ಅನ್ನಭಾಗ್ಯ ಬಗ್ಗೆ ದೂರಿದ್ದರೆ ಕರೆ ಮಾಡಿ!
ಬೆಂಗಳೂರು, ನ. 14 : ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಬಗ್ಗೆ ದೂರುಗಳು ಹೆಚ್ಚಾಗಿದ್ದರಿಂದ ಆಹಾರ ಸಹಾಯವಾಣಿ ಎಂಬ ಕಾಲ್ ಸೆಂಟರ್ ಆರಂಭಿಸಲಾಗಿದೆ. ಅನ್ನಭಾಗ್ಯ ಯೋಜನೆಯ ಕುರಿತು ಸಾರ್ವಜನಿಕರು ತಮ್ಮ ದೂರುಗಳನ್ನು ಕಾಲ್ ಸೆಂಟರ್ ಗೆ ಕರೆ ಮಾಡುವ ಮೂಲಕ ನೀಡಬಹುದುದಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ 1967 ನಂಬರಿನ ಆಹಾರವಾಣಿ'ಗೆ ಚಾಲನೆ ನೀಡಿದರು. ಸಹಾಯವಾಣಿ ನಿರ್ವಹಣೆಗೆ ಆಹಾರ ಮತ್ತು ನಾಗರಿಕ ಸರಬರಾಜು ಆಯುಕ್ತರ ಕಚೇರಿಯಲ್ಲಿ 'ಸಾರ್ವಜನಿಕ ಕುಂದು-ಕೊರತೆ ಶಾಖೆ' (ಪಿಜಿಆರ್) ಎಂಬ ಪ್ರತ್ಯೇಕ ಶಾಖೆ ತೆರೆಯಲಾಗಿದೆ ಎಂದು ಸಚಿವರು ಹೇಳಿದರು.

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವೆರೆಗೆ 4 ದೂರವಾಣಿ ಲೈನ್ಗಳು ಸಹಾಯವಾಣಿಯಾಗಿ ಕಾರ್ಯ ನಿರ್ವಹಿಸಲಿವೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ದೂರುಗಳನ್ನು ಸ್ವೀಕರಿಸಲು ಇಲಾಖೆಯ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಸಹಾಯವಾಣಿ 'ಜಿಲ್ಲಾ ದೂರು ಮತ್ತು ಕುಂದುಕೊರತೆ ನಿವಾರಣಾ' ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಉಚಿತ ಕರೆ ಮಾಡುವ ಮೂಲಕ ಜನರು ಅನ್ನಭಾಗ್ಯ ಯೋಜನೆಯ ಕುರಿತು ಜನರು ದೂರು ಸಲ್ಲಿಸಬಹುದಾಗಿದೆ. ಗ್ರಾಹಕರು ಮತ್ತು ಪಡಿತರ ಚೀಟಿ ಹೊಂದಿರುವ ಜನರಿಗೆ ಉತ್ತಮ ಸೇವೆ ಒದಗಿಸಲು ಈ ಸೇವೆ ಆರಂಭಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಈ ಸಹಾಯವಾಣಿ ಆರಂಭಿಸಲಾಗಿದ್ದು, 1967 ಸಂಖ್ಯೆಯು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ವಿಶೇಷ ಸಂಖ್ಯೆಯಾಗಿದೆ ಎಂದು ಸಚಿವರು ಹೇಳಿದರು.
ಎಂತಹ ದೂರು ನೀಡಬಹುದು : ಪಡಿತರ ಚೀಟಿ ವಿತರಣೆ, ನಕಲಿ ಪಡಿತರ ಚೀಟಿ ಬಗ್ಗೆ, ನ್ಯಾಯಬೆಲೆ ಅಂಗಡಿಗಳಲ್ಲಿ ಅಸಮರ್ಪಕ ಪಡಿತರ ವಿತರಣೆ, ಅಧಿಕಾರಿಗಳ ಕಾರ್ಯವೈಖರಿ, ನ್ಯಾಯಬೆಲೆ ಅಂಗಡಿ ಮತ್ತು ಸಂಘಗಳ ಬಗ್ಗೆ, ಅಸಮರ್ಪಕ ಅಡುಗೆ ಅನಿಲ ವಿತರಣೆ ಹಾಗೂ ಇಲಾಖೆಗೆ ಸಂಬಂಧಿಸಿದ ಮಾಹಿತಿ ಬಗ್ಗೆ ಆಹಾರವಾಣಿ ಮೂಲಕ ಜನರು ದೂರುಗಳನ್ನು ನೀಡಬಹುದು.
ಅನ್ನಭಾಗ್ಯ ಫಲಕ ಕಡ್ಡಾಯ : ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ನಾಮಫಲಕಗಳಲ್ಲಿ 'ಅನ್ನಭಾಗ್ಯ' ಎಂದು ಬರೆಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಾಜ್ಯದ ಸರ್ಕಾರಿ, ಖಾಸಗಿ ಮತ್ತು ಸಹಕಾರಿ ಸೇರಿದಂತೆ ಎಲ್ಲ 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ 'ಅನ್ನಭಾಗ್ಯ' ಎಂದು ಬರೆಸಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸದ ಏಕರೂಪದ ನಾಮಫಲಗಳನ್ನು ಪ್ರದರ್ಶಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದರು.












Click it and Unblock the Notifications