ಬಿಬಿಎಂಪಿ ಟ್ರಕ್ಕಿಗೆ ಬಲಿಯಾದ ಬೆಂಗಳೂರಿನ ವಿದ್ಯಾರ್ಥಿನಿ
ಬೆಂಗಳೂರು, ಜನವರಿ 23: ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿಯಾದ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜ.22 ರಂದು ಬೆಳಿಗ್ಗೆ ನಡೆದಿದೆ.
ಖಾಸಗಿ ಕಾಲೇಜೊಂದರಲ್ಲಿ ಆರ್ಕಿಟೆಕ್ಚರ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಹಿತ್ಯ(24) ಮೃತ ದುರ್ದೈವಿ. ರಾಜಾಜೀನಗರದಲ್ಲಿ ವಾಸವಿರುವ ಸಾಹಿತ್ಯ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಆರ್ಚಿಟೆಕ್ಟ್ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು.
ಬೆಳಿಗ್ಗೆ ಕಂಪನಿಗೆ ತಮ್ಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಿಬಿಎಂಪಿ ಟ್ರಕ್ ಆಕೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ರಸ್ತೆಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಟ್ರಕ್ ನಿಲ್ಲಿಸಿದ್ದರೂ ಆಕೆಯ ಜೀವ ಉಳಿಯುತ್ತಿತ್ತು. ಆದರೆ ಕ್ರೂರಿ ಚಾಲಕ ಆಕೆಯ ಮೇಲೆ ವೇಗವಾಗಿ ಟ್ರಕ್ ಚಲಾಯಿಸಿದ್ದಾನೆ. ಟ್ರಕ್ ನ ಚಕ್ರಕ್ಕೆ ಸಿಲುಕಿದ್ದ ಆಕೆಯ ದೇಹವನ್ನು ಸುಮಾರು 200 ಮೀ.ವರೆಗೆ ಎಳೆದೊಯ್ಯಲಾಗಿತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ರಕ್ ಡ್ರೈವರ್ ನನ್ನು ಗುರುತಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಘಟನೆಯ ನಂತರ ಚಾಲಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
"ನನ್ನ ಮಗಳು ಅವಳದಲ್ಲದ ತಪ್ಪಿಗೆ ಸಾವಿಗೀಡಾಗಿದ್ದಾಳೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು" ಎಂದು ಮೃತ ಸಾಹಿತ್ಯ ಪಾಲಕರು ಭಾವುಕರಾಗಿ ನುಡಿದಿದ್ದಾರೆ.
ಬಹುಶಃ ಆ ಚಾಲಕ ಕುಡಿದ ಮತ್ತಿನಲ್ಲಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಗಾರ್ಬೇಜ್ ಟ್ರಕ್ ಚಲಾಯಿಸುವ ಬಹುಪಾಲು ಚಾಲಕರು ಪಾನಮತ್ತರಾಗಿರುತ್ತಾರೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವ ಅಗತ್ಯವಿದೆ.












Click it and Unblock the Notifications