ಬೆಂಗಳೂರಲ್ಲಿ 50 ಸಾವಿರ ಸಸಿಗಳನ್ನು ನೆಡಲು ಬಿಡಿಎ ಸಿದ್ಧತೆ
ಬೆಂಗಳೂರು, ಜೂನ್ 06: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 50 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ. ಬಿಡಿಎ ನಿರ್ಮಿಸುತ್ತಿರುವ ಲೇಔಟ್ಗಳನ್ನು ಹಸಿರು ಬಡಾವಣೆಗಳನ್ನಾಗಿ ನಿರ್ಮಾಣ ಮಾಡುವ ಪಣ ತೊಟ್ಟಿದೆ.
ಈ ಮಳೆಗಾಲದಿಂದಲೇ ಅನೇಕ ಬಡಾವಣೆಗಳಲ್ಲಿ ಸಸಿ ನೆಡಲು ಶೀಘ್ರದಲ್ಲೇ ಚಾಲನೆ ಸಿಗಲಿದೆ. ಇದಕ್ಕಾಗಿ ಪ್ರಾಧಿಕಾರವು ಅರಣ್ಯ ವಿಭಾಗ ಅನೇಕ ಸಿದ್ಧತೆಗಳಲ್ಲಿ ತೊಡಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಹಾಗೂ ಎಸ್ ಎಂ ವಿಶ್ವೇಶ್ವರಯ್ಯ ಲೇಔಟ್ಗಳಲ್ಲಿ ಸಸಿಗಳನ್ನು ನೆಡುವ ಗುರಿ ಇದೆ.

ಬಿಡಿಎ ಈಗಾಗಲೇ ಅಭಿವೃದ್ಧಿಪಡಿಸಿರುವ ಅನೇಕ ಬಡಾವಣೆಗಳಲ್ಲಿ ರಸ್ತೆ ಬದಿ ಹಾಗೂ ಪಾರ್ಕ್ಗಳಲ್ಲಿ ಸಸಿಗಳನ್ನು ನೆಟ್ಟಿವೆ. ಅಂಜನಾಪುರ, ಬನಶಂಕರಿ ಲೇಔಟ್, ಎಸ್ಎಂ ವಿ ಲೇಔಟ್ನಲ್ಲಿ ಈಗಾಗಲೇ 10 ಸಾವಿರ ಸಸಿಗಳನ್ನು ನೆಟ್ಟಿದೆ.

ಮಹಾನಗರ ವ್ಯಾಪ್ತಿಯಲ್ಲಿ ಹಸಿರುವ ಹೆಚ್ಚಿಸುವ ನಿಟ್ಟಿನಲ್ಲಿ ಬಿಡಿಎ ಒಂದು ಕೋಟಿ ಸಸಿ ನೆಡುವ ಹಸಿರು ಮಾಲೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2010ರಲ್ಲಿ ಆರಂಭವಾದ ಯೋಜನೆಯಡಿ ಈವರೆಗೆ 30 ಲಕ್ಷ ಗುರಿಯನ್ನು ದಾಟಿದೆ.

ಹೆಸರುಘಟ್ಟ ಹುಲ್ಲುಗಾವಲು, ಬಿಡಿಎ ಪುನರುಜ್ಜೀವನಗೊಳಿಸಿರುವ ಕೆರೆ ಹಾಗೂ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲಾಗಿದೆ, ಆದರೆ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಯೋಜನೆಗಳಿಗೆ ಮರುಜೀವ ಬಂದಿದ್ದು, ಬಿಡಿಎ ಮತ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದೆ.












Click it and Unblock the Notifications