ಉಗ್ರನಿಗಾಗಿ ಜೈಲೊಳಗೆ ಮೊಬೈಲ್ ಸಾಗಿಸುತ್ತಿದ್ದ ಕಾನ್ ಸ್ಟೇಬಲ್ ಬಂಧನ
ಬೆಂಗಳೂರು, ಅಕ್ಟೋಬರ್ 13: ಉಗ್ರಗಾಮಿಗಳ ನೆರವಿಗೆ ಪೊಲೀಸರೇ ನಿಂತರೆ ಹೇಗೆ? ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಉಗ್ರಗಾಮಿಯೊಬ್ಬನಿಗೆ ಕಾನ್ ಸ್ಟೇಬಲ್ ವೊಬ್ಬ ಎರಡು ಸ್ಮಾರ್ಟ್ ಫೋನ್ ಒಳಗೆ ಸಾಗಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಟಿ.ನಸೀರ್ ಗಾಗಿ ಸ್ಮಾರ್ಟ್ ಫೋನ್ ಕೊಂಡೊಯ್ಯುವಾಗ ಕಾನ್ ಸ್ಟೇಬಲ್ ದಿನೇಶ್ ಸಿಕ್ಕಿಬಿದ್ದಿದ್ದಾನೆ. ನಗರದ ಸಶಸ್ತ್ರ ಮೀಸಲು ಪಡೆಯಲ್ಲಿರುವ ದಿನೇಶ್ ವಿರುದ್ಧ ಜೈಲು ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ನಸೀರ್ ಹಲವು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆತನ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ದಿನೇಶ್ ಗುರುವಾರ ನಸೀರ್ ಗೆ ವಾರಂಟ್ ನೀಡಲು ತೆರಳಿದ್ದ. ಆದರೆ ಮೊಬೈಲ್ ಫೋನ್ ಗಳನ್ನು ಒಳಗೆ ಸಾಗಿಸಲು ಯತ್ನಿಸಿದ್ದಾನೆ.
ವಾರಂಟ್ ನ ಲಕೋಟೆಯಲ್ಲಿಯೇ ಸ್ಯಾಮ್ಸಂಗ್ ಕಂಪನಿಯ ಎರಡು ಸ್ಮಾರ್ಟ್ ಫೋನ್ ಇಟ್ಟುಕೊಂಡು ಹೋಗಿದ್ದಾನೆ ದಿನೇಶ್. ಜೈಲು ಸಿಬ್ಬಂದಿಯ ಬಳಿ, ನಸೀರ್ ಗೆ ಸಮನ್ಸ್ ನೀಡಲು ಬಂದಿರುವುದಾಗಿ ಹೇಳಿದ್ದಾನೆ. ಆದರೆ ಆತಂಕಗೊಂಡಿದ್ದ ದಿನೇಶ್ ನನ್ನು ನೋಡಿ ಅನುಮಾನಗೊಂಡ ಸಿಬ್ಬಂದಿ ವಾರಂಟ್ ಲಕೋಟೆ ಪರಿಶೀಲಿಸಿದ್ದಾರೆ. ಆಗ ಮೊಬೈಲ್ ಫೋನ್ ಸಿಕ್ಕಿದೆ.
ಆ ತಕ್ಷಣವೇ ದಿನೇಶ್ ನನ್ನು ವಶಕ್ಕೆ ಪಡೆದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ತನಗೆ ಐದು ಸಾವಿರ ನೀಡುವುದಾಗಿ ಹೇಳಿದ ಒಬ್ಬರು, ನಸೀರ್ ಗೆ ಈ ಫೋನ್ ಗಳನ್ನು ತಲುಪಿಸಲು ತಿಳಿಸಿದ್ದಾಗಿ ದಿನೇಶ್ ಒಪ್ಪಿಕೊಂಡಿದ್ದಾನೆ. ಆದರೆ ಆ ಕೆಲಸ ಒಪ್ಪಿಸಿದವರು ಯಾರು ಎಂಬುದು ಗೊತ್ತಿಲ್ಲ ಎಂದಿದ್ದಾನೆ. ಇನ್ನು ಮೊಬೈಲ್ ಫೋನ್ ಗಳಲ್ಲಿ ಸಿಮ್ ಕಾರ್ಡ್ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications