ಕನಸು-ನನಸು, ಗುರಿಗಳ ಪಯಣದಲ್ಲಿ ಬತ್ತದ ಸ್ಪೂರ್ತಿ ಕಲಾಂ
ಬೆಂಗಳೂರು, ಜುಲೈ, 28 : 'ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿ, ಬದುಕಿನ ಗುರಿಯನ್ನು ಹೊತ್ತ ಕನಸುಗಳನ್ನು ನನಸುಗೊಳಿಸಿಕೊಳ್ಳುವವರೆಗೆ ಕನಸು ಕಾಣಿರಿ' ಎನ್ನುವ ವಿಜ್ಞಾನ ಕ್ಷೇತ್ರದ ಮೇರು ಪ್ರತಿಭೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಯಾವಾಗಲೂ ಯುವಕರು, ಮಕ್ಕಳು ಸೇರಿದಂತೆ ಇಡೀ ರಾಷ್ಟ್ರದ ಏಳಿಗೆ ಕಡೆಗೆ ತಮ್ಮ ಚಿತ್ತ ನೆಟ್ಟವರು.
ಸದಾ ಯುವಕರಿಗೆ, ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಅವರ ಮಾತುಗಳಲ್ಲಿ ಎಲ್ಲರನ್ನು ಹಿಡಿದಿಡುವ ಮಾಂತ್ರಿಕ ಶಕ್ತಿ ಇತ್ತು. ನಾಯಕತ್ವದ ಬಗ್ಗೆ ತಮ್ಮದೇ ನಿಲುವುಗಳನ್ನು ಹೊಂದಿದ್ದರು. ತಮ್ಮದೇ ಆದ ಬಹುದೊಡ್ಡದಾದ ಆಕಾಂಕ್ಷೆ, ಆಲೋಚನೆಗಳ ಜೊತೆಗೆ ಬಹಳ ಸರಳ ಸಜ್ಜನಿಕೆ ವ್ಯಕ್ತಿತ್ವದ ಕಲಾಂ ತಮ್ಮ ಬದುಕನ್ನು ಇನ್ನೊಬ್ಬರ ಬದುಕಿಗೆ ಸ್ಪೂರ್ತಿಯಾಗಿಸಿಕೊಂಡ ಇವರ ಮಾತುಗಳಲ್ಲಿ 'ಯುವಶಕ್ತಿ ಉಕ್ಕುಕ್ಕಿ ಕೊಚ್ಚಿ ಹೋಗುವ ಮುನ್ನ ಕಟ್ಟುವೆವು ನಾಡೊಂದನು, ರಸದ ಬೀಡೊಂದನು( ಗೋಪಾಲಕೃಷ್ಣ ಅಡಿಗ)' ಎನ್ನುವ ಸಾಲುಗಳ ದಿವ್ಯ ದೃಷ್ಟಿ ಯಾವಾಗಲೂ ಪ್ರತಿಧ್ವನಿಸುತ್ತಿದ್ದವು.[ರಾಮೇಶ್ವರಂನಲ್ಲಿ ಬುಧವಾರ ಅಬ್ದುಲ್ ಕಲಾಂ ಅಂತ್ಯಕ್ರಿಯೆ]
ನನಗೆ ನಾನು ಹಾರುವುದು ಬೇಕಾಗಿತ್ತು.....
ಇದನ್ನು ಹೇಳಿದವರು ನೆನ್ನೆಯಷ್ಟೇ ಇಹಲೋಕ ತ್ಯಜಿಸಿದ ಇಡೀ ರಾಷ್ಟ್ರದ ಸ್ಫೂರ್ತಿ ಚಿಲುಮೆಯಾದ ಡಾ. ಅಬ್ದುಲ್ ಕಲಾಂ. 'ನಾನು 1941ರಲ್ಲಿ ಕಲಾಂ ಅವರು 5ನೇ ತರಗತಿಯಲ್ಲಿ ಓದುತ್ತಿದ್ದರು. ಆಗ ಅವರ ಅಚ್ಚುಮೆಚ್ಚಿನ ವಿಜ್ಞಾನ ಶಿಕ್ಷಕರಾದ ಬಾಲಸುಬ್ರಹ್ಮಣ್ಯಂ ತರಗತಿಗೆ ಪ್ರವೇಶಿಸುತ್ತಲೇ, ತರಗತಿಯ ಕಪ್ಪುಹಲಗೆಯ ಮೇಲೆ ಒಂದು ಪಕ್ಷಿ ಚಿತ್ರ ಬರೆದು ಅದು ಹೇಗೆ ಹಾರುತ್ತದೆ, ಅದರ ವಿಶೇಷತೆಗಳ ಬಗ್ಗೆ ವಿವರಿಸುತ್ತಿದ್ದರು. ಆಗಲೇ ನಾನೂ ಪಕ್ಷಿಯಂತೆ ಹಾರಬೇಕು ಎಂದು ನಿರ್ಧರಿಸಿದೆ. ಅಂದೇ ನನ್ನ ಬದುಕಿನ ಗುರಿ ಬದಲಾವಣೆಗೊಂಡಿತು. ಗುರಿ ಬದುಕನ್ನು ಬದಲಿಸಿತು ಎಂದು ನೆನೆಯುತ್ತಾರೆ'. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ನಾ ಕಂಡ ಕನಸನ್ನು ನನಸಾಗಿಸಿಕೊಂಡೆ......
ನಾನು ಪೈಲಟ್ ಆಗಬೇಕು, ಬಾನಂಗಳದಲ್ಲಿ ವಿಮಾನ ಓಡಿಸಬೇಕೆಂಬುದ ಅಭಿಲಾಷೆಯಿಂದ ಪೈಲಟ್ ತರಬೆತಿಗೆ ಪ್ರಯತ್ನ ಪಟ್ಟೆ. ಅಲ್ಲಿ ಕೇವಲ 9 ಸೀಟುಗಳು ಮಾತ್ರ ಖಾಲಿ ಇದ್ದವು, ಆದರೆ ನಾನು 10ನೇ ಸ್ಥಾನ ಪಡೆದಿರುವುದರಿಂದ ಪೈಲಟ್ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಕೆಲವೊಮ್ಮೆ ನಾನು ಏನನ್ನು ಬಯಸಿರುತ್ತೇವೋ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಮ್ಮನಾಗಿದ್ದೆ.
ಬಳಿಕ 2002ರಲ್ಲಿ ಭಾರತದ ಹಲವಾರು ನಾಯಕರು ಭಾರತದ ರಾಷ್ಟ್ರಪತಿಯಾಗುವಿರಾ? ಎಂಬುದಾಗಿ ಕೇಳಿದರು. ಆಗ ನಾನು ಮರು ಮಾತನಾಡದೇ ಸಮ್ಮತಿ ಸೂಚಿಸಿದೆ. ಬಳಿಕ 2005ರಲ್ಲಿ ವಾಯಸೇನೆಯ ಮುಖ್ಯಸ್ಥರು ನನ್ನ ಭೇಟಿ ಮಾಡಲು ಬಂದಾಗ ನನ್ನ ಸಾಕಾರಗೊಳ್ಳದ ಪೈಲಟ್ ಕನಸಿನ ಕುರಿತಾಗಿ ಅವರ ಬಳಿ ಹಂಚಿಕೊಂಡಿದೆ. ಕೊನೆಗೆ ವಾಯು ಸೇನೆ ಮುಖ್ಯಸ್ಥರಿಂದ ಪೈಲಟ್ ತರಬೇತಿ ಪಡೆದ ನಾನು ಸುಮಾರು 2007ರಲ್ಲಿ 30 ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿದ ಖುಷಿ, ನನ್ನ ಗುರಿ ಮುಟ್ಟಿದ ಸಂತೋಷ ಎರಡೂ ನನ್ನೊಟ್ಟಿಗಿದೆ.
'ನಿಮ್ಮ ಜೀವನದಲ್ಲಿ ಗುರಿ ಮತ್ತು ಕನಸು ಎರಡೂ ಇದೆಯಾ?, ಹಾಗಾದರೆ ಸಂಪೂರ್ಣ ಜ್ಞಾನವನ್ನು ಸಂಪಾದಿಕೊಳ್ಳುವತ್ತಾ ಮುನ್ನಡೆಯಿರಿ. ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನಶೀಲರಾಗಿ. ನಿಮ್ಮ ಯಶಸ್ಸಿನ ಮೂಲಕ ನಿಮ್ಮ ಎಲ್ಲಾ ತೊಂದರೆಗಳು ಮಾಯವಾಗಲಿದೆ'.