ಕೊರೊನಾ ವೈರಸ್ ಪರೀಕ್ಷೆ: ಸಿಲಿಕಾನ್ ಸಿಟಿಯ ಮಾಧ್ಯಮ ಪ್ರತಿನಿಧಿಗಳು ನಿರಾಳ!
ಬೆಂಗಳೂರು, ಏ. 29: ಇಡೀ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ಮಾಧ್ಯಮದವರನ್ನು ಕಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ್ದ ಮಾಧ್ಯಮ ಪ್ರತಿನಿಧಿಗಳ ಕೊರೊನಾ ವೈರಸ್ ಪರೀಕ್ಷಾ ವರದಿ ಬಂದಿದ್ದು, ಪರೀಕ್ಷೆಗೆ ಒಳಗಾಗಿದ್ದ ಬೆಂಗಳೂರಿನ ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ನೆಗೆಟಿವ್ ಬಂದಿದೆ. ಕಳೆದ ಏಪ್ರಿಲ್ 23 ರಿಂದ ಹಂತ ಹಂತವಾಗಿ ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳ ವರದಿಗಾರರು, ಕ್ಯಾಮರಾಮ್ಯಾನ್, ಟ್ರೈವರ್ಗಳು ಸೇರಿದಂತೆ ಒಟ್ಟು ಮಾಧ್ಯಮ ಸಂಸ್ಥೆಗಳ 1,170 ಸಿಬ್ಬಂದಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದರು.
ಇದೇ ಏಪ್ರಿಲ್ 22ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್-19 ಪರೀಕ್ಷಾ ಅಭಿಯಾನ ನಡೆಸಿತ್ತು. ಈ ತಪಾಸಣಾ ಶಿಬಿರದಲ್ಲಿ ಖಾಸಗಿ ಚಾನಲ್ಗಳ ವರದಿಗಾರರು, ಕ್ಯಾಮರಾಮ್ಯಾನ್ಗಳು, ಡ್ರೈವರ್ಗಳು, ಮಾಧ್ಯಮ ಸಂಸ್ಥೆಗಳ ಕಚೇರಿ ಸಿಬ್ಬಂದಿ, ಮುದ್ರಣ ಮಾಧ್ಯಮದ ವರದಿಗಾರರು, ಫೋಟೊಗ್ರಾಫರ್ಗಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದ ಸಿಬ್ಬಂದಿ ಪರೀಕ್ಷೆಗೆ ಒಳಗಾಗಿದ್ದರು ಎಂದು ರಾಜ್ಯ ಮಾಹಿತಿ ಮತ್ತು ವಾರ್ತಾ ಇಲಾಖೆಯ ಜಂಟಿ ನಿರ್ದೇಶ ಡಿ.ಪಿ. ಮುರಳೀಧರ್ ಅವರು ಮಾಹಿತಿ ನೀಡಿದ್ದಾರೆ.
ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!
ಏಪ್ರಿಲ್ 23 ರಿಂದ ಮೂರು ದಿನಗಳ ಕಾಲ ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಬೆಂಗಳೂರಿನ ಇಂದಿರಾ ನಗರದ ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಒಬ್ಬರಲ್ಲಿ ಕೊರೊನಾ ಸೋಂಕು ದೃಢ: ಪರೀಕ್ಷೆಗೆ ಒಳಗಾದವರಲ್ಲಿ ಖಾಸಗಿ ಚಾನಲ್ವೊಂದರ ಕ್ಯಾಮರಾಮ್ಯಾನ್ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅವರಿಗೆ ನಿಗದಿಗೊಳಿಸಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರೊಂದಿಗೆ ಸಂಪರ್ಕದಲ್ಲಿದ್ದ ಇತರ 36 ಮಾಧ್ಯಮ ಪ್ರತಿನಿಧಿಗಳನ್ನು ಖಾಸಗಿ ಹೊಟೆಲ್ನಲ್ಲಿ ಕಳೆದ 3 ದಿನಗಳಿಂದ ಕ್ವಾರಂಟೈನ್ ಮಾಡಲಾಗುತ್ತಿದೆ.
ಡಿಸಿಎಂ, ಗೃಹ ಸಚಿವರು ಹೋಂ ಕ್ವಾರಂಟೈನ್: ಖಾಸಗಿ ಚಾನಲ್ ಕ್ಯಾಮರಾಮ್ಯಾನ್ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆಯಿಂದ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಮನೆಯಲ್ಲಿಯೆ ಪ್ರತ್ಯೇಕವಾಗಿದ್ದಾರೆ. ಇವರೆಲ್ಲರೂ ಈಗಾಗಲೇ ಕೊರೊನಾ ವೈರಸ್ ತಪಾಸಣೆಗೆ ಒಳಗಾಗಿದ್ದು, ವರದಿಯಲ್ಲಿ ನೆಗಟಿವ್ ಎಂದು ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಕೋಂ ಕ್ವಾರಂಟೈನ್ನಲ್ಲಿರುವ ಮಾಹಿತಿ ಬಂದಿದೆ.