634 ಬಾರಿ ಸಂಚಾರ ನಿಯಮ ಉಲ್ಲಂಘನೆ: ₹3.25 ಲಕ್ಷ ದಂಡ, ದ್ವಿಚಕ್ರ ವಾಹನ ವಶ ಪಡೆದ ಬೆಂಗಳೂರು ಪೊಲೀಸರು
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಡಲು ಸ್ವಯಂಚಾಲಿತ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾರೇ ನಿಯಮ ಉಲ್ಲಂಘಿಸಿದರೂ ಅದು ದಾಖಲಾಗುತ್ತದೆ, ವಾಹನ ಸಂಖ್ಯೆಯ ಮೇಲೆ ದಂಡ ವಿಧಿಸಲಾಗುತ್ತದೆ.
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನವೊಂದು ಬರೋಬ್ಬರಿ 634 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು, 3.25 ಲಕ್ಷ ರೂಪಾಯಿ ಮೊತ್ತದ ದಂಡವನ್ನು ಬಾಕಿ ಉಳಿಸಿಕೊಂಡಿತ್ತು. ಸೋಮವಾರ ರಾತ್ರಿ ಈ ವಾಹನವನ್ನು ಬೆಂಗಳೂರು ಸಂಚಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

3.25 ಲಕ್ಷ ರೂ. ದಂಡ ಬಾಕಿ ಇದ್ದ ಟಿವಿಎಸ್ ಸ್ಕೂಟಿ ಪೆಪ್ + ಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು ಮತ್ತು ಅಂತಿಮವಾಗಿ ಆರ್ಟಿ ನಗರ ಸಂಚಾರ ಪೊಲೀಸರು ಅದನ್ನು ಪತ್ತೆಹಚ್ಚಿದ್ದು ವಶಕ್ಕೆ ಪಡೆದುಕೊಂಡಿದ್ದಾರೆ.
2 ವರ್ಷದ ಹಿಂದೆ ಖರೀದಿಸಿದ್ದ ವಾಹನ
ವಾಹನದ ಮಾಲೀಕರನ್ನು ಗಂಗಾನಗರ ನಿವಾಸಿ ಮಾಲಾ ದಿನೇಶ್ ಎಂದು ಗುರುತಿಸಲಾಗಿದೆ. ಅವರ ಪತಿ ದಿನೇಶ್ ಸ್ಮಶಾನದಲ್ಲಿ ಕೆಲಸ ಮಾಡುವವರು ಎಂದು ಪೊಲೀಸರು ತಿಳಿಸಿದ್ದಾರೆ. 2021ರಲ್ಲಿ ಹೊಸ ಸ್ಕೂಟರ್ ಖರೀದಿ ಮಾಡಲಾಗಿತ್ತು, 2 ವರ್ಷಗಳಲ್ಲೇ ಅವರು 634 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ಎಲ್ಲಾ ಉಲ್ಲಂಘನೆಗಳು ಹೆಲ್ಮೆಟ್ ಧರಿಸದಿದ್ದಕ್ಕಾಗಿ ಎಂದು ಹೇಳಲಾಗಿದೆ.
ಹೊಸ ದ್ವಿಚಕ್ರ ವಾಹನ ಖರೀದಿ ಮಾಡಲು ಸುಮಾರು 80-90 ಸಾವಿರ ರೂ. ಖರ್ಚು ಮಾಡಿದ್ದರೆ, ಈಗ ಅದರ ನಾಲ್ಕು ಪಟ್ಟು ದಂಡ ಕಟ್ಟಬೇಕಾಗಿದೆ. ಸಂಪೂರ್ಣವಾಗಿ ದಂಡವನ್ನು ಪಾವತಿಸಿದ ನಂತರವೇ ವಾಹನ ಬಿಡುಗಡೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಎಐ ಕ್ಯಾಮೆರಾ ವಿಧಿಸಿದ ಎಚ್ಚರಿಕೆ!
ಎಐ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತವೆ, ಪ್ರತಿ ಬಾರಿ ಕ್ಯಾಮೆರಾ ಮುಂದೆ ಸಂಚಾರ ನಿಯಮ ಉಲ್ಲಂಘನೆಯಾದಾಗ ಪ್ರತ್ಯೇಕವಾಗಿ ರೆಕಾರ್ಡ್ ಮಾಡುತ್ತವೆ. ಒಂದೇ ವಾಹನ ಒಂದು ಸಿಗ್ನಲ್ನಲ್ಲಿ ಎರಡು ಮೂರು ಬಾರಿ ನಿಯಮ ಉಲ್ಲಂಘಿಸಿದರೆ ಹೊಸ ಹೊಸ ಚಲನ್ಗಳನ್ನು ನೀಡಲಾಗುತ್ತದೆ, ಅದಕ್ಕಾಗಿಯೇ ಇಷ್ಟು ಕಡಿಮೆ ಅವಧಿಯಲ್ಲಿ ಅಷ್ಟು ದೊಡ್ಡ ಮೊತ್ತದ ದಂಡ ಕಟ್ಟಬೇಕಾಗಿದೆ.
ಮತ್ತೊಂದು ಪ್ರಕರಣದಲ್ಲಿ 1.3 ಲಕ್ಷ ರೂಪಾಯಿ ದಂಡ
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ 255 ಸಂಚಾರ ನಿಯಮ ಉಲ್ಲಂಘಿಸಿ 1.3 ಲಕ್ಷ ರೂಪಾಯಿ ದಂಡ ವಿಧಿಸಿದ ಸ್ಕೂಟರ್ ಅನ್ನು ಜಯನಗರ ಸಂಚಾರ ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನದ ಮಾಲೀಕರಿಗೆ 10,000 ರೂ.ಗಳನ್ನು ಸ್ಪಾಟ್ ಫೈನ್ ಪಾವತಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರು ಮತ್ತು ಉಳಿದ ಮೊತ್ತವನ್ನು ಕಟ್ಟಲು ಕಾಲಾವಾಕಶ ನೀಡಿದ್ದಾರೆ.
ಸುಜುಕಿ ಆಕ್ಸೆಸ್ (ಸ್ಕೂಟರ್) ಜೆಪಿ ನಗರದ ನಿವಾಸಿ ಮತ್ತು ವೃತ್ತಿಯಲ್ಲಿ ಟೈಲರ್ ಆಗಿರುವ ಏಳುಮಲೈ ಅವರಿಗೆ ಸೇರಿದೆ. ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ (ಟಿಎಂಸಿ) ಹೆಚ್ಚಿನ ಸಂಖ್ಯೆಯ ಸಂಚಾರ ನಿಯಮಗಳ ಉಲ್ಲಂಘನೆ ಹೊಂದಿರುವ ವಾಹನಗಳ ಪಟ್ಟಿಯನ್ನು ನಗರದಾದ್ಯಂತ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದು, ಅಂತಹ ವಾಹನಗಳನ್ನು ಪತ್ತೆಹಚ್ಚಲು ಮತ್ತು ದಂಡವನ್ನು ವಸೂಲಿ ಮಾಡುವಂತೆ ಸಿಬ್ಬಂದಿಗೆ ಕೇಳಿದೆ.
ಮಹಾದೇವ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೆಬಲ್ ರವಿಕುಮಾರ್ ಅವರು ಸ್ಕೂಟರ್ ನೋಂದಣಿ ವಿವರಗಳ ಆಧಾರದ ಮೇಲೆ ಏಳುಮಲೈ ಅವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಪ್ರಕರಣಗಳ ಸಂಖ್ಯೆ ಮತ್ತು ದಂಡದ ಮೊತ್ತದ ಬಗ್ಗೆ ಮಾಹಿತಿ ನೀಡದೆ, ಪೊಲೀಸರು ಸ್ಕೂಟರ್ ಅನ್ನು ಠಾಣೆಗೆ ತರಲು ಹೇಳಿದರು.
ಏಳುಮಲೈ ಠಾಣೆಗೆ ಭೇಟಿ ನೀಡಿದಾಗ, ಪೊಲೀಸರು ತಮ್ಮ ವಾಹನದ ವಿರುದ್ಧ ದಾಖಲಾದ ಉಲ್ಲಂಘನೆಗಳ ಸಂಖ್ಯೆ ಮತ್ತು ದಂಡದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದು, ಟೈಲರ್ ಆಘಾತಕ್ಕೊಳಗಾಗಿದ್ದಾರೆ. ಏಳುಮಲೈ ಅವರು ಭಾರೀ ದಂಡವನ್ನು ಪಾವತಿಸುವ ಬದಲು ಹೊಸದನ್ನು ಖರೀದಿಸಬಹುದು ಎಂದು ಭಾವಿಸಿ ಸ್ಕೂಟರ್ ಅನ್ನು ಪೊಲೀಸ್ ಕಸ್ಟಡಿಯಲ್ಲಿ ಬಿಡಲು ಸಿದ್ಧರಾಗಿದ್ದರು.
"ಸ್ಕೂಟರ್ ಮೂರು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದನ್ನು ಮಾರಾಟ ಮಾಡಿದರೂ 40,000 ರೂಪಾಯಿಗಳನ್ನು ಸಿಗಬಹುದು ಎಂದು ಅಂದುಕೊಂಡಿದ್ದರು, ಕಾನೂನು ಆತನಿಗೆ ವಾಹನವನ್ನು ಒಪ್ಪಿಸಲು ಅನುಮತಿಸುವುದಿಲ್ಲ ಎಂದು ನಾವು ವಿವರಿಸಿದ್ದೇವೆ ಮತ್ತು ಅವರು ದಂಡವನ್ನು ತೆರವುಗೊಳಿಸದ ಹೊರತು ಅದನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ನಿರೀಕ್ಷಿತ ಖರೀದಿದಾರರು ಉಲ್ಲಂಘನೆಗಳನ್ನು ಪರಿಶೀಲಿಸುತ್ತಾರೆ" ಎಂದು ಪೊಲೀಸರು ಹೇಳಿದ್ದಾರೆ.
ಜಯನಗರ ಸಂಚಾರ ಪೊಲೀಸರ ಪ್ರಕಾರ, ಎಲುಮಲೈ ಸಾರಕ್ಕಿ ಜಂಕ್ಷನ್ ಬಳಿ ತಂಗಿದ್ದಾರೆ. ಅವರ ಮನೆಯ ಸಮೀಪವೇ ಮತ್ತೊಂದು ಜಂಕ್ಷನ್ ಇದ್ದು, ಅದರಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾ ಇದೆ. ಪ್ರತಿ ಬಾರಿಯೂ ಏಳುಮಲೈ ಅವರ ಮಗ ಹೆಲ್ಮೆಟ್ ಧರಿಸದೆ, ಮೊಬೈಲ್ ಫೋನ್ ಬಳಸುತ್ತಾ, ಟ್ರಿಪಲ್ ಸವಾರಿ ಮಾಡುವಾಗ ಅಥವಾ ಸಿಗ್ನಲ್ ಜಂಪ್ ಮಾಡಿ ಜಂಕ್ಷನ್ ಅನ್ನು ದಾಟಿದಾಗ, ಕ್ಯಾಮೆರಾ ಉಲ್ಲಂಘನೆಯನ್ನು ಸೆರೆಹಿಡಿದಿದೆ.
20 ಉಲ್ಲಂಘನೆಗಳಿಗಾಗಿ ರೂ 10,000 ದಂಡವನ್ನು ಪಾವತಿಸಿದ ನಂತರ ಏಳುಮಲೈ ಅವರನ್ನು ವಾಹನದೊಂದಿಗೆ ಬಿಡಲಾಯಿತು. ಅವರ ಪತ್ನಿ ಮನೆಯ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಪೊಲೀಸರ ಪ್ರಕಾರ ಆಕೆ ತನ್ನ ಸಂಪಾದನೆಯಿಂದ ಮಗನಿಗೆ ಸ್ಕೂಟರ್ ಖರೀದಿಸಿದ್ದಳು.












Click it and Unblock the Notifications