Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದಿಂದ ತಮಿಳುನಾಡು, ಆಂಧ್ರಗೆ ಲಾಭ ಜಾಸ್ತಿ ?
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಬಗ್ಗೆ ತರಾವರಿ ಚರ್ಚೆಗಳು ಶುರುವಾಗುತ್ತಿದೆ. ಪರ - ವಿರೋಧಗಳ ಚರ್ಚೆಯಿಂದ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕೆಲಸಗಳಿಗೆ ಪೆಟ್ಟು ಬೀಳಲಿದೆಯೇ ಎನ್ನುವ ಪ್ರಶ್ನೆ ಜೋರಾಗಿದೆ. ಇದರ ನಡುವೆ ಬೆಂಗಳೂರು ಅಥವಾ ಬೆಂಗಳೂರಿನ ಸುತ್ತಮುತ್ತಲಿ ಪ್ರದೇಶದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ಅದರಿಂದ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಲಾಭವಾಗಲಿದೆ ಎನ್ನಲಾಗುತ್ತಿದೆ.
ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಿದ್ಧವಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕೆಲಸವನ್ನು ಭರ್ಜರಿಯಾಗಿ ಪ್ರಾರಂಭಿಸಿತ್ತು. ಆದರೆ, ಇದರ ಬೆನ್ನಲ್ಲೇ ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ಇದರಿಂದ ಯಾರಿಗೆ ಲಾಭ ಎನ್ನುವ ಲೆಕ್ಕಾಚಾರ ಜೋರಾಗಿದೆ.

ಬೆಂಗಳೂರಿನಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಮತ್ತೊಂದು ವಿಮಾನ ನಿಲ್ದಾಣದ ಅವಶ್ಯಕತೆ ಎದುರಾಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿತ್ತು. ಇದೇ ಕಾರಣಕ್ಕೆ ತಮಿಳುನಾಡು ಸರ್ಕಾರ ಸಹ ಲಾಭ - ನಷ್ಟಗಳ ಲೆಕ್ಕಾಚಾರವನ್ನು ಹಾಕಿ ಬೆಂಗಳೂರಿನ ಗಡಿಯಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವ ಹೊಸೂರಿನಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ತಮಿಳುನಾಡಿಗೆ ಟಾಂಗ್ ಕೊಡುವುದಕ್ಕೆ ಹಾಗೂ ಬೆಂಗಳೂರಿಗೆ ಹೊಡೆತ ಬೀಳಬಾರದು ಎಂದು ಎಚ್ಚೆತ್ತುಕೊಂಡಿತ್ತು. ಯಾಕೆಂದರೆ ತಮಿಳುನಾಡು ಸರ್ಕಾರವು, ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವವರಿಗೆ ಹಾಗೂ ಇಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಐಟಿ ಕಂಪನಿಗಳೇ ಹೆಚ್ಚಾಗಿರುವ ಭಾಗದಲ್ಲಿನ ಜನರಿಗೆ ಅನುಕೂಲವಾಗಲಿದೆ.
ಈ ಭಾಗದವರಿಗೆ ಬೆಂಗಳೂರು ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕಿಂತ ಹೊಸುರು ವಿಮಾನ ನಿಲ್ದಾಣವೇ ಸಮೀಪವಾಗಲಿದೆ. ಅಲ್ಲದೆ ಹೊಸುರು ವಿಮಾನ ನಿಲ್ದಾಣಕ್ಕೆ ಟ್ರಾಫಿಕ್ ಜಾಮ್ ಇಲ್ಲದೆ ಹೋಗಲು ಅವಕಾಶ ಇದೆ.
ಆದರೆ, ಈಗ ಬೆಂಗಳೂರು ಅಥವಾ ಬೆಂಗಳೂರಿನ ಯಾವುದೇ ಸಮೀಪ ಭಾಗದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೂ, ಅದರಿಂದ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಬೆಂಗಳೂರು ನಗರಕ್ಕೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಇದೆ. ಅಲ್ಲದೆ ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಿವಿಧ ರಾಜ್ಯಗಳ ಜನ ಹಾಗೂ ಹೊರ ದೇಶದವರೂ ಸಹ ಇದ್ದಾರೆ.
ಇನ್ನು ಬೆಂಗಳೂರು ಈ ರಾಜ್ಯಗಳ ಗಡಿಭಾಗಕ್ಕೆ ಸಮೀಪದಲ್ಲಿರುವುದರಿಂದ ಬೆಂಗಳೂರಿನ ಸುತ್ತಮುತ್ತಲಿನ ಯಾವುದೇ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೂ ಅದರ ಲಾಭ ಬೇರೆಯ ರಾಜ್ಯಗಳಿಗೆ ಆಗಲಿದೆ ಎನ್ನುವ ವಾದವನ್ನು ವಿರೋಧ ಪಕ್ಷಗಳು ಮಾಡಿವೆ.
ಈ ಸಂಬಂಧ ಮಾತನಾಡಿರುವ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತಿಲ್ಲ. ಎಲೆಕ್ಟ್ರಾನಿಕ್ ಸಿಟಿ ಸಹ ತಮಿಳುನಾಡು ಗಡಿಭಾಗದಲ್ಲಿ ಇದೆ. ಹೊಸ ವಿಮಾನ ನಿಲ್ದಾಣ ಆಂಧ್ರಪ್ರದೇಶ ಗಡಿ ಭಾಗಕ್ಕೆ ಬರುತ್ತಿದೆ.
ಅದೇ ಉತ್ತರ ಕರ್ನಾಟಕದ ಭಾಗಕ್ಕೆ ಬಂದಿದ್ದರೆ ಉತ್ತರ ಕರ್ನಾಟಕಕ್ಕೆ ಲಾಭವಾಗಲಿದೆ. ನಮ್ಮ ಹೊಸ ವಿಮಾನ ನಿಲ್ದಾಣದಿಂದ ಬೇರೆ ರಾಜ್ಯಗಳಿಗೆ ಸಹಕಾರಿಯಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಅಖಂಡ ಕರ್ನಾಟಕದ ಭಾಗವಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕಕ್ಕೆ ಟಾಂಗ್ ಕೊಡುವುದಕ್ಕೆ ತಮಿಳುನಾಡು ಸರ್ಕಾರ ಪ್ಲಾನ್ ಮಾಡಿಕೊಂಡಿತ್ತು. ತಮಿಳುನಾಡಿನಲ್ಲಿ ಹೊಸು ಅತಿ ಹೆಚ್ಚು ಕೈಗಾರಿಕೆ ಪ್ರದೇಶಗಳನ್ನು ಹೊಂದಿದೆ. ಅಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸುವುದರಿಂದ ತಮಿಳುನಾಡು ಹಾಗೂ ಕರ್ನಾಟಕದ ಬೆಂಗಳೂರಿನ ಉದ್ಯಮಿಗಳನ್ನು ಏಕಕಾಲಕ್ಕೆ ಸೆಳೆಯುವ ಪ್ಲಾನ್ ಅನ್ನು ತಮಿಳುನಾಡು ಸರ್ಕಾರ ಹಾಕಿಕೊಂಡಿದೆ. ಆದರೆ, ಎರಡನೇ ವಿಮಾನ ನಿಲ್ದಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನಷ್ಟೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಿದೆ.












Click it and Unblock the Notifications