BDA: ಬಿಬಿಸಿ ಯೋಜನೆ, ಆಸ್ತಿ ಮಾಲೀಕರ ಆಕ್ಷೇಪಣೆಗಳೇನು?
ಬೆಂಗಳೂರು, ಮಾರ್ಚ್ 05: ಉದ್ಯಾನ ನಗರಿ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಮಹತ್ವದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ 73 ಕಿ. ಮೀ. ಉದ್ದದ ಈ ರಸ್ತೆಯ ಯೋಜನಾ ವೆಚ್ಚ 27,000 ಕೋಟಿ ರೂ.ಗಳು. ಬಿಡಿಎ ಯೋಜನೆಗೆ ಭೂ ಸ್ವಾಧೀನ ಕಾರ್ಯವನ್ನು ಆರಂಭಿಸಿದೆ.
ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆ ಮೊದಲು ಪ್ರಸ್ತಾಪವಾಗಿದ್ದು, 2007ರಲ್ಲಿ. ಈಗ ರಾಜ್ಯ ಸರ್ಕಾರ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಯೋಜನೆಯನ್ನು ಮರು ನಾಮಕಾರಣ ಮಾಡಿ ಜಾರಿಗೊಳಿಸುತ್ತಿದೆ. ಈ ಯೋಜನೆಗೆ ಹುಡ್ಕೋ ಅನುದಾನ ನೀಡಲಿದೆ.

ಬಿಬಿಸಿ ಯೋಜನೆ ವ್ಯಾಪ್ತಿಗೆ ಬರುವ ಜಮೀನು ಮಾಲೀಕರಿಗೆ ಬಿಡಿಎ ನೋಟಿಸ್ ನೀಡಿ, ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಮಾಹಿತಿಗಳ ಪ್ರಕಾರ 10 ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಯೋಜನೆ ಮತ್ತಷ್ಟು ವಿಳಂಬವಾಗುವ ನಿರೀಕ್ಷೆ ಇದೆ.
ಭೂ ಮಾಲೀಕರ ಆಕ್ಷೇಪಣೆಗಳೇನು?; ಬಿಡಿಎ ಬಿಬಿಸಿ ಯೋಜನೆ ಭೂ ಸ್ವಾಧೀನಕ್ಕಾಗಿಯೇ 9 ವಿಶೇಷ ಭೂ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿದೆ. ಬೈಲಕೊನೇಹಳ್ಳಿ, ಲಕ್ಷ್ಮೀಪುರ, ಸಿದ್ದನಹಳ್ಳಿ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಆರು ಭೂ ಸ್ವಾಧೀನಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಆಸ್ತಿ ಮಾಲೀಕರಿಗೆ ಇನ್ನೂ ಸಹ ನೋಟಿಸ್ ನೀಡುವುದು ಬಾಕಿ ಇದೆ. ಆಕ್ಷೇಪಣೆಗಳಲ್ಲಿ ಜಮೀನು ಮಾಲೀಕರು ಪರಿಹಾರದ ಕುರಿತು ಧ್ವನಿ ಎತ್ತಿದ್ದಾರೆ. 2006ರಲ್ಲಿ ಅಧಿಸೂಚನೆ ಹೊರಡಿಸಿದ ಜಮೀನುಗಳನ್ನು ಈಗ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಮಾರುಕಟ್ಟೆ ದರಕ್ಕೆ ತಕ್ಕಂತೆ ಪರಿಹಾರವನ್ನು ನಿಗದಿ ಮಾಡಬೇಕು ಎಂದು ಜಮೀನು ಮಾಲೀಕರು ಒತ್ತಾಯಿಸಿದ್ದಾರೆ.
ನೋಟಿಸ್ ನೀಡಿರುವ ಜಮೀನಿನಲ್ಲಿ ಈಗಾಗಲೇ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಜಮೀನು ಕಳೆದುಕೊಂಡು ಎಲ್ಲಿಗೆ ಹೋಗಬೇಕು, ಸರ್ಕಾರ ನೀಡುವ ಪರಿಹಾರ ಬೇಡ, ನಮ್ಮ ಜಮೀನು ಉಳಿಸಿಕೊಡಿ ಎಂದು ಆಸ್ತಿ ಮಾಲೀಕರು ಆಕ್ಷೇಪಣೆಯಲ್ಲಿ ಹೇಳಿದ್ದಾರೆ.
ಬಿಡಿಎ ಅಧಿಕಾರಿಗಳ ಪ್ರಕಾರ ಬಿಬಿಸಿ ಯೋಜನೆಗೆ 2,600 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. 100 ಮೀಟರ್ ಅಗಲದ ಕಾರಿಡಾರ್ ಇದಾಗಿದ್ದು, ಕಾರಿಡಾರ್ ಎರಡೂ ಬದಿಯ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಬಿಡಿಎ ಯೋಜನೆ ರೂಪಿಸಿದೆ. 6 ಪಥದ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಲಿದೆ.
ಬಿಬಿಸಿ ಯೋಜನೆಗೆ ಸುಮಾರು 27,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಭೂ ಸ್ವಾಧೀನದ ಪರಿಹಾರಕ್ಕೆ 21 ಸಾವಿರ ಕೋಟಿ ರೂ. ಆಗಲಿದೆ ಎಂದು ಬಿಡಿಎ ಹೇಳಿದ್ದು, ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಸಂಚಾರ ದಟ್ಟಣೆ ತಪ್ಪಿಸಲು ತುಮಕೂರು ಮತ್ತು ಹೊಸೂರು ರಸ್ತೆ ನಡುವೆ ಸಂಪರ್ಕಿಸಲು 73 ಕಿ. ಮೀ. ಬಿಬಿಸಿ ರಸ್ತೆ ಯೋಜನೆಯ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಈ ರಸ್ತೆ ನೈಸ್ ರಸ್ತೆಯ ಮಾದನಾಯಕನಹಳ್ಳಿಯಿಂದ ಆರಂಭವಾಗಿ ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ಹಳೆ ಮದ್ರಾಸ್ ರಸ್ತೆ, ವೈಟ್ಫೀಲ್ಡ್, ಚನ್ನಸಂದ್ರ, ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆಗೆ ತಲುಪಲಿದೆ.












Click it and Unblock the Notifications