ಗ್ರಾಮೀಣ ಮಕ್ಕಳ ವಾಕ್- ಶ್ರವಣ ಸಮಸ್ಯೆಗೆ ಇಲ್ಲಿದೆ ಪರಿಹಾರ
ಬೆಂಗಳೂರು, ಮಾ.4: ವಾಕ್ ಹಾಗೂ ಶ್ರವಣ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗಲು ಮೊಬೈಲ್ ಕ್ಲಿನಿಕ್ ಬಸ್ ಆರಂಭಗೊಂಡಿದೆ.
ಡಾ.ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಹಾಗೂ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್(ಎಲ್ ಸಿಐಎಫ್) ವತಿಯಿಂದ ಪ್ರಪ್ರಥಮ ಬಾರಿಗೆ ಈ ರೀತಿ ಒಂದು ಸೌಲಭ್ಯ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುತ್ತಿದೆ.
ಡಾ.ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ನ ಚೇರ್ಮನ್ ಡಾ. ಎಂಎಸ್ ವೆಂಕಟೇಶ್ ಮಾತನಾಡಿ, ಈ ರೀತಿ ಬಸ್ ಸೌಲಭ್ಯ ದೇಶದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಸಮಸ್ಯೆ ದೂರವಾಗುವುದಲ್ಲದೆ ಎಲ್ಲರಂತೆ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಮಾತನಾಡುವಾಗ ತೊದಲುವಿಕೆ, ಕಿವಿ ಕೇಳಿಸದಿರುವುದು ಮುಂತಾದ ಸರಳ ಸಮಸ್ಯೆಯಿಂದ ಹಿಡಿದು ವಾಕ್ ಹಾಗೂ ಶ್ರವಣ ದೋಷವುಳ್ಳ ಮಕ್ಕಳಿಗೆ ಸಮಸ್ಯೆ ಲಕ್ಷಣಗಳನ್ನು ಅರಂಭದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸಲು ಈ ಮೊಬೈಲ್ ವಾಹನ ನೆರವಾಗಲಿದೆ.
ಬಸ್ ನಲ್ಲಿ ಏನಿದೆ?: ಈ ಬಸ್ ನಲ್ಲಿ ಕ್ಲಿನಿಕಲ್ ಆಡಿಯೋಮೀಟರ್, ವಾಕ್ ಶ್ರವಣ ಶಕ್ತಿ ಅಳೆಯುವ ಮಾಪಕಗಳು, ಉಪಕರಣಗಳಿವೆ. ನವಜಾತ ಶಿಶುವಿನಿಂದ ಹಿಡಿದು ಬಾಲಕ-ಕಿಯರಿಗೆ ಉಂಟಾಗುವ ವಾಕ್-ಶ್ರವಣ ಸಮಸ್ಯೆಯನ್ನು ಪರಿಶೀಲಿಸಿ ಚಿಕಿತ್ಸೆ ನೀಡುವ ನುರಿತ ತಜ್ಞರ ತಂಡವಿರುತ್ತದೆ.
ಸಮಸ್ಯೆ ಬಗ್ಗೆ ಅರಿವಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಗ್ರಾಮೀಣ ಭಾಗದ ಜನತೆಗೆ ಸರಿಯಾದ ಮಾರ್ಗದರ್ಶನ ನೀಡುವುದು, ಹಿಯರಿಂಗ್ ಸಾಧನಗಳು ರಿಯಾಯಿತಿ ದರದಲ್ಲಿ ನೀಡುವುದು ಇವೆ ಮುಂತಾದ ಕಾರ್ಯದಲ್ಲಿ ಡಾ.ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಹಾಗೂ ಲಯನ್ಸ್ ಕ್ಲಬ್ ತೊಡಗಿದೆ.
ಸುಮಾರು 100,000 ಯುಎಸ್ ಡಾಲರ್ ದೇಣಿಗೆ ಈ ಯೋಜನೆಯಲ್ಲಿ ತೊಡಗಿಸಲಾಗಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕಾಗಿ ಲಯನ್ಸ್ ಕ್ಲಬ್ ಹೇಳಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ.ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್
ಹೆಣ್ಣೂರು ಮುಖ್ಯ ರಸ್ತೆ,
ಲಿಂಗರಾಜಪುರ
ಬೆಂಗಳೂರು- 560 084
ದೂರವಾಣಿ: 080 2546 0405
ಸಂದರ್ಶನ ಸಮಯ: ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್ ತಾಣವನ್ನು ವೀಕ್ಷಿಸಬಹುದು
ಒನ್ ಇಂಡಿಯಾ ಸುದ್ದಿ












Click it and Unblock the Notifications