42.63 ಕೋಟಿ ರೂ. ತೆರಿಗೆ ಬಾಕಿ: ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ದಾಳಿ, ಆಸ್ತಿ ಜಪ್ತಿಗೆ ಕೋರ್ಟ್ ತಡೆಯಾಜ್ಞೆ
ಆರಂಭದಲ್ಲಿ ಸುಮ್ಮನಿದ್ದ ಮಂತ್ರಿ ಮಾಲ್ ಅಧಿಕಾರಿಗಳು ಬಳಿಕ ಕೋರ್ಟ್ ತಡೆಯಾಜ್ಞೆ ತೋರಿಸಿದ್ದಾರೆ. ಹೀಗಾಗಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬಿಬಿಎಂಪಿ ಸಿಬ್ಬಂದಿ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ.
ಬೆಂಗಳೂರು, ಫೆಬ್ರವರಿ. 19: ಮಂತ್ರಿ ಮಾಲ್ನ ಆವರಣದಲ್ಲಿರುವ ಕುರ್ಚಿಗಳು, ಟೇಬಲ್ಗಳು, ಕಂಪ್ಯೂಟರ್ಗಳು ಮತ್ತು ಪೀಠೋಪಕರಣಗಳಂತಹ ಚರಾಸ್ತಿಗಳನ್ನು ತೆಗೆದುಕೊಂಡು ಆಸ್ತಿ ತೆರಿಗೆ ಕಟ್ಟದವರಿಗೆ ಪಾಠ ಕಲಿಸಲು ಹೊರಟಿದ್ದ ಬಿಬಿಎಂಪಿ ಅಧಿಕಾರಿಗಳು ಬರಿಗೈಲಿ ವಾಪಸ್ ಬಂದಿದ್ದಾರೆ.
ಹೌದು, 42.63 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ನ ಆಸ್ತಿ ಜಪ್ತಿ ಮಾಡಲು ನಿರ್ಧರಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ವಿಭಾಗದ ಅಧಿಕಾರಿಗಳು, ಜಪ್ತಿ ಮಾಡಿದ್ದ ವಸ್ತುಗಳನ್ನು ವಾಪಸ್ ನೀಡಿ ಹಿಂತಿರುಗಿದ್ದಾರೆ.
ಬಿಬಿಎಂಪಿ ಮಾಲ್ ಮೇಲೆ ದಾಳಿ ಮಾಡಿ, ಮಾಲ್ ಆವರಣದಲ್ಲಿರುವ ಕುರ್ಚಿಗಳು, ಟೇಬಲ್ಗಳು, ಕಂಪ್ಯೂಟರ್ಗಳು ಮತ್ತು ಪೀಠೋಪಕರಣಗಳನ್ನು ಜಪ್ತಿ ಮಾಡುತ್ತಿತ್ತು, ಆದರೆ ಆರಂಭದಲ್ಲಿ ಸುಮ್ಮನಿದ್ದ ಅಧಿಕಾರಿಗಳು ಬಳಿಕ ಕೋರ್ಟ್ ತಡೆಯಾಜ್ಞೆ ತೋರಿಸಿದ್ದಾರೆ. ಹೀಗಾಗಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ.

ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಸಿ.ಯೋಗೇಶ್ ಮಾತನಾಡಿ, ಪಶ್ಚಿಮ ವಲಯದಲ್ಲಿ ನಂಬರ್ ಒನ್ ತೆರಿಗೆ ಸುಸ್ತಿದಾರರೆಂದರೆ ಅದು ಮಂತ್ರಿ ಮಾಲ್. ಸುಮಾರು 40 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿಯ ದಾಲಿಗೆ ಹೆದರಿ ಮಾಲ್ ಅಧಿಕಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
"2018 ರಿಂದ ಇಲ್ಲಿಯವರೆಗೆ ಆಸ್ತಿ ತೆರಿಗೆ ಬಾಕಿ 42.63 ಕೋಟಿ ರೂ.ಗೆ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ ಅಧಿಕಾರಿಗಳು ಹೋಗಿ ಮಂತ್ರಿ ಮಾಲ್ನಿಂದ ಚರಾಸ್ತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಆರಂಭದಲ್ಲಿ ಕೋರ್ಟ್ ಆದೇಶದ ಬಗ್ಗೆ ಮಾಲ್ ಅಧಿಕಾರಿಗಳು ಹೇಳಿರಲಿಲ್ಲ. ದಿನದ ದ್ವಿತೀಯಾರ್ಧದಲ್ಲಿ ನ್ಯಾಯಾಲಯದ ಆದೇಶವನ್ನು ತೋರಿಸಿದರು. ಸಿವಿಲ್ ಕೋರ್ಟ್ನಿಂದ ಫೆಬ್ರವರಿ 2ರಂದೇ ತಡೆಯಾಜ್ಞೆ ತಂದಿದ್ದರು. ಅದರ ಪ್ರಕಾರ ಬಿಬಿಎಂಪಿಯು ಮಾಲ್ ಮಧ್ಯಪ್ರವೇಶಿಸುವಂತಿಲ್ಲ ಅಥವಾ ಆವರಣದ ಮುಂದೆ ದಾಳಿ ಮಾಡುವಂತಿಲ್ಲ. ಅವರು ನಮಗೆ ಆದೇಶವನ್ನು ತೋರಿಸಿದ ನಂತರ, ನಾವು ಹೊರಬಂದೆವು. ಈಗ ಕಾನೂನು ಹೋರಾಟ ನಡೆಸಿ ಆದೇಶ ತೆರವು ಮಾಡುತ್ತೇವೆ" ಎಂದು ಯೋಗೇಶ್ ಹೇಳಿದ್ದಾರೆ.
ಬಿಬಿಎಂಪಿ ಕಾಯ್ದೆಯ ಸೆಕ್ಷನ್ 148(1)ರ ಅಡಿಯಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಯೋಗೇಶ್ ಅವರು ಗುರುವಾರ ಮಾಲ್ ವಿರುದ್ಧ ಅಟ್ಯಾಚ್ ಮೆಂಟ್ ವಾರೆಂಟ್ ಜಾರಿ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

2020ರ ಆಗಸ್ಟ್ನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ 10 ಕೋಟಿ ರೂಪಾಯಿ ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಆಸ್ತಿ ಮುಟ್ಟುಗೋಲು ಹಾಕಲು ಬಿಬಿಎಂಪಿ ಕಂದಾಯ ವಿಭಾಗ ನಿರ್ಧರಿಸಿತ್ತು.












Click it and Unblock the Notifications