Breaking: ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ಮೊದಲ ಪ್ರತಿಕ್ರಿಯೆ
ಬೆಂಗಳೂರು, ಮೇ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆ ಮತ್ತು ಮೂರನೇ ಅಲೆಗಳ ಭೀತಿಯಲ್ಲಿ ಕರ್ನಾಟಕದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಇದರ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದಿಂದ ಮೊದಲ ಪ್ರತಿಕ್ರಿಯೆ ಹೊರ ಬಿದ್ದಿದೆ.
"ಮುಖ್ಯಮಂತ್ರಿ ಬದಲಿಸುವ ಸಮಯ ಇದಲ್ಲ. ಮೊದಲು ರಾಜ್ಯದ ಜನರನ್ನು ಕೊರೊನಾ ಮುಕ್ತರನ್ನಾಗಿ ಮಾಡೋಣ, ಜನತೆಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ, ಜನ ಸಾಮಾನ್ಯರ ಜೀವನ ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಸೇವೆಯನ್ನು ಮಾಡೋಣ, ಮಾನ್ಯ ಮುಖ್ಯಮಂತ್ರಿಗಳ ಕೈ ಬಲಪಡಿಸೋಣ, ಇದೇ ನಮ್ಮೆಲ್ಲರ ಆದ್ಯತೆ ಆಗಬೇಕು" ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್ ರವಿಕುಮಾರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದವರಿಗೆ ಈಗಾಗಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಡಕ್ ಉತ್ತರ ನೀಡಿದ್ದಾರೆ. ಸದ್ಯಕ್ಕೆ ನನ್ನ ಎದುರಿಗಿರುವ ಸವಾಲು ಕೊರೊನಾವೈರಸ್ ಒಂದೇ. ಸಾಂಕ್ರಾಮಿಕ ಪಿಡುಗಿನ ನಿಯಂತ್ರಣ ಮತ್ತು ನಿರ್ವಹಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಯಿಲ್ಲ:
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಇದುವರೆಗೂ ಯಾವುದೇ ರೀತಿ ಚಿಂತನೆ ನಡೆಸಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೆಲವು ಶಾಸಕರು ಮತ್ತು ಸಚಿವರ ಆಶಯಕ್ಕೆ ದೆಹಲಿಯ ನಾಯಕರು ಸ್ಪಂದಿಸಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದರ ಮಧ್ಯೆ ದೆಹಲಿಗೆ ತೆರಳಿ ವಾಪಸ್ಸಾದ ಸಚಿವ ಸಿ ಪಿ ಯೋಗೀಶ್ವರ್ ವಿರುದ್ಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಣದ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಬದಲಿಸುವ ಸಮಯ ಇದಲ್ಲ. ಮೊದಲು ರಾಜ್ಯದ ಜನರನ್ನು ಕೊರೊನಾ ಮುಕ್ತರನ್ನಾಗಿ ಮಾಡೋಣ, ಜನತೆಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ, ಜನ ಸಾಮಾನ್ಯರ ಜೀವನ ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಸೇವೆಯನ್ನು ಮಾಡೋಣ, ಮಾನ್ಯ ಮುಖ್ಯಮಂತ್ರಿಗಳ ಕೈ ಬಲಪಡಿಸೋಣ, ಇದೇ ನಮ್ಮೆಲ್ಲರ ಆದ್ಯತೆ ಆಗಬೇಕು.@BJP4Karnataka@BSYBJP
— N Ravi Kumar (@nrkbjp) May 27, 2021
ಸಿಎಂ ಕಾರ್ಯವೈಖರಿ ಬಗ್ಗೆ ಅಸಮಾಧಾನ:
"ನಾನು ಒಬ್ಬ ಸಚಿವರಾಗಿದ್ದು, ನನ್ನ ಅಧಿಕಾರವನ್ನು ನನ್ನ ಮಗ ಚಲಾಯಿಸುವುದು ಸರಿಯಲ್ಲ. ನಮ್ಮ ಕಾರ್ಯವ್ಯಾಪ್ತಿಯಲ್ಲಿ ಬೇರೊಬ್ಬರು ಪ್ರವೇಶಿಸುವುದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ" ಎನ್ನುವ ಮೂಲಕ ಮುಖ್ಯಮಂತ್ರಿ ಹಾಗೂ ಸಿಎಂ ಪುತ್ರನ ವಿರುದ್ಧ ಸಚಿವ ಸಿ ಪಿ ಯೋಗೇಶ್ವರ್ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications