ಅನರ್ಹರಿಗೆ ಟಿಕೆಟ್ ಹಂಚಿಕೆ ಗೊಂದಲ: ಅಂತೂ, ಒಂದು ಕ್ಷೇತ್ರದಲ್ಲಿ ಬಿಜೆಪಿ ಸೇಫ್!
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ಪಕ್ಷಕ್ಕೆ ಕೈಕೊಟ್ಟು, ಬಿಜೆಪಿ ಅಧಿಕಾರಕ್ಕೇರಲು ಸಹಾಯ ಮಾಡಿ, ಅನರ್ಹಗೊಂಡ ಅತೃಪ್ತರಿಗೆ, ಬಿಜೆಪಿ ಟಿಕೆಟ್ ನೀಡುವುದೇ? ಕಮಲ ಪಾಳಯದಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿರುವ ಅಂಶವಿದು.
ಪ್ರಮುಖವಾಗಿ, ಕಬ್ಬಿಣದ ಕಡಲೆಯಂತಾಗಿರುವ ಆರು ಕ್ಷೇತ್ರಗಳಲ್ಲಿನ ಟಿಕೆಟ್ ಹಂಚಿಕೆಯಲ್ಲಿನ ಗೊಂದಲ ಸರಿಪಡಿಸಲು ಯಡಿಯೂರಪ್ಪ ಬಹುತೇಕ ವಿಫಲಗೊಂಡರು ಎಂದೇ ಹೇಳಲಾಗುತ್ತಿತ್ತು.
ಯಾಕೆಂದರೆ, ಟಿಕೆಟ್ ಆಕಾಂಕ್ಷಿಗಳು ಯಾವ ಅಫರ್ ಗೂ ಒಪ್ಪದೇ, ತಮ್ಮ ಪಟ್ಟನ್ನು ಮುಂದುವರಿಸಿದ್ದರು. ಇದರ ಜೊತೆಗೆ, ಆಯಾಯ ಕ್ಷೇತ್ರದ ಅನರ್ಹಗೊಂಡ ಮುಖಂಡರೂ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯುತ್ತಿರಲಿಲ್ಲ.
ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಪಕ್ಷದ ಟಿಕೆಟ್ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿದ್ದ, ಒಬ್ಬರು ಮುಖಂಡರನ್ನು, ಯಡಿಯೂರಪ್ಪ, ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತಿದೆ.

ಆರು ಕ್ಷೇತ್ರಗಳಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಹಿರೇಕೆರೂರು, ಮಸ್ಕಿ, ಗೋಕಾಕ, ಹೊಸಕೋಟೆ, ಕೆ. ಆರ್. ಪುರಂ, ಕಾಗವಾಡ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು, ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಈ ಆರು ಕ್ಷೇತ್ರಗಳಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ, ಒಬ್ಬರಿಗೆ ನಿಗಮ ಮಂಡಳಿ ಸ್ಥಾನ ನೀಡಿ, ಸಮಾಧಾನ ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೆ.ಆರ್.ಪುರಂ ಕ್ಷೇತ್ರ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪುರಂ ಕ್ಷೇತ್ರದಿಂದ, ಬೈರತಿ ಬಸವರಾಜ್, ಇಲ್ಲಿಂದ ಗೆದ್ದು, ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಹೋದ ವರ್ಷದ ಚುನಾವಣೆಯಲ್ಲಿ ಬೈರತಿ, ಕಟ್ಟಾ ಸಂಘ ಪರಿವಾರದ ಮುಖಂಡರೂ ಆಗಿರುವ ನಂದೀಶ್ ರೆಡ್ಡಿ ಎದುರು, 32,729 ಮತಗಳ ಅಂತರದಿಂದ ಗೆದ್ದಿದ್ದರು. ನಂದೀಶ್ ರೆಡ್ಡಿ ಇಲ್ಲಿನ ಟಿಕೆಟ್ ಆಕಾಂಕ್ಷಿ. ಇವರನ್ನು ಸಮಾಧಾನ ಪಡಿಸಲು, ಯಡಿಯೂರಪ್ಪ ಹರಸಾಹಸ ಪಡುತ್ತಿದ್ದರು.

ನಂದೀಶ್ ರೆಡ್ಡಿಗೆ, ಬಿಜೆಪಿ ಟಿಕೆಟ್ ಬದಲು ಬಿಎಂಟಿಸಿ ಅಧ್ಯಕ್ಷ ಸ್ಥಾನ
ನಂದೀಶ್ ರೆಡ್ಡಿಗೆ, ಬಿಜೆಪಿ ಟಿಕೆಟ್ ಬದಲು ಬಿಎಂಟಿಸಿಯ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಉಪಾಧ್ಯಕ್ಷ ಸ್ಥಾನದ ಆಫರ್ ಅನ್ನು ನೀಡಲಾಗಿತ್ತು. ಆದರೆ, ಇದಕ್ಕೆ ನಂದೀಶ್ ರೆಡ್ಡಿ ಒಪ್ಪಿರಲಿಲ್ಲ. ಬದಲಿಗೆ, ಟಿಕೆಟ್ ಸಿಗದೇ ಇದ್ದರೆ, ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದು, ಯಡಿಯೂರಪ್ಪನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಸಂಪುಟ ದರ್ಜೆಯ ಸ್ಥಾನಮಾನ
ಈಗ ಬಿಎಂಟಿಸಿಗೆ ಅಧ್ಯಕ್ಷರನ್ನಾಗಿ ನಂದೀಶ್ ರೆಡ್ಡಿಯವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಸಂಪುಟ ದರ್ಜೆಯ ಸ್ಥಾನಮಾನವನ್ನು ನಂದೀಶ್ ಗೆ ನೀಡುವ ಮೂಲಕ, ಅವರ ಸಿಟ್ಟನ್ನು ಶಮನಗೊಳಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ. ಆ ಮೂಲಕ, ಬೈರತಿ ಬಸವರಾಜು, ಕೆ.ಆರ್.ಪುರಂನಿಂದ ಸ್ಪರ್ಧಿಸಿದರೆ, ನಂದೀಶ್ ರೆಡ್ಡಿ ಕಡೆಯಿಂದ ತೊಂದರೆ ಬರಬಾರದು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಅತೃಪ್ತ ಶಾಸಕರಿಗೆ ಟಿಕೆಟ್ ನೀಡಲೇಬೇಕಾದ ಅನಿವಾರ್ಯತೆ
ಅತೃಪ್ತ ಶಾಸಕರಿಗೆ ಟಿಕೆಟ್ ನೀಡಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿಯಿದೆ. ಆದರೆ, ಆಯಾಯ ಕ್ಷೇತ್ರದ ಬಿಜೆಪಿ ಮುಖಂಡರನ್ನು ಸಮಾಧಾನ ಪಡಿಸುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದುಸ್ತರವಾಗುತ್ತಿದೆ. ಈ ನಡುವೆ, ಕೆ.ಆರ್.ಪುರಂ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications