಿದೆ.
ಹೊಸಕೋಟೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ ಗೆಲವು ಸಾಧಿಸಿದ್ದರು. ನಗರಸಭೆ ಚುನಾವಣೆಯಲ್ಲಿಯೂ ಎಲ್ಲಾ ವಾರ್ಡ್ನಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.
ಭಾನುವಾರ ಹೊಸಕೋಟೆ ನಗರಸಭೆ ಚುನಾವಣೆ ನಡೆದಿತ್ತು. ಮಂಗಳವಾರ ಫಲಿತಾಂಶ ಪ್ರಕಟಗೊಂಡಿದ್ದು, ನಗರಸಭೆ ಅಧಿಕಾರ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಪಕ್ಷ ಒಂದು ಸ್ಥಾನ ಗೆಲ್ಲುವಲ್ಲಿಯೂ ವಿಫಲವಾಗಿದ್ದು, ಮುಖಭಂಗ ಅನುಭವಿಸಿದೆ.

ಯಾರಿಗೆ ಎಷ್ಟು ಸ್ಥಾನಗಳು?
ಮಂಗಳವಾರ ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 31 ವಾರ್ಡ್ಗಳ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 22, ಸ್ವಾಭಿಮಾನಿ ಪಕ್ಷ 7, ಎಸ್ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆಯಲು ವಿಫಲವಾಗಿದೆ.

ಸ್ವಾಭಿಮಾನಕ್ಕೆ ಪಕ್ಷದ ರೂಪ ಕೊಟ್ಟಿದ್ದರು
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಗೆದ್ದು ಬೀಗಿದ್ದ ಶರತ್ ಬಚ್ಚೇಗೌಡ ಸ್ವಾಭಿಮಾನಕ್ಕೆ ಪಕ್ಷದ ರೂಪ ಕೊಟ್ಟಿದ್ದರು. ನಗರಸಭೆ 31 ವಾರ್ಡ್ನಲ್ಲಿಯೂ ಕುಕ್ಕರ್ ಚಿಹ್ನೆಯಡಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 7 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.

ಎಂಟಿಬಿ ನಾಗರಾಜ್ ಮ್ಯಾಜಿಕ್
ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋಲು ಕಂಡಿದ್ದ ಎಂಟಿಬಿ ನಾಗರಾಜ್ ನಗರಸಭೆ ಚುನಾವಣೆಯಲ್ಲಿ ತಮ್ಮ ಪ್ರಭಾವ ತೋರಿಸಿದ್ದಾರೆ. ಶಾಸಕ ಶರತ್ ಬಚ್ಚೇಗೌಡಗೆ ತಿರುಗೇಟು ನೀಡಿದ್ದು ನಗರಸಭೆ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಟಿಬಿ ಶಕ್ತಿ ಹೆಚ್ಚಳ
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಸೋತಿದ್ದರು. ಆದ್ದರಿಂದ, ಯಡಿಯೂರಪ್ಪ ಸಂಪುಟ ಸೇರುವ ಅವರ ಆಸೆ ನಿರಾಸೆಯಾಗಿತ್ತು. ಈಗ ನಗರಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ತಮ್ಮ ಪ್ರಭಾವ ತೋರಿಸಿದ್ದು, ಸ್ಥಾನಮಾನ ಕೇಳಲು ಮತ್ತೊಂದು ಕಾರಣ ಸಿಕ್ಕಿದಂತಾಗಿದೆ.












Click it and Unblock the Notifications