ನೈರೋಬಿ ಉಗ್ರರ ಅಟ್ಟಹಾಸಕ್ಕೆ ಕನ್ನಡಿಗ ಬಲಿ
ಬೆಂಗಳೂರು, ಸೆ.24 : ನೈರೋಬಿಯಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಕನ್ನಡಿಗರೊಬ್ಬರು ಬಲಿಯಾಗಿದ್ದಾರೆ. ಅಲ್ ಶಬಾಬ್ ಉಗ್ರರು ನಡೆಸಿದ ಹತ್ಯಾಕಾಂಡದಲ್ಲಿ ಬಿಡದಿಯ ಉದ್ಯಮಿಯೊಬ್ಬರು ಬಲಿಯಾಗಿದ್ದಾರೆ.
ಬಿಡದಿ ಬಳಿಯ ಹೆಜ್ಜಾಲದ ನಿವಾಸಿ ಸುದರ್ಶನ್ (50) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೀನ್ಯಾದ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಮೃತರ ಜೇಬಿನಲ್ಲಿದ್ದ ಕಾರ್ ಡಿಎಲ್ ಮತ್ತು ಇತರೆ ಗುರುತಿನ ಚೀಟಿ ಸಹಾಯದಿಂದ ಮೃತರು ಬೆಂಗಳೂರಿನವರು ಎಂದು ಖಚಿತಪಡಿಸಿದ್ದಾರೆ.

ಸುದರ್ಶನ್ ಅವರ ಸಹೋದರಿಗೆ ಕರೆ ಮಾಡಿರುವ ಭಾರತೀಯ ರಾಯಭಾರಿ ಕಚೇರಿ ಸಿಬ್ಭಂದಿ ಸುದರ್ಶನ್ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ ಮತ್ತು ಶವದ ಚಿತ್ರಗಳನ್ನು ಇ ಮೇಲ್ ಮೂಲಕ ಕಳುಹಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಕೀನ್ಯಾಗೆ ತೆರಳಿದ್ದ ಸುದರ್ಶನ್, ಶನಿವಾರ ಮಧ್ಯಾಹ್ನ 1.30ಕ್ಕೆ ದೂರವಾಣಿ ಕರೆ ಮಾಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದರು. ನಂತರ ಅವರಿಂದ ಯಾವುದೇ ಕರೆ ಬಂದಿರಲಿಲ್ಲ.
ಸಿಮೆಂಟ್ ಮಿಕ್ಸರ್ ಸಂಬಂಧ ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸುದರ್ಶನ್ ತಿಂಗಳಿನಲ್ಲಿ ಒಂದೆರಡು ಬಾರಿ ಆಫ್ರಿಕಾ ದೇಶಗಳಿಗೆ ಹೋಗಿ ಬರುತ್ತಿದ್ದರು. ಸಹೋದರರಾದ ರಾಮ ಪ್ರಸಾದ್ ಮತ್ತು ಶ್ರೀಧರ್ ಜೊತೆ ವಾಸಿಸುತ್ತಿದ್ದ ಅವರು ಅವಿವಾಹಿತರಾಗಿದ್ದರು.
ಸುದರ್ಶನ್ ಯೋಜನೆಯಂತೆ ಭಾನುವಾರ ಬೆಳಗ್ಗೆ ನೈರೋಬಿಯಿಂದ ಉಗಾಂಡಕ್ಕೆ ತೆರಳಬೇಕಾಗಿತ್ತು. ಸೋಮವಾರ ಮತ್ತು ಮಂಗಳವಾರ ಅಲ್ಲಿನ ಕೆಲಸಗಳನ್ನು ಮುಗಿಸಿಕೊಂಡು ಬುಧವಾರ ಬೆಂಗಳೂರಿಗೆ ಮರಳಬೇಕಾಗಿತ್ತು. (ಇಸ್ಲಾಂ ಕುರಿತು ಪ್ರಶ್ನಿಸಿ, ಭಾರತೀಯನ ಕೊಂದ ಉಗ್ರರು)
ಆದರೆ, ನೈರೋಬಿ ಶಾಪಿಂಗ್ ಮಾಲ್ ನಲ್ಲಿ ಶನಿವಾರ ಉಗ್ರರು ಸುದರ್ಶನ್ ಅವರನ್ನು ಕೊಂದು ಹಾಕಿದ್ದಾರೆ. ಉಗ್ರರ ದಾಳಿಯಿಂದ ಇದುವರೆಗೂ ಸುಮಾರು 70 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇವರಲ್ಲಿ ಮೂವರು ಭಾರತೀಯರು ಸೇರಿದ್ದಾರೆ.












Click it and Unblock the Notifications