ಖದೀಮರಿಂದ 40 ಲಕ್ಷ ರು. ಮೌಲ್ಯದ ಕದ್ದ ಡೀಸೆಲ್ ವಶ
ಬೆಂಗಳೂರು, ನವೆಂಬರ್ 03 : ಪೆಟ್ರೋಲ್ ಟ್ಯಾಂಕರ್ ವಾಹನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗದ ವಂಚನೆ ಮತ್ತು ದುರುಪಯೋಗ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರಂ ಪೊಲೀಸ್ ಠಾಣೆ ಸರಹದ್ದು ಮೆಡಹಳ್ಳಿ ಗಾಯತ್ರಿ ಟಿಂಬರ್ ಯಾರ್ಡ್ ಹಿಂಭಾಗದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕಳ್ಳತನ ಮಾರಾಟ ಮಾಡುತ್ತಿದ್ದಾಗ ಗುರುವಾರ ಅವರನ್ನು ಬಂಧಿಸಲಾಗಿದೆ. ಅವರು ಕಳ್ಳತನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತ ದೊರೆತ ನಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ಹೊಸಕೋಟೆಯ ವೆಂಕಟನಾದಯ್ಯ ಅಲಿಯಾಸ್ ಕುಳ್ಳಯ್ಯ (30), ಹಾಸನದ ಗುರುರಾಜ್ ಅಲಿಯಾಸ್ ಜವರೇಗೌಡ (37), ಬೆಂಗಳೂರಿನ ಗೋವಿಂದರಾಜು ಅಲಿಯಾಸ್ ವೆಂಕಟೇಶುಲು (41), ಹಾಸನದ ಮಲ್ಲೇಶ್ ಅಲಿಯಾಸ್ ನಂಜಯ್ಯ (35) ಎಂದು ಗುರುತಿಸಲಾಗಿದೆ. ಮಂಜುನಾಥ್ ಎಂಬುವವನು ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ 40,80,000 ರುಪಾಯಿ ಬೆಲೆ ಬಾಳುವ 60 ಸಾವಿರ ಲೀಟರ್ ಡೀಸೆಲ್, 3 ಟ್ಯಾಂಕರ್ ಗಳು, ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಆರ್ ಪುರಂ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಆರೋಪಿಗಳು ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ದೇವನಗೊಂದಿಯ ಐ.ಓ.ಸಿ.ಎಲ್. ಕೇಂದ್ರದಿಂದ ಪೆಟ್ರೋಲ್/ಡೀಸೆಲ್ನ್ನು ಟ್ಯಾಂಕರ್ಗೆ ತುಂಬಿಸಿಕೊಂಡು, ಪೆಟ್ರೋಲ್ ಬಂಕ್ಗಳಿಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಬಿಸಿಲಿನಿಂದ ಎಷ್ಟು ಪ್ರಮಾಣದಲ್ಲಿ ಪೆಟ್ರೋಲ್/ಡೀಸೆಲ್ ಆವಿಯಾಗಬಹದು ಎಂಬುದನ್ನು ಅಂದಾಜಿಸಿಕೊಂಡು, ಅಷ್ಟು ಪ್ರಮಾಣದ ಇಂಧನವನ್ನು ನಕಲಿ ಮಾಸ್ಟರ್ ಕೀ ಬಳಸಿ ಟ್ಯಾಂಕರ್ಗಳಿಂದ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ.