Bengaluru Weather: ನಗರದಲ್ಲಿ ಮಂಗಳವಾರ ಮಳೆಯ ಸಿಂಚನ, ಸೆ.2ರವರೆಗೆ ಮಳೆ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಜೋರು ಮಳೆ ಸುರಿಯಿತು. ರಾತ್ರಿಯಾಗುತ್ತಿದ್ದಂತೆ ಆರಂಭವಾದ ಮಳೆ ಕೆಲ ಕಾಲ ಅಬ್ಬರಿಸಿತು. ಮುಂದಿನ ಒಂದು ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೇವಾಂಶ ಸಹಿತ ಜೋರು ಗಾಳಿ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ.
ಬೆಂಗಳೂರಿನ ಕೋರಮಂಗಲ, ಮಡಿವಾಳ, ಡೈರಿ ವೃತ್ತ, ನಿಮ್ಹಾನ್ಸ್ ರಸ್ತೆ, ಮಾರತ್ತಹಳ್ಳಿ, ದೊಮ್ಮಲೂರು, ಹೆಬ್ಬಾಳ, ಯಲಹಂಕ, ಎಚ್ಎಎಲ್ ರಸ್ತೆ, ರಾಜ್ಮಹಲ್ ಗುಟ್ಟಹಳ್ಳಿ, ಬೊಮ್ಮನಹಳ್ಳಿ, ಸಿಲ್ಕ್ಬೋರ್ಡ್ ಜಂಕ್ಷನ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಮಂಗಳವಾರ ಅಲ್ಲಲ್ಲಿ ಸಾಧಾರಣ ಮಳೆ ದಾಖಲಾಯಿತು.

ಈ ಜಿಟಿ ಜಿಟಿ ಮಳೆಯಿಂದಾಗಿ ಕಚೇರಿ ಮುಗಿದ ಮನೆಗೆ ತೆರಳುತ್ತಿದ್ದ ನೌಕರರಿಗೆ, ಸಾರ್ವಜನಿಕರಿಗೆ, ಸಂಜೆ ವ್ಯಾಪಾರಿಗಳಿಗೆ ತೊಂದರೆ ಕಿರಿ ಕಿರಿ ಆಯಿತು. ನಗರದ ಕೆಲವು ಜಂಕ್ಷನ್ಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತದ್ದು ಕಂಡು ಬಂತು. ಕೆಲವೆಡೆ ಸಂಚಾರ ದಟ್ಟಣೆ ಕಂಡು ಬಂತು.
ಬೆಂಗಳೂರಿನಲ್ಲಿ ಮುಂದಿನ ಒಂದು ವಾರಗಳ ಕಾಲ ಅತ್ಯಧಿಕ ಮಳೆಯ ಮುನ್ಸೂಚನೆ ಇದೆ. ಸೆಪ್ಟಂಬರ್ 02ರವರೆಗೆ ವ್ಯಾಪಕ ಮಳೆ ಬರಲಿದೆ. ಜೋರು ಗಾಳಿ ಸಹಿತ ಮಳೆ ಮುನ್ಸೂಚನೆ ಇದೆ. ನಿತ್ಯ ಬೆಳಗ್ಗೆಯಿಂದ ಬಿಸಿಲು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದರೂ ಸಂಜೆ ನಂತರ ಅಲ್ಲಲ್ಲಿ ಸಾಧಾರಣ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ರಾಜ್ಯದ ಮಳೆ ಮುನ್ಸೂಚನೆ
ಇನ್ನೂ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಅದರಲ್ಲೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆ ಸುರಿಯಲಿದೆ. ಈ ಜಿಲ್ಲೆಗಳಿಗೆ ಅರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಇನ್ನು ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಅಬ್ಬರಿಸಲಿದೆ. ಉತ್ತರ ಕರ್ನಾಟಕದ ಒಂದಷ್ಟು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮುಂಗಾರು ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications