ಬೆಳ್ಳಂದೂರು ಕೆರೆಯಲ್ಲಿ ಶುರು ಬಿರುಸಿನ ಸ್ವಚ್ಛತಾ ಕಾರ್ಯ
ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಬೇಕೆಂದು ಎನ್ ಜಿಟಿ ನೀಡಿದ್ದ ಆದೇಶಕ್ಕನುಗುಣವಾಗಿ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಈಗಾಗಲೇ ಆರಂಭವಾಗಿದೆ.
ಬೆಂಗಳೂರು, ಮೇ 9: ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ ಜಿಟಿ) ಕಟ್ಟು ನಿಟ್ಟಿನ ಆದೇಶದಿಂದಾಗಿ ಈಗಾಗಲೇ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಬಿರುಸಿನಿಂದ ಆರಂಭವಾಗಿದೆ. ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಬೇಕೆಂದು ಎನ್ ಜಿಟಿ ನೀಡಿದ್ದ ಆದೇಶಕ್ಕನುಗುಣವಾಗಿ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡು, ದುರ್ನಾತ ಆರಂಭವಾಗುತ್ತಿದ್ದಂತೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಕೆರೆ ಅಭಿವೃದ್ಧಿ ಪ್ರಾಧಿಕಾರ (ಎಲ್ ಡಿಎ) ಸೇರಿದಂತೆ ಸಂಬಂಧಿಸಿದ ಎಲ್ಲರನ್ನೂ ಎನ್ ಜಿಟಿ ತರಾಟೆಗೆ ತೆಗೆದುಕೊಂಡಿತ್ತು.[ಮತ್ತೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿಯ ನರ್ತನ]
ಇದಾದ ನಂತರ ಕೆರೆಯ ಸುತ್ತ ಸಿಸಿಟಿವಿ ಯನ್ನು ಅಳವಡಿಸಿ ಕೆರೆಗೆ ಕಸ ಎಸೆಯುವವರ ಬಗ್ಗೆಯೂ ಹದ್ದಿನ ಕಣ್ಣಿಡಲಾಗಿದೆ.
ಅಷ್ಟೇ ಅಲ್ಲದೆ, ಎನ್ ಜಿಟಿ ಆದೇಶದನ್ವಯ ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದ ವ್ಯಾಪ್ತಿಗೆ ಸೇರುವ 488 ಕೈಗಾರಿಕೆಗಳನ್ನು ಮುಚ್ಚಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಆದೇಶ ಹೊರಡಿಸಿತ್ತು.
ಒಟ್ಟಿನಲ್ಲಿ ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತೆ, ಬೆಳ್ಳಂದೂರು ಕೆರೆ ಸಂಪೂರ್ಣ ಮಾಲಿನ್ಯಕ್ಕೊಳಗಾದ ಮೇಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಬಿಡಿಎ, ಎಲ್ ಡಿಎ ಗಳು ಇದೀಗ ಎನ್ ಜಿ ಟಿ ನೀಡಿದ ಒಂದು ತಿಂಗಳ ಡೆಡ್ ಲೈನ್ ತಲುಪಲು ಹರಸಾಹಸ ಪಡುತ್ತಿವೆ.

ಸ್ವಚ್ಛಗೊಳ್ಳುತ್ತಿದೆ ಬೆಳ್ಳಂದೂರು ಕೆರೆ
ಬೆಳ್ಳಂದೂರು ಕೆರೆ ಸ್ವಚ್ಛತೆಯ ಮೊದಲ ಭಾಗವಾಗಿ ಜೆಸಿಬಿ ಯಂತ್ರಗಳ ಮೂಲಕ ಕೆರೆ ಸುತ್ತ ಮುತ್ತ ಬೆಳೆದ ಕಳೆಗಳನ್ನು ತೆಗೆಯಲಾಗುತ್ತಿದೆ.

ಹೂಳೆತ್ತುವ ಕಾರ್ಯ
ಕೆರೆಯಲ್ಲಿ ಹೂತಿರುವ ಕಸಗಳನ್ನು ತೆಗೆದು ಹೂಳೆತ್ತುವ ಕಾರ್ಯ ಸವಾಲಿನದ್ದು ಎನ್ನಿಸಿದೆಯಾದರೂ ಕೆರೆಯನ್ನು ಉಳಿಸುವ, ಪುನಶ್ಚೇತನಗೊಳಿಸುವ ಸಲುವಾಗಿ ಅದು ಅನಿವಾರ್ಯವಾಗಿದೆ.[ಬೆಳ್ಳಂದೂರು ಕೆರೆ ಕೇಸ್: ಬಾಗಿಲು ಮುಚ್ಚಿದ ಬಾಷ್ ಕಂಪನಿ]

ವಿದೇಶಿ ತಂತ್ರಜ್ಞಾನ ಬಳಕೆ?
ವಿದೇಶಿ ತಂತ್ರಜ್ಞಾನಗಳನ್ನು ಬಳಸುವ ಮೂಲಕವೂ ಬೆಳ್ಳಂದೂರು ಕೆರೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಅದರ ಸಾಧಕ - ಬಾಧಕಗಳನ್ನು ಚರ್ಚಿಸಿ ನಂತರ ಈ ಬಗ್ಗೆ ಯೋಚಿಸಲಾಗುವುದು.[ಬೆಳ್ಳಂದೂರು ಕೆರೆ ಬಳಿಯ 488 ಕೈಗಾರಿಕೆ ಮುಚ್ಚಿ: KSPCB]

ಕೆರೆಯ ಸುತ್ತ ಬೇಲಿ
ಸ್ವಚ್ಛತಾ ಕಾರ್ಯದ ಹಿನ್ನೆಲೆಯಲ್ಲಿ ಕೆರೆಯ ಸುತ್ತ ಬೇಲಿಯನ್ನೂ ಹಾಕಲಾಗಿದ್ದು, ದಾರಿ ಹೋಕರ ಮೇಲೇ ಬಂದು ಬೀಳುವ ದುರ್ನಾತಯುಕ್ತ ನೊರೆಯ ನಿಯಂತ್ರಣದ ಬಗ್ಗೆಯೂ ಯೋಚಿಸಲಾಗುತ್ತಿದೆ.[ಬೆಳ್ಳಂದೂರು ಕೆರೆ ಆಯ್ತು, ಇದೀಗ ಬೆನ್ನಿಗನಹಳ್ಳಿ ಕೆರೆಯಲ್ಲೂ ಬೆಂಕಿ!]

ಮಳೆ ಬಂದರೆ ದೇವರೇ ಕಾಯಬೇಕು!
ಬೆಳ್ಳಂದೂರು ಕೆರೆ ಭಾಗದಲ್ಲಿ ಮಳೆಯೇನಾದರೂ ಬಂದರೆ ಕೆರೆಯ ನೊರೆಯ ಪ್ರಮಾಣ ಮತ್ತಷ್ಟು ಜಾಸ್ತಿಯಾಗುವುದರಿಂದ ಈ ಭಾಗದ ಜನರನ್ನು ದೇವರೇ ಕಾಯಬೇಕಾದ ಪರಿಸ್ಥಿತಿ ಏರ್ಪಡುತ್ತದೆ. ಆದ್ದರಿಂದ ಮಳೆಗಾಲ ಆರಂಭವಾಗುವ ಮೊದಲೇ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಒಂದು ಅಂತ್ಯ ದೊರೆತರೆ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ತಾರು![ಸ್ವಚ್ಛಗೊಳ್ಳುತ್ತಿರುವ ಬೆಳ್ಳಂದೂರು ಕೆರೆಗೆ ಸಿಸಿಟಿವಿ ಕಣ್ಗಾವಲು]












Click it and Unblock the Notifications