Bengaluru Mysuru Expressway: ಇದು ಎಕ್ಸ್ಪ್ರೆಸ್ ವೇ ಅಲ್ಲ: NHAI ನೀಡಿದ ಸ್ಪಷ್ಟನೆ, ವ್ಯಾತ್ಯಾಸ ತಿಳಿಯಿರಿ
ಬೆಂಗಳೂರು, ಆಗಸ್ಟ್ 04: ಆಟೋ, ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ, ಟ್ರ್ಯಾಕ್ಟರ್ ಗಳಿಗೆ ಪ್ರವೇಶ ನಿರ್ಬಂಧಿಸಿದ ಬೆಂಗಳೂರು-ಮೈಸೂರು ರಸ್ತೆಯು ಎಕ್ಸ್ಪ್ರೆಸ್ ವೇ ಅಲ್ಲ. ಇದು ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದೆ (National highway) ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಮಾಹಿತಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
ಈ ಮೂದಲು ಎಕ್ಸ್ಪ್ರೆಸ್ ವೇ ಎನ್ನಲಾಗುತ್ತಿದ್ದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ನ ವೇಗ 100 ಕಿಮೀಗೆ ಇಳಿಸಲಾಯಿತು. ಅದರ ಬೆನ್ನಲ್ಲೆ ಆಟೋ, ದ್ವಿಚಕ್ರ ವಾಹನಗಳ ನಿರ್ಬಂಧ ವಿಧಿಸಿದ್ದನ್ನು ಸಾರ್ವಜನಿಕವಾಗಿ ಪ್ರಶ್ನೆ ಮಾಡಲಾಯಿತು. ಈ ಸಂಬಂಧ ಪ್ರತಿಕ್ರಿಯಿಸಿದ ಹೆದ್ದಾರಿ ಪ್ರಾಧಿಕಾರ ಇದು ಎಕ್ಸ್ಪ್ರೆಸ್ವೇ ಅಲ್ಲ. ಇದು ಗಂಟೆಗೆ 100 ಕಿಮೀ ವೇಗದ ಮಿತಿಯೊಂದಿಗೆ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಯಾಗಿದೆ. ಎಕ್ಸ್ಪ್ರೆಸ್ ಆಗಿರಲು ಗರಿಷ್ಠ ವೇಗ ಗಂಟೆಗೆ 120 ಕಿಮೀ ಇರಬೇಕಿದೆ ಎಂದು ಸ್ಪಷ್ಟಪಡಿಸಿದೆ.

ರಸ್ತೆ ಅಪಘಾತಗಳನ್ನು ತಡೆಯಲು ಬೈಕ್ ಸವಾರರಿಗೆ ದಂಡು ವಿಧಿಸುವ ಕ್ರಮ ಜಾರಿಯಾದ ಬೆನ್ನಲ್ಲೆ ಈ ಮಾಹಿತಿ ಹೊರ ಬಿದ್ದಿದೆ. ಹೆದ್ದಾರಿಯನ್ನು 100 kmph ಗರಿಷ್ಠ ವೇಗ ಮಿತಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಸೌಕರ್ಯ ಎಕ್ಸ್ಪ್ರೆಸ್ವೇ ಗೆ ಹೋಲುವಂತಿದೆ. ಹೀಗಾಗಿ ಜನರು ಇದನ್ನು ಎಕ್ಸ್ಪ್ರೆಸ್ ವೇ ಎಂದು ಕರೆಯುತ್ತಿರಬಹುದು. ಆದರೆ
ಪ್ರವೇಶ-ನಿಯಂತ್ರಿತ ಹೆದ್ದಾರಿಗೆ ಅನ್ವಯವಾಗುವಂತೆ ಸಂಬಂಧಿಸಿದ ಅಧಿಕಾರಿಗಳು ವೇಗದ ಮಿತಿ ಜಾರಿಗೊಳಿಸಿದ್ದಾರೆ.
ಎಕ್ಸ್ಪ್ರೆಸ್ ವೇ vs ಪ್ರವೇಶ ನಿಯಂತ್ರಿತ ಹೆದ್ದಾರಿ ವಿವರಿಸಿದ NHAI
ಆಟೋಗಳು, ಬೈಕ್ ಸೇರಿದಂತೆ ಇನ್ನಿತರ ವಾಹನಗಳಿಗೆ ವೇಗದ ಮಿತಿ 80mph ವರೆಗೆ ಇರಲಿದೆ. ಹೀಗಾಗಿ ಅವುಗಳನ್ನು ಈ ಹೆದ್ದಾರಿಯಲ್ಲಿ ಪ್ರವೇಶಿಸದಂತೆ ನಿಷೇಧಿ ಆದೇಶ ಹೊರಡಿಸಲಾಗಿದೆ. ಬೇರೆ ವಾಹನಗಳು ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುವುದರಿಂದ ಅಪಘಾತವಾಗದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದೇವೆ ಎಂದು NHAI ಪ್ರಾದೇಶಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಕ್ಸ್ಪ್ರೆಸ್ವೇ ನಲ್ಲಿ ವಾಹನಗಳು ಗಂಟೆಗೆ ಗರಿಷ್ಠ 120 ಕಿಮೀ ವೇಗದಲ್ಲಿ ಚಲಿಸುತ್ತವೆ. ಹೀಗಾಗಿ ಅಲ್ಲಿನ ರಸ್ತೆಗಳು ಹೆಚ್ಚು ವಿಶಾಲವಾಗಿರುತ್ತವೆ. ಈ ವ್ಯವಸ್ಥೆ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ನಲ್ಲಿ ಇಲ್ಲ ಎಂದರು.
ಇದೇ ವರ್ಷ ಕಳೆದ ಮಾರ್ಚ್ 13 ರಂದು ಪ್ರಧಾನಮಂತ್ರಿಗಳ ಟ್ವಿಟರ್ ಹ್ಯಾಂಡಲ್ನಲ್ಲಿ ಬೆಂಗಳೂರು- ಮೈಸೂರು ಮಧ್ಯೆ ಹೊಸ ರಸ್ತೆಯನ್ನು ಬಳಕೆಗೆ ಮುಕ್ತಗೊಳಿಸುವ ದಿನ ಮುನ್ನಾ ದಿನ 'ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ' ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಪೋಸ್ಟ್ ಮಾಡಲಾಗಿತ್ತು. ಅವರಷ್ಟೇ ಅಲ್ಲದೇ ನಿತಿನ್ ಗಡ್ಕರಿ ಅವರು ಸಹ ಕೆಲವು ಬಾರಿ ಎಕ್ಸ್ಪ್ರೆಸ್ ವೇ ಎಂದಿದ್ದನ್ನು ಕಾಣಬಹುದಾಗಿದೆ.
ಜಾಹೀರಾತುಗಳಲ್ಲಿ ಎಕ್ಸ್ಪ್ರೆಸ್ ವೇ ಅಂತಲೇ ಬಳಕೆ
ಇನ್ನೂ ಹೆದ್ದಾರಿ ಉದ್ಘಾಟನಾ ಸಮಾರಂಭ ಸಂದರ್ಭಗಳಲ್ಲಿ ಅಂದು ಅಧಿಕಾರದಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರವು ಜಾಹೀರಾತುಗಳನ್ನು ಪ್ರಕಟಿಸಿತ್ತು. ಅದರಲ್ಲೂ ಸಹ ಎಕ್ಸ್ಪ್ರೆಸ್ವೇ ಅಂತಲೇ ಉಲ್ಲೇಖಿಸಲಾಗಿತ್ತು.
ಸದ್ಯ ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ದಂಡ ವಿಧಿಸಲು ಪೊಲೀಸರು AI ಆಧಾರಿತ ಕ್ಯಾಮೆರಾ, ಇಂಟರ್ಸೆಪ್ಟರ್ಗಳನ್ನು ಬಳಸುತ್ತಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಕೂಡ ಹೊಸ ಆರು ಪಥಗಳ ಬೆಂಗಳೂರು-ಮೈಸೂರು ರಸ್ತೆ ಎಕ್ಸ್ಪ್ರೆಸ್ವೇ ಅಲ್ಲ ಎಂದು ತಿಳಿಸಿದ್ದರು.












Click it and Unblock the Notifications