ಜಯನಗರದಲ್ಲಿ ಪಾದಚಾರಿ ವರ್ತಕರ ಒಕ್ಕಲೆಬ್ಬಿಸಿದ ಬಿಬಿಎಂಪಿ
ಬೆಂಗಳೂರು,ನವೆಂಬರ್, 21 : 'ನಾವು ಪ್ರತಿ ತಿಂಗಳು ಬಾಡಿಗೆ, ತೆರಿಗೆ ಕಟ್ತೇವೆ, ನಿರಂತರ ಸುರಿಯುತ್ತಿರುವ ಮಳೆಯಿಂದ ವ್ಯಾಪಾರ ಬೇರೆ ಆಗ್ತಿಲ್ಲ. ವಸ್ತುಗಳನ್ನು ಹೊರಗೆ ಇಟ್ಟರೆ ಮಾತ್ರ ವ್ಯಾಪಾರ, ಗಬ್ಬು ನಾರುತ್ತಿರುವ ಬೆಂಗಳೂರನ್ನು ಸ್ವಚ್ಛ ಮಾಡೋದು ಬಿಟ್ಟು, ಮುಗ್ದರ ಮೇಲೆ ತಮ್ಮ ಪ್ರತಾಪ ತೋರಿಸಿದ್ದಾರೆ'.
ಹೌದು..ಈ ಆಕ್ರೋಶದ ಮಾತುಗಳು ಕೇಳಿ ಬಂದದ್ದು ಬಿಬಿಎಂಪಿ ಅಧಿಕಾರಿಗಳ ಹಾಗೂ ಸದಸ್ಯರ ದಿಢೀರ್ ದಾಳಿಗೆ ಒಳಗಾದ ಜಯನಗರ 4ನೇ ಹಂತದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ವರ್ತಕರಿಂದ. ಬಿಬಿಎಂಪಿ ಅಧಿಕಾರಿಗಳಿಂದ ಶನಿವಾರ ಮಧ್ಯಾಹ್ನ ಸುಮಾರು 12.30 ಗಂಟೆಗೆ ಏಕಾಏಕಿ ದಾಳಿಯ ತೊಂದರೆಗೆ ಒಳಗಾದರು. ಕೆಲಕಾಲ ಏನಾಗುತ್ತಿದೆ ಎಂದೇ ಅಂಗಡಿ ಮಾಲೀಕರು, ಜನರು ತಿಳಿಯದಾದರು.
ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯೆ ಗಾಯಿತ್ರಿ (ವಾರ್ಡ್ ನಂ.122), ಜಂಟಿ ಆಯುಕ್ತ ಕೆ. ಮಥಾಯಿ, ಬಿಬಿಎಂಪಿ ಸದಸ್ಯರು ಸೇರಿದಂತೆ 20 ರಿಂದ 30 ಮಂದಿ, ಯಾವುದೇ ನೋಟಿಸ್ ಕೊಡದೆ ತಕ್ಷಣ ಲಾರಿಗಳೊಂದಿಗೆ ಆಗಮಿಸಿ ಅಂಗಡಿ ಮುಂದಿನ ಸಾಮಾನುಗಳನ್ನು ಹೊತ್ತೊಯ್ದಿದ್ದು, ಇನ್ನು ಮುಂದೆ ರಸ್ತೆ ಬದಿಯಲ್ಲಿ ಮಾರಾಟ ಮಾಡಿದರೆ ವಸ್ತುಗಳನ್ನು ಜಪ್ತಿ ಮಾಡಲಾಗುವುದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಆದೇಶ ನೀಡಿದ್ದಾರೆ.[ಜಯನಗರ ರಣಧೀರ ಕಂಠೀರವ ಪಾರ್ಕ್ ವಿಶೇಷತೆಗಳು]

ಬಿಬಿಎಂಪಿ ಅಧಿಕಾರಿಗಳ ದಿಢೀರ್ ದಾಳಿಗೆ ಅಂಗಡಿ ಮಾಲೀಕರು, ವರ್ತಕರು ಏನೆನ್ನುತ್ತಾರೆ?
ಚಪ್ಪಲಿ ಮಾರಾಟ ಮಳಿಗೆ ಮಾಲೀಕರಾದ ಫಜಿಲ್ ಪಾಷಾ
ನಾವು ಪ್ರತಿ ತಿಂಗಳು ತಪ್ಪದೇ ತೆರಿಗೆ ಕಟ್ಟುತ್ತೇವೆ. ಬಿಬಿಎಂಪಿ ಸದಸ್ಯರು ನಮಗೆ ನೋಟೀಸ್ ಕೊಡದೆ ಏಕಾಏಕಿ ರೌಡಿಗಳ ರೀತಿಯಲ್ಲಿ ದಾಳಿ ಮಾಡಿದ್ದಾರೆ. ಮಳೆಯ ಕಾರಣದಿಂದ ವ್ಯಾಪಾರವಾಗುತ್ತಿಲ್ಲ ಎಂದ ಬೇಸರದಲ್ಲಿ ನಾವಿದ್ದರೆ, ಇವರು ದಾಳಿ ನಡೆಸಿ ಹಲವಾರು ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಅಮಾಯಕರ ಮೇಲೆ ಈ ರೀತಿ ವರ್ತಿಸಿರುವುದು ಸರಿಯಿಲ್ಲ ಎಂದು ಚಪ್ಪಲಿ ಮಾರಾಟ ಮಳಿಗೆ ಮಾಲೀಕರಾದ ಫಜಿಲ್ ಪಾಷಾ ಬಿಬಿಎಂಪಿ ಸದಸ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಯಿ ಹ್ಯಾಂಡ್ ಲೂಮ್ ಅಂಗಡಿ ಮಾಲೀಕ ಸಿ. ಮುರುಗೇಶ್
ನೋಡಿ ಮೇಡಂ ಅವರು ಏಕಾಏಕಿ ದಾಳಿ ನಡೆಸಿದ್ದಾರೆ. ನಮಗೆ ಯಾವುದೇ ಮಾತನಾಡಲು ಅವಕಾಶವೇ ಕೊಟ್ಟಿಲ್ಲ. ಸರಿಯಾಗಿ ಮಾತನಾಡುವ ತಾಳ್ಮೆಯನ್ನು ಅವರು ವ್ಯಕ್ತಪಡಿಸಿಲ್ಲ. ನಮಗೆ ಅಂಗಡಿ ಒಳಗೆ ವ್ಯಾಪಾರ ಆಗುವುದಕ್ಕಿಂತ ಹೆಚ್ಚಾಗಿ, ಅಂಗಡಿ ಮುಂಭಾಗದಲ್ಲಿ ಇಟ್ಟರೆ ವ್ಯಾಪಾರ ಆಗುತ್ತದೆ. ಎಂದೂ ಕೇಳದ ಇವರು ಇಂದು ಏಕಾಏಕಿ ದಾಳಿ ನಡೆಸಿದರೆ ನಾವೇನು ಮಾಡಬೇಕು? ಎಂದು ದಾಳಿಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಕಿಲ್ಲರ್ ಬಟ್ಟೆ ಅಂಗಡಿ ಮಾಲೀಕ ಶಾಹೀದ್
ಬೆಂಗಳೂರಿನಲ್ಲಿ ಕಸ, ಟ್ರಾಫಿಕ್ ಸಮಸ್ಯೆ ಎಂದು ಜನ ಪ್ರತಿನಿತ್ಯ ಒದ್ದಾಡುತ್ತಿದ್ದಾರೆ. ದಾಳಿಗಾಗಿ ತಂದಿರುವ ಲಾರಿಗಳನ್ನು ಬೆಂಗಳೂರಿನ ಕಸ ತೆಗೆಯಲು ಬಳಸಿದರೆ ಇಷ್ಟೊತ್ತಿಗೆ ಬೆಂಗಳೂರು ನಗರ ಸ್ವಚ್ಛವಾಗಿರುತ್ತಿತ್ತು. ಮುಗ್ದರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications