ಬೆಂಗಳೂರು: ಎಣ್ಣೇ ಏಟಿನಲ್ಲಿ ಸ್ನೇಹಿತನ ಕೊಲೆ
ಬೆಂಗಳೂರು, ಮೇ 5: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ಬೆಂಗಳೂರಿನ ಜೀವನ್ ಭೀಮಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಮ್ಮಲೂರಿನ ಶ್ರೀನಿವಾಸ್ (45) ಕೊಲೆಯಾದ ವ್ಯಕ್ತಿ. ಸಂತೋಷ್ ಮತ್ತು ಶ್ರೀನಿವಾಸ್ ಇಬ್ಬರು ನಿನ್ನೆ ಬೆಳಗ್ಗೆ ಮದ್ಯದಂಗಡಿ ತೆರೆದ ಕೂಡಲೇ ಸರತಿ ನಿಂತು ಮದ್ಯ ಖರೀದಿಸಿದ್ದರು. ದೊಮ್ಮಲೂರಿನ ತಮ್ಮ ಮನೆಯ ಬಳಿ ಮದ್ಯಪಾನ ಮಾಡಿ, ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದರು.
ಈ ವೇಳೆ ದೊಣ್ಣೆಯಿಂದ ಶ್ರೀನಿವಾಸ್ ತಲೆಗೆ ಬಲವಾಗಿ ಸಂತೋಷ್ ಹೊಡೆದಿದ್ದ. ಹಲ್ಲೆ ಪರಿಣಾಮ ಶ್ರೀನಿವಾಸ್ ಗೆ ತಲೆಯಲ್ಲಿ ರಕ್ತಸ್ರಾವವಾಗಿತ್ತು. ಹೀಗಾಗಿ ಅಸ್ಪತ್ರೆಗೆ ತೆರಳಿ ವಾಪಸ್ಸು ಮನೆಗೆ ಮರಳಿದ್ದ ಶ್ರೀನಿವಾಸ್ ರಾತ್ರಿ 8 ಗಂಟೆ ಸಮಯದಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಪೊಲೀಸರ ದಾಳಿ: ಲಾಕ್ ಡೌನ್ ಸಮಯದಲ್ಲಿ ಸಿಸಿಬಿ ಪೊಲೀಸರು 51 ಕಡೆ ದಾಳಿ ನಡೆಸಿದ್ದಾರೆ. ಕಳೆದ 40 ದಿನಗಳಿಂದ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ನಕಲಿ ಮಾಸ್ಕ್, ಸ್ಯಾನಿಟೈಸರ್, ಲಿಕ್ಕರ್ ಹಾಗೂ ಆನ್ ಲೈನ್ ಪೋಕರ್ ಗೇಮ್ ಇಸ್ಪೀಟ್ ದಂಧೆಕೋರರು ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರ ಬಂಧನ ಮಾಡಿದ್ದಾರೆ. ಒಟ್ಟು ಒಂದೂವರೆ ಕೋಟಿ ಬೆಲೆ ಬಾಳುವ ವಸ್ತುಗಳ ವಶಪಡಿಸಿಕೊಂಡಿದ್ದಾರೆ.












Click it and Unblock the Notifications