ಬೆಂಗಳೂರು-ಮೈಸೂರು ರಸ್ತೆ ಬಳಿಕ ಈ ಹೆದ್ದಾರಿಯಲ್ಲೂ ಬೈಕ್ಗಳಿಗೆ ಪ್ರವೇಶವಿಲ್ಲ
ಈತ್ತೀಚೆಗಷ್ಟೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ಈ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ವಾಹನಗಳ ಸಂಚಾರಕ್ಕೆ ಮುಕ್ತವಾಗಿತ್ತು. ಅಲ್ಲದೆ ಸದ್ಯಕ್ಕೆ ಯಾವುದೇ ಟೋಲ್ ಪಾವತಿಸದೆ ಈ ರಸ್ತೆಯಲ್ಲಿ ಸಂಚರಿಸಬಹುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೇಳಿತ್ತು. ಆದರೆ ಈಗ ಈ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ಬೈಕ್ಗಳಿಗೆ ಪ್ರವೇಶವಿಲ್ಲ ಎಂದು ಎನ್ಎಚ್ಎಐ ಹೇಳಿದೆ. ಇದಕ್ಕೆ ಕಾರಣವೇನು ಎಂಬುದನ್ನು ಮುಂದೆ ತಿಳಿಯಿರಿ..
ಬೆಂಗಳೂರು ಹಾಗೂ ಚೆನ್ನೈ ನಡುವೆ ಪ್ರಯಾಣದ ಸಮಯವನ್ನು ಕಡಿಮೆ ಉದ್ದೇಶದೊಂದಿಗೆ ಈ ಎಕ್ಸ್ಪ್ರೆಸ್ವೇ ನಿರ್ಮಿಸಲಾಗುತ್ತಿದೆ. ಇದು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳು ನಾಡು ರಾಜ್ಯಗಳಲ್ಲಿ ಹಾದು ಹೋಗುತ್ತಿದ್ದು, ಇತ್ತೀಚೆಗಷ್ಟೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಹಾಗಾಗಿ ಹೊಸಕೋಟೆಯಿಂದ ಗಡಿಭಾಗದವರೆಗೆ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಈಗ ದಿಢೀರನೆ ಈ ಹೆದ್ದಾರಿಯಲ್ಲಿ ಬೈಕ್ ಸಂಚಾರ ಬ್ಯಾನ್ ಮಾಡಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಸಮೀಪ ಭಾನುವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬಳಿಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. ರಸ್ತೆ ಸಂಚಾರಕ್ಕೆ ಮುಕ್ತವಾಗಿರುವ ಹಿನ್ನೆಲೆ ಬೈಕ್ ಸವಾರರು ಅತಿ ವೇಗವಾಗಿ ಸಂಚರಿಸುವುದು ಕಂಡುಬಂದಿದೆ. ಅಲ್ಲದೆ ಇದರಿಂದ ಅಪಘಾತ ಸಂಭವಿಸಿ ಸಾವು ನೋವಿಗೂ ಕಾರಣವಾಗುತ್ತಿರುವುದರಿಂದ ಸಂಪೂರ್ಣವಾಗಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಿದೆ.
ಈ ಎಕ್ಸ್ಪ್ರೆಸ್ವೇನ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಂತೆ ಗಸ್ತು ವಾಹನಗಳಿಗೆ ಎನ್ಎಚ್ಎಐ ಈಗಾಗಲೇ ಸೂಚನೆ ನೀಡಿದೆ. ಅಲ್ಲದೆ ಈ ನಿರ್ಬಂಧದ ಬಗ್ಗೆ ಬೈಕ್ ಸವಾರರಿಗೆ ಮಾಹಿತಿ ನೀಡಲು ಅಲ್ಲಲ್ಲಿ ಸೂಚನಾ ಫಲಕಗಳನ್ನು ಕೂಡ ಅಳವಡಿಸಲಾಗುತ್ತಿದೆ.
ಮೊನ್ನೆ ನಡೆದ ಅಪಘಾತದಲ್ಲಿ ಬೈಕ್ ಈ ಎಕ್ಸ್ಪ್ರೆಸ್ವೇಗೆ ತಪ್ಪು ಮಾರ್ಗದಿಂದ ಪ್ರವೇಶಿಸಿದೆ. ಈ ಕಾರಣದಿಂದಲೇ ಅಪಘಾತ ಸಂಭವಿಸಿದೆ. ಈಗಾಗಲೇ ದೇಶದ ಪ್ರಮುಖ ಎಕ್ಸ್ಪ್ರೆಸ್ವೇಗಳಲ್ಲಿ ಬೈಕ್ಗಳ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಈ ಎಕ್ಸ್ಪ್ರೆಸ್ವೇನಲ್ಲೂ ಬೈಕ್ ಸಂಚಾರಕ್ಕೆ ಬ್ರೇಕ್ ನೀಡಿರುವುದಾಗಿ ಪ್ರಾಧಿಕಾರ ತಿಳಿಸಿದೆ. ದಯವಿಟ್ಟು ಬೈಕ್ ಸವಾರರು ಈ ಎಕ್ಸ್ಪ್ರೆಸ್ವೇ ಬಳಸಬೇಡಿ ಎಂದು ಸೂಚನೆ ನೀಡಿದೆ.

ಸದ್ಯ ಎಕ್ಸ್ಪ್ರೆಸ್ವೇಗಳನ್ನು ಗರಿಷ್ಠ 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ, ಇಲ್ಲಿ ಇತ್ತೀಚೆಗಷ್ಟೇ ಸಂಚಾರಮುಕ್ತಗೊಳಿಸಿರುವ ಕಾರಣ ಅನೇಕ ಬೈಕರ್ಗಳು ಈ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಾಧಿಕಾರ ಹೇಳಿದೆ.
ಸುಮಾರು 288 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ವೇನಲ್ಲಿ ಕರ್ನಾಟಕ ಭಾಗದಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿ ಪೂರ್ಣಗೊಂಡಿದೆ. ಹೊಸಕೋಟೆ ಬಳಿ ಇರುವ ಇಂಟರ್ ಚೇಂಜ್ನಿಂದ ಈ ಎಕ್ಸ್ಪ್ರೆಸ್ವೇ ಶುರುವಾಗಿ ಆಂಧ್ರಪ್ರದೇಶದ ಗಡಿಭಾಗವಾದ ಸುಂದರಪಾಳ್ಯದವರೆಗಿನ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿವರೆಗೆ ಮಾತ್ರವೇ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ.












Click it and Unblock the Notifications