ನೋಡಿದಲ್ಲಿ ಟ್ರಾಫಿಕ್ ಜಾಮ್, ಗಬ್ಬು ನೆತ್ತಿಗೇರಿಸುವ ಕಸ!
ಬೆಂಗಳೂರು, ನವೆಂಬರ್ 21 : ಬೆಂಗಳೂರಿನಲ್ಲಿರುವವರ, ಉದ್ಯಾನ ನಗರಿಗೆ ಬಂದುಹೋಗಿ ಮಾಡುವವರ ಗೊಣಗಾಟ ಒಂದೇ. "ಬೆಂಗಳೂರು ವೆದರೇನೋ ಚೆನ್ನಾಗಿದೆ, ಆದರೆ ಇಲ್ಲಿಯ ಟ್ರಾಫಿಕ್ಕು... ಯಪ್ಪಾ!" ಎಲ್ಲಿ ನೋಡಿದಲ್ಲಿ ಟ್ರಾಫಿಕ್ ಜಾಮ್, ಗಬ್ಬು ನೆತ್ತಿಗೇರಿಸುವ ಕಸ!
ಇದು ಸತ್ಯಸ್ಯ ಸತ್ಯ. ಬೆಂಗಳೂರಿನ ಕಿತ್ತುಹೋದ ರಸ್ತೆಗಳು ವಾಹನ ಚಾಲಕರ ಪಾಲಿಗೆ, ನಾಗರಿಕರ ಪಾಲಿಗೆ ಅಕ್ಷರಶಃ ನರಕ ಸೃಷ್ಟಿಸಿವೆ. ಇನ್ನು ಒಂದು ಸಣ್ಣ ಮಳೆ ಬಂದಾಗ ಸಂಭವಿಸುವ ವಾಹನ ದಟ್ಟಣೆ ನಾವು ಹೊರಟಿದ್ದೆಲ್ಲಿಗೆ ಎಂಬುದನ್ನು ಮರೆಯುವಂತೆ ಮಾಡುತ್ತದೆ.
ಸೇಂಟ್ ಜೋಸೆಫ್ ಕಾಲೇಜಿನ ಬಳಿ ರೆಸಿಡೆನ್ಸಿ ರಸ್ತೆಯಲ್ಲಿ ತಿಂಗಳ ಹಿಂದೆ ಅಗೆದಿರುವ ಪಾದಚಾರಿ ರಸ್ತೆಯನ್ನು ಇನ್ನೂ ದುರಸ್ತಿ ಪಡಿಸಿರದ ಕಾರಣ ಡಬಲ್ ರಸ್ತೆಯಿಂದ ಮಹಾತ್ಮಾ ಗಾಂಧಿ ರಸ್ತೆಯವರೆಗೆ ವಾಹನಗಳು ಮಂದೆ ಹೋಗಲಾರದಂತೆ ನಿಂತಿರುವುದು ದಿನನಿತ್ಯದ ದೃಶ್ಯವಾಗಿದೆ. [ಬೆಂಗಳೂರು ಇನ್ನು ಎರಡು ದಿನ ಥಂಡಾ ಥಂಢಾ]

ಇನ್ನು ಏರ್ಪೋರ್ಟ್ ರಸ್ತೆಯ ಕಥೆ ವಿಭಿನ್ನವಾಗಿಲ್ಲ. ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಹೆಬ್ಬಾಳ ಮೇಲ್ಸೇತುವೆಯಿಂದ ಕೃಷಿ ವಿಶ್ವವಿದ್ಯಾಲಯದವರೆಗೆ ಗಂಟೆಗಟ್ಟಲೆ ವಾಹನಗಳು ನಿರಶನ ಹೂಡಿದ್ದವು.
ಯಾರೋ ವಿಮಾನ ಹತ್ತುವ ತರಾತುರಿಯಲ್ಲಿರುತ್ತಾರೆ, ಮತ್ತೊಬ್ಬರು ರೈಲು ಹಿಡಿಯಬೇಕೆಂಬ ಭರದಲ್ಲಿ ಆಟೋ ಹತ್ತಿರುತ್ತಾರೆ, ಉದ್ಯೋಗಿ ಏಕಾಂಗಿಯಾಗಿ ಕಾರಿನಲ್ಲಿ ಕುಳಿತುಕೊಂಡು ಹಾರನ್ ಹಾಕುತ್ತಲೇ ಇರುತ್ತಾನೆ, ಆಟೋ ಚಾಲಕ ಸಿಕ್ಕ ಜಾಗದಲ್ಲಿ ನುಗ್ಗುತ್ತಿರುತ್ತಾನೆ. ಗಂಟೆ ಕಳೆದರೂ ವಾಹನ ಅರ್ಧ ಕಿಲೋಮೀಟರ್ ದಾಟಿರುವುದಿಲ್ಲ. ಇನ್ನು ಆಂಬ್ಯುಲೆನ್ಸ್ ನಲ್ಲಿ ಬಂದ ರೋಗಿಯನ್ನು ದೇವರೇ ಕಾಪಾಡಬೇಕು!
Can't believe this! There is nothing called a good road in Bengaluru. pic.twitter.com/FTvhbCwzq3
— Vasant Shetty (@vasantshetty81) November 21, 2015 ಟ್ವಿಟ್ಟರಲ್ಲಿ ಪ್ರಕಟಿಸಲಾಗಿರುವ ಒಂದು ಚಿತ್ರ ಬೆಂಗಳೂರಿನ ರಸ್ತೆಗಳ ದುರವಸ್ಥೆಗೆ ಹಿಡಿದ ಕನ್ನಡಿಯಂತಿದೆ. ರಸ್ತೆಯ ಮಧ್ಯದಲ್ಲಿ ತೆರೆದುಕೊಂಡಿರುವ ಬೃಹತ್ ಹೊಂಡದಲ್ಲಿ ದೊಡ್ಡ ಲಾರಿಯೊಂದು ಸಮಾಧಿಯಾಗಿದೆ. ದೊಡ್ಡ ವಾಹನಗಳ ಪಾಡೇ ಈರೀತಿಯಾಗಿರಬೇಕಾದರೆ, ಚಿಕ್ಕ ವಾಹನ ಸವಾರರ ಗತಿಯೇನು?
ರಸ್ತೆಗಳ ಸ್ಥಿತಿ ಈರೀತಿಯದ್ದಾಗಿದ್ದರೆ ರಸ್ತೆತುಂಬ ಚೆಲ್ಲಾಪಿಲ್ಲಿಯಾಗಿರುವ ಕಸ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ಬೆಂಗಳೂರಿನ ಕಂಡಕಂಡಲ್ಲಿ ಕಸ ವಿಲೇವಾರಿಯಾಗದೆ ರಸ್ತೆಗಳನ್ನು ಆವರಿಸಿಕೊಂಡಿರುವ ದೃಶ್ಯ ಕಣ್ಣಿಗೆ, ಮೂಗಿಗೆ ರಾಚುತ್ತಿದೆ. ಇದರಲ್ಲಿ ನಾಗರಿಕರ ಪಾತ್ರ ಕೂಡ ದೊಡ್ಡದಿದೆ ಎಂದು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. [ಸಚಿವರು ಬಂದರು, ಆಡಳಿತ ಬದಲಾತು: ಕಸ ಹಾಗೇ ಉಳಿತು]

ಹನುಮಂತನಗರ, ಶ್ರೀನಗರ, ಗಿರಿನಗರಗಳಂತ ಸುಶಿಕ್ಷಿತರು ಇರುವಂಥ ಬಡಾವಣೆಗಳಲ್ಲಿ ಕೂಡ ಪಾದಚಾರಿ ರಸ್ತೆಯನ್ನು ಮೀರಿ ಕಸ ರಸ್ತೆಯ ಮೇಲೆಲ್ಲ ಚೆಲ್ಲಾಡಿವೆ. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ಜವಾಬ್ದಾರಿಯನ್ನು ಕಸ ಒಯ್ಯುವವರಿಗೇ ನಾಗರಿಕರು ಬಿಟ್ಟಿರುವುದರಿಂದ ಈ ಸಮಸ್ಯೆ ಉಲ್ಬಣವಾಗುತ್ತಿದೆ.
ಬೆಂಗಳೂರು ನಗರ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ಕೆಜೆ ಜಾರ್ಜ್ ಅವರೇ ಈ ಸಮಸ್ಯೆಗಳಿಗೆ ಪರಿಹಾರ ಏನಂತ ಹೇಳಿ? ರಸ್ತೆ ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚುತ್ತಿರುವ ಬಿಬಿಎಂಪಿ ಅಧಿಕಾರಿಗಳ ಕತ್ತಿಗೆ ಗಂಟೆ ಕಟ್ಟುವವರಾರು?












Click it and Unblock the Notifications