Bengaluru 2nd Airport: ನೆಲಮಂಗದಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ; ರೈತರಿಗೆ ಸಾಥ್ ಎಂದ ಶಾಸಕ
Bengaluru 2nd Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್ಗಳನ್ನು ಒಳಗೊಂಡಿದೆ. ಆದರೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು, ನಾಲ್ಕು ಕಡೆ ಸ್ಥಳಗಳನ್ನು ಸಹ ಗುರುತಿಸಲಾಗಿದೆ. ನೆಲಮಂಗಲ ಬಳಿ ಸರ್ವೇ ಕಾರ್ಯಗಳು ನಡೆದಿದೆ ಎಂದು ತಿಳಿದುಬಂದಿತ್ತು.
ನೆಲಮಂಗಲದ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗದ ಸರ್ವೇ ಕಾರ್ಯಗಳು ನಡೆದಿವೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಈ ಭಾಗದ ರೈತರು ಭೂಮಿ ಕಳೆದುಕೊಳ್ಳುವ ಆತಂಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲಮಂಗದಲ್ಲಿ ವಿಮಾನ ನಿಲ್ದಾಣ ಬೇಡವೇ ಬೇಡ, ನಾವು ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇದೀಗ ಕ್ಷೇತ್ರದ ಶಾಸಕ ಇಲ್ಲಿನ ಜನರಿಗೆ ಅಭಯ ನೀಡುವ ಭರವಸೆಯೊಂದನ್ನು ನೀಡಿದ್ದಾರೆ.

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೆಲಮಂಗಲ ಭಾಗದಲ್ಲಿ ಆಗುವುದಿಲ್ಲ. ಈಗಗಾಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಈ ಬಗ್ಗೆ ನನಗೆ ಭರವಸೆ ನೀಡಿದ್ದಾರೆ. ಆದ್ದರಿಂದ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಅಭಯ ನೀಡಿದ್ದಾರೆ.
ತಾಲೂಕಿನ ಸೋಲದೇವನಹಳ್ಳಿ ಸಮೀಪದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ 3 ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಸಭೆ ಉದ್ದೇಶಿಸಿ ಶಾಸಕರು ಮಾತನಾಡಿದರು. ವಿಮಾನ ನಿಲ್ದಾಣ ನಿರ್ಮಾಣದ ಕುರಿತು ನಡೆದ ಅನೇಕ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿದ್ದೇನೆ. ಆಗ ನಮ್ಮ ಕ್ಷೇತ್ರಕ್ಕೆ ವಿಮಾನ ನಿಲ್ದಾಣ ಬೇಡ, ರೈತರಿಗೆ ಅನ್ಯಾಯ ಆಗಲಿದೆ ಎಂದು ಹೇಳಿದ್ದಾರೆ ಎಂದರು.
ಇದಕ್ಕೆ ನಮ್ಮ ಸರ್ಕಾರ ಸ್ಪಂದನೆ ನೀಡಿದ್ದು, ನೆಲಮಂಗಲ ಭಾಗದಲ್ಲಿ ಮಾಡುವುದಿಲ್ಲ ಎಂದು ಭರವಸೆ ನೀಡಿದೆ. ವಿಮಾನ ನಿಲ್ದಾಣ ಆಗುವುದಿಲ್ಲ. ಒಂದು ವೇಳೆ ನಿರ್ಮಾಣದ ಹಂತಕ್ಕೆ ಬಂದರೆ, ನನ್ನ ಶಾಸಕ ಸ್ಥಾನ ಮುಡಿಪಾಗಿಟ್ಟಾದರೂ ಹೋರಾಟ ಮಾಡುತ್ತೇನೆ. ಈಗಾಗಲೇ ಬೆಂಗಳೂರು ದಕ್ಷಿಣ ಭಾಗದ ಕಡೆ ಮಾಡುವ ಚರ್ಚೆಗಳು ಆಗುತ್ತಿವೆ. ಕೆಲವೇ ದಿನಗಳಲ್ಲಿ ಘೋಷಣೆಯಾಗಬಹುದು. ನಮ್ಮ ಕ್ಷೇತ್ರದ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 75ರಿಂದ ಸೋಲದೇವನಹಳ್ಳಿಯವರೆಗೂ ರೈತರು, ರಸ್ತೆ ಪಕ್ಕದ ಮಾಲೀಕರು ಸಹಕರಿಸಿದರೆ ಡಬಲ್ ರಸ್ತೆ ಮಾಡಿಸಲು ನಾನು ಸಿದ್ಧನಿದ್ದೇನೆ. ನೀವು ಸಹಕಾರ ಕೊಟ್ಟರೆ, ನಿಮ್ಮ ಜಮೀನಿಗೆ ಚಿನ್ನದ ಬೆಲೆ ಬರುವಂತೆ ರಸ್ತೆ ಅಭಿವೃದ್ಧಿ ಮಾಡಿಸಲಾಗುತ್ತದೆ ಎಂದರು. ಇನ್ನು ಇದೇ ವೇಳೆ ಚಲನಚಿತ್ರ ನಟ ವಿನೋದ್ ರಾಜ್ ಈ ಬಗ್ಗೆ ಮಾತನಾಡಿದ್ದು, ಶಾಸಕರು ನಮ್ಮ ಜೊತೆಗಿದ್ದಾರೆ. ಯಾವ ಸಮಸ್ಯೆಗಳು ಆಗುವುದಿಲ್ಲ ಎಂಬ ಭರವಸೆ ನಮಗಿದೆ. ನಮ್ಮ ಶಾಸಕರ ಮೇಲೆ ನಮಗೆ ನಂಬಿಕೆಯಿದೆ ಎಂದು ಹೇಳಿದರು.












Click it and Unblock the Notifications