ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ
ಬೆಂಗಳೂರು, ಜು. 13: ಗಂಡನನ್ನು ಕಳೆದುಕೊಂಡ ಪಲ್ಲವಿ ಪಂಡಾ ಮಿಶ್ರಾ ಅವರ ನೋವಿನ ಕಥನ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರಲೇಬೇಕು. ತನ್ನ ಗಂಡನ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪಲ್ಲವಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸುದೀರ್ಘ ಪತ್ರ ಬರೆದುದ್ದು ನೋವನ್ನು ಹೊರಹಾಕಿದ್ದಾರೆ. ಅವರ ಗಂಡನಿಗೆ ಒದಗಿದ ಪರಿಸ್ಥಿತಿಯನ್ನು ನೊಂದ ಮಹಿಳೆಯ ಮಾತುಗಳಲ್ಲೇ ಕೇಳಿ...
ವೈದ್ಯರನ್ನು ಭಾರತೀಯ ಸಂಪ್ರದಾಯ ದೇವರ ಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತಿದೆ. ಆದರೆ ನನ್ನ ಜೀವನದಲ್ಲಿ ಕೆಲ ವೈದ್ಯರೇ ಯಮನಾಗಿ ಬಂದಿದ್ದಾರೆ. ಅವರ ನಿರ್ಲಕ್ಷ್ಯತನ ನನ್ನ ಗಂಡನ ಪ್ರಾಣವನ್ನೇ ಕಿತ್ತುಕೊಂಡಿದೆ.[ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಸಿಲುಕಿದ ಮಗುವಿನ ಕತೆ]

ನಮ್ಮದು ಸುಖಿ ಸಂಸಾರ. ನನ್ನ ಗಂಡ ಗಿರೀಶ್ ಎದೆಯಲ್ಲಿ ಕಂಡು ಬಂದ ಚಿಕ್ಕ ನೋವಿನ ಮೂಲ ಕಂಡು ಹಿಡಿಯಲಾಗದ ವೈದ್ಯರು ನನ್ನನ್ನು ಇಂದು ಬೀದಿಗೆ ತಂದು ನಿಲ್ಲಿಸಿದ್ದಾರೆ.
ಕಳೆದ ತಿಂಗಳ 13 ನೇ ತಾರೀಕಿನಂದು ನಮ್ಮ ಆರು ತಿಂಗಳ ಮಗುವಿನೊಂದಿಗೆ ಆಡುತ್ತಿದ್ದ ಗಿರೀಶ್ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಅವರ ಸ್ನಾಯುಗಳು ಬಿಗಿತಗೊಂಡಿವೆ. ಉಸಿರಾಟದಲ್ಲಿಯೂ ಸ್ಚಲ್ಪ ತೊಂದರೆ ಕಂಡುಬಂದಿದೆ. ಬಿಟಿಎಂ ಲೇಔಟ್ ನಿವಾಸಿಗಳಾದ ನಾವು ಗಿರೀಶ್ ಅವರನ್ನು ನಮ್ಮ ಮನೆ ಸಮೀಪವೇ ಇದ್ದ ಗಂಗೋತ್ರಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

ವಿವಿಧ ಪರೀಕ್ಷೆ ಮಾಡಿದ ವೈದ್ಯರು ಅವರನ್ನು ಅಡ್ಮಿಟ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಪ್ರಮುಖ ಡಾಕ್ಟರ್ ಕೆ ಎನ್ ಎನ್ ಪೈ ಪರೀಕ್ಷೆ ಮಾಡಿ ಅಂಥ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಹೊರಹೋಗಿದ್ದಾರೆ. ಆದಿನ ರಾತ್ರಿ ನಾವು ಆಸ್ಪತ್ರೆಯಲ್ಲೇ ಕಳೆದಿದ್ದು ಗಿರೀಶ್ ಉಸಿರಾಟ ಸಮಸ್ಯೆ ಆಗುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದರು.
ಇದರಿಂದ ಗಾಬರಿಗೊಂಡ ನಾನು ರಾತ್ರಿ ಪಾಳಿ ಜವಾಬ್ದಾರಿ ಹೊತ್ತಿದ್ದ ಡಾಕ್ಟರ್ ಬಳಿ ತೆರಳಿ ಸಮಸ್ಯೆ ಹೇಳಿದ್ದೇನೆ. ಎಲ್ಲ ಚೆನ್ನಾಗಿದೆ ಎಂದು ಆ ವೈದ್ಯರು ಒಂದೆರಡು ನೋವಿನ ಮಾತ್ರೆ ಮತ್ತು ನಿದ್ರೆ ಮಾತ್ರೆ ನೀಡಿ ಕಳುಹಿಸಿದ್ದಾರೆ. [ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]
ಮರುದಿನ ಬೆಳಗ್ಗೆ 10 ಗಂಟೆಗೆ ಆಗಮಿಸಿದ ಪೈ ಗಿರೀಶ್ ಹೇಗಿದ್ದೀರಿ ಎಂದು ವಿಚಾರಿಸಿದ್ದಾರೆ. ನೋವಿನ ಮಾತ್ರೆ ತೆಗೆದುಕೊಂಡ ಮೇಲೆ ಸ್ವಲ್ಪ ಪರವಾಗಿಲ್ಲ ಎಂಬ ಉತ್ತರ ನೀಡಿದ್ದಾರೆ.
ಇವತ್ತು ನಿಮ್ಮನ್ನು ಡಿಸ್ ಚಾರ್ಜ್ ಮಾಡುತ್ತೇವೆ. ಎರಡು ಮೂರು ದಿನ ವಿಶ್ರಾಂತಿ ಪಡೆದರೆ ಎಲ್ಲ ಸರಿಹೋಗುತ್ತದೆ ಎಂದು ಹೇಳಿ ಕೆಲ ಆಂಟಿಬಯಾಟಿಕ್ ಮತ್ತು ನೋವು ನಿವಾರಕ ಮಾತ್ರೆಗಳನ್ನು ನೀಡಿ ಕಳಿಸಿದ್ದಾರೆ. ಅದರಂತೆ ಜೂನ್ 14 ರ ಮಧ್ಯಾಹ್ನ 2 ಗಂಟೆಗೆ ನಾವು ಗಿರೀಶ್ ಅವರನ್ನು ಕರೆದುಕೊಂಡು ಮನೆ ತಲುಪಿದ್ದೇವೆ.
ಮನೆಗೆ ಬಂದ ಮೇಲೆ ಗಿರೀಶ್ ಪ್ರತಿದಿನ ಉಸಿರಾಟ ಸಮಸ್ಯೆ ಮತ್ತು ಜ್ವರ ಅನುಭವಿಸತೊಡಗಿದರು. ಜೂನ್ 17 ರಂದು ಗಿರೀಶ್ ಅವರನ್ನು ಮತ್ತೆ ಗಂಗೋತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ತೆರಳಿದೆವು.
ಆದರೆ ವೈದ್ಯರಾದ ಕೆ ಎನ್ ಎನ್ ಪೈ ನೋಂದಣಿ ಇಲ್ಲದೇ ರೋಗಿಯನ್ನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಿಮ್ಮ ಆಸ್ಪತ್ರೆಯಲ್ಲೇ ನನ್ನ ಗಂಡ ಅಡ್ಮಿಟ್ ಆಗಿದ್ದರು ಎಂದು ನಾನು ಹೇಳಿದೆ. ನೀವು ಬೇರೆ ವೈದ್ಯರೊಂದಿಗೆ ಮಾತನಾಡಿ ಎಂದು ಹೇಳಿ ಅಲ್ಲಿಂದ ತೆರಳಿದರು. ಮತ್ತೊಮ್ಮೆ ರಕ್ತ ಪರೀಕ್ಷೆ ಮಾಡಲಾಯಿತು. ಅದರ ರಿಪೋರ್ಟ್ ನಲ್ಲಿ ಕೆಲ ಪ್ರಮಾಣದ ಇನ್ ಫೆಕ್ಷನ್ ಪತ್ತೆಯಾಯಿತು. ಹಳೆಯ ವರದಿಗಳನ್ನು ಮತ್ತೆ ಪರಿಶೀಲನೆ ಮಾಡಲಾಯಿತು.
ಈ ವೇಳೆಗೆ ಪರೀಕ್ಷೆಗೆ ಸೂಚನೆ ನೀಡಿದ್ದ ಜನರಲ್ ಫಿಸಿಷಿಯನ್ ಡಾ. ರಾಖಿ ಹೊರಗೆ ಹೋದರು. ಅವರ ಬದಲು ಜುನ್ 13 ರಂದು ರಾತ್ರಿ ನೋವು ನಿವಾರಕ ಮಾತ್ರೆ ನೀಡಿದ್ದ ವೈದ್ಯರು ಆಗಮಿಸಿದರು. ಎಲ್ಲ ವರದಿಗಳನ್ನು ನೋಡಿ ಯಾವ ಸಮಸ್ಯೆಯಿಲ್ಲ ಎಂದು ಹೇಳಿದರು. ಕೆಲ ಹೈ ಡೋಜ್ ಆಂಟಿಬಯಾಟಿಕ್ ಮಾತ್ರೆ ಮತ್ತು ನಿದ್ರೆ ಮಾತ್ರೆಗಳನ್ನು ನೀಡಿದರು. ಊಟವಾದ ನಂತರ ನಾವು ಗಿರೀಶ್ ಅವರಿಗೆ ಆ ಮಾತ್ರೆ ನೀಡಿದೆವು. ಆದರೆ ಅಂದು ರಾತ್ರಿ ಗಿರೀಶ್ ಗೆ ಒಂದು ನಿಮಿಷವೂ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.
ಮರುದಿನ ಅಂದರೆ ಜೂನ್ 18 ರಂದು ಬೆಳಗ್ಗೆ ನನ್ನ ತಮ್ಮನ ಸಹಾಯದಿಂದ ಗಿರೀಶ್ ಅವರನ್ನು ಇಂದಿರಾ ನಗರದ ಕ್ಲಿನಿಕ್ ವೊಂದಕ್ಕೆ ಕರೆದುಕೊಂಡು ಹೋದೆವು. ಗಿರೀಶ್ ಅವರ ಇಸಿಜಿ ವರದಿಗಳನ್ನು ನೋಡಿದ ಅಲ್ಲಿನ ವೈದ್ಯರು ಬೆಚ್ಚಿಬಿದ್ದಿದ್ದರು. ಜುನ್ 13 ರಂದೇ ಗಿರೀಶ್ ಅವರಿಗೆ ಸಣ್ಣದಾಗಿ ಹೃದಯಾಘಾತ ಆಗಿತ್ತು ಎಂಬ ಸಂಗತಿ ತಿಳಿದುಬಂತು. ನಮಗೆ ಆ ಸಂದರ್ಭದಲ್ಲಿ ಮಾತೇ ಹೊರಡಲಿಲ್ಲ.
ತಕ್ಷಣ ನೀವು ಚಿನ್ಮಯ ಮಿಷಿನ್ ಆಸ್ಪತ್ರೆಗೆ ಗಿರೀಶ್ ಅವರನ್ನು ಕರೆದುಕೊಂಡು ಹೋಗಿ ಎಂದು ಸೂಚನೆ ನೀಡಿದರು. ಗಿರೀಶ್ ಅವರನ್ನು ಕರೆತಂದಿದ್ದು ತುಂಬಾ ತಡವಾಗಿದೆ, ನಾವು ನಮ್ಮ ಕೈಯಲ್ಲಾದ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ ಚಿನ್ಮಯ ಮಷಿನ್ ವೈದ್ಯರು ಆಂಜಿಯೊಪ್ಲಾಸ್ಟಿ ಮಾಡಿದರು. ಇದಾದ ಎರಡು ಗಂಟೆ ನಂತರ ಗಿರೀಶ್ ಆರೋಗ್ಯದಲ್ಲಿ ತೀವ್ರ ಏರುಪೇರಾಯಿತು. ಅದೇ ದಿನ ರಾತ್ರಿ 11 ಗಂಟೆಗೆ ಗಿರೀಶ್ ಅವರ ಪ್ರಾಣ ಹಾರಿಹೋಗಿತ್ತು.[ಹೃದಯದ ಆರೋಗ್ಯಕ್ಕೆ ಅಕ್ಕಪಕ್ಕದವರನ್ನು ಪ್ರೀತಿಸಿ]
ಹೃದಯದ ಸಮೀಪ್ ರಕ್ತನಾಳ ಶೇ. 100 ಬ್ಲಾಕ್ ಆದ್ದರಿಂದ ರಕ್ತ ಸಂಚಾರದಲ್ಲಿ ಏರುಪೇರಾಗಿ ಹೃದಯಾಘಾತವಾಗಿತ್ತು. ಸರಿಯಾದ ಚಿಕಿತ್ಸೆ ಸಿಗದ ಕಾರಣ ಸಮೀಪದ ಜೀವಕೋಶಗಳು ಸಾವನ್ನಪ್ಪಿದ್ದವು. ಆಂಜಿಯೋಪ್ಲಾಸ್ಟಿ ಮೂಲಕ ಬ್ಲಾಕ್ ಸರಿಪಡಿಸಿದಾಗ ಸತ್ತ ಜೀವಕೋಶ ರಕ್ತ ಪಡೆದುಕೊಳ್ಳಲಿಲ್ಲ. ಇದು ಅವರನ್ನು ಸಾವಿನ ದವಡೆಗೆ ತಳ್ಳಿತು.
ನಿಮ್ಮ ಮನೆಯಲ್ಲಿ ಯಾರಿಗಾದರೂ ಎದೆ ನೋವು ಕಾಣಿಸಿಕೊಂಡರೆ ಸರಿಯಾದ ವೈದ್ಯರ ಬಳಿ ತೋರಿಸಿ. ಅದು ಹೃದಯಾಘಾತವೂ ಆಗಿರಬಹುದು. ನೀವೆಲ್ಲರೂ ನನ್ನ ದೂರಿಗೆ ಬೆಂಬಲ ನೀಡುತ್ತೀರಿ ಎಂದು ಅಂದಿಕೊಂಡಿದ್ದೇನೆ. ರೋಗಿಗಳ ಜೀವದ ಜತೆ ಆಟವಾಡುವ ವೈದ್ಯರಿಗೆ ತಕ್ಕ ಶಿಕ್ಷೆಯಾಗಬೇಕು...
ಪತ್ರಕ್ಕೆ ನೀವು ಬೆಂಬಲ ಸೂಚಿಸಬಹುದು












Click it and Unblock the Notifications