Peripheral Ring Road: ಬೆಂಗಳೂರಿನ ಮಹತ್ವದ ಯೋಜನೆಗೆ ಚಾಲನೆ, ಆಸ್ತಿ ಮಾಲೀಕರಿಗೆ ಬಿಡಿಎ ನೋಟಿಸ್
ಬೆಂಗಳೂರು, ಅಕ್ಟೋಬರ್ 01: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಾಲನೆ ನೀಡಿದೆ. ಸುಮಾರು 73 ಕಿ. ಮೀ. ಉದ್ದದ ಈ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಗೆ ಮರು ನಾಮಕರಣ ಮಾಡಲಾಗಿದೆ. ಮೊದಲ ಹಂತದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರಿಗೆ ಬಿಡಿಎ ನೋಟಿಸ್ ನೀಡಲು ಆರಂಭಿಸಿದೆ. ಇದಕ್ಕಾಗಿಯೇ 9 ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
2007ರಲ್ಲಿಯೇ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆ ಪ್ರಸ್ತಾವನೆ ಸಿದ್ಧವಾಗಿತ್ತು. ಆದರೆ ವಿವಿಧ ಕಾರಣಕ್ಕೆ ಯೋಜನೆ ಜಾರಿಗೆ ಬಂದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ. ಕೆ. ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಯೋಜನೆಗೆ ಚುರುಕುಗೊಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಆರ್ಆರ್ ಯೋಜನೆಯನ್ನು ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಅಲ್ಲದೇ ಯೋಜನೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಲಾಗಿದೆ. ಈ ಯೋಜನೆಗೆ ಸುಮಾರು 30,000 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರದ ಯೋಜನೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯ ಭೂ ಸ್ವಾಧೀನಕ್ಕಾಗಿಯೇ 9 ಕೆಎಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಮೊದಲ ಹಂತದಲ್ಲಿ ಯೋಜನೆಗೆ 1800 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. 2022ರಲ್ಲಿ 2ನೇ ಹಂತದಲ್ಲಿ ಹೆಚ್ಚುವರಿಯಾಗಿ 600 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಭೂಮಿಯ ಮಾಲೀಕರಿಗೆ ಹಂತ ಹಂತವಾಗಿ ನೋಟಿಸ್ ನೀಡಲಾಗುತ್ತದೆ. ಮೊದಲು ಸರ್ಕಾರ ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣ ಮಾಡಲು ಬಯಸಿತ್ತು. ಆದರೆ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವೇ ಏಕಾಂಗಿಯಾಗಿ ಯೋಜನೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ.
ಭೂ ಸ್ವಾಧೀನ ಸೇರಿದಂತೆ ಎಲ್ಲವೂ ಸೇರಿ ಯೋಜನೆಯ ವೆಚ್ಚ ಸುಮಾರು 30,000 ಕೋಟಿ ಎಂದು ಅಂದಾಜಿಸಲಾಗಿದೆ. ಈ ಯೋಜನೆಗಾಗಿ ಸರ್ಕಾರ ಯೋಜನೆಗಾಗಿ ಶೇ 70ರಷ್ಟು ಅನುದಾನವನ್ನು ಸಾಲದ ರೂಪದಲ್ಲಿ ಪಡೆಯಲಿದೆ. ಉಳಿದ ಅನುದಾನ ರಾಜ್ಯ ಸರ್ಕಾರ ನೀಡಲಿದೆ. ಮೊದಲ ಹಂತದಲ್ಲಿ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ ಆಸ್ತಿಯ ಹಕ್ಕು ಕುರಿತು ಅವರ ಬಳಿ ಇರುವ ದಾಖಲೆಗಳು, ಯೋಜನೆಗೆ ಭೂಮಿ ನೀಡಲು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚನೆ ನೀಡಲಾಗುತ್ತದೆ.
ಭೂ ಸ್ವಾಧೀನಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಬಿಬಿಸಿ ಯೋಜನೆ ವ್ಯಾಪ್ತಿಗೆ ಬರುವ ಭೂ ಮಾಲೀಕರಿಗೆ ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ನೀಡಲಿದ್ದಾರೆ. ನೋಟಿಸ್ ಪಡೆಯುವ ರೈತರು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಬಹುದು, ಅಲ್ಲದೇ ಭೂಮಿ ನೀಡುವವರು ಸದ್ಯ ಜಾರಿಯಲ್ಲಿರುವ 2013ರ ನಿಯಮಗಳ ಅನ್ವಯ ಭೂಮಿ ನೀಡಿರುವುದಕ್ಕೆ ಪರಿಹಾರವನ್ನು ಕೇಳಬಹುದು.
ಯೋಜನೆಗೆ ಮೊದಲ ಅಂದಾಜಿಸಿದ್ದಕ್ಕಿಂತ 600 ಎಕರೆ ಹೆಚ್ಚುವರಿ ಭೂಮಿಯನ್ನು ಬಿಡಿಎ ಸ್ವಾಧೀನ ಪಡಿಸಿಕೊಳ್ಳಲಿದೆ. ಈಗಾಗಲೇ ಯೋಜನೆ ವ್ಯಾಪ್ತಿಗೆ ಒಳಪಡುವ ಹಲವು ರೈತರು ಯೋಜನೆಗೆ ಭೂಮಿ ನೀಡಲು ಆಕ್ಷೇಪಣೆಗಳಿಲ್ಲ. ಆದರೆ 2013ರ ನಿಯಮಾವಳಿ ಅನ್ವಯ ಪರಿಹಾರವನ್ನು ನೀಡಲು ಸೂಚನೆ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರೈತರಿಂದ ಭೂ ಸ್ವಾಧೀನದ ಪ್ರಕ್ರಿಯೆ ಮುಗಿದ ಕೂಡಲೇ ಬಿಡಿಎ ಯೋಜನೆಯ ಸಿವಿಲ್ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಿದೆ. ಆದರೆ ಭೂ ಸ್ವಾಧೀನ ವಿಚಾರ ಅಂದುಕೊಂಡಷ್ಟು ಸುಲಭವಾಗಿಲ್ಲ. ಈಗಾಗಲೇ ಹಲವು ರೈತರು ನೋಟಿಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಪರಿಹಾರ ಮಾರ್ಗಸೂಚಿಗಳ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಈ ಕುರಿತು ಕಾನೂನು ಹೋರಾಟವೂ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಈ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ತಯಾರಿಸಲಾಗಿದೆ. ಸುಮಾರು 73 ಕಿ. ಮೀ. ಉದ್ದದ 8 ಪಥದ ರಸ್ತೆ ಯೋಜನೆಯಡಿ ನಿರ್ಮಾಣವಾಗಲಿದೆ. ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಸಾಗಲಿರುವ ಇದು ತುಮಕೂರು ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿದೆ. 77 ಗ್ರಾಮಗಳಲ್ಲಿ ಯೋಜನೆ ಹಾದು ಹೋಗಲಿದೆ.












Click it and Unblock the Notifications