ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಹಳೇ ವಿದ್ಯಾರ್ಥಿಗಳಿಂದ ಮಾದರಿ ಕಾರ್ಯ
ಬೆಂಗಳೂರು, ಜುಲೈ 12: ಶಿಕ್ಷಣ ಮುಗಿಸಿ ದಶಕಗಳ ನಂತರ ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ಪ್ರಜೆಗಳಾಗಿ ಗುರುತಿಸಿಕೊಳ್ಳುವುದಕ್ಕೆ ಆರಂಭಿಸಿದ ಮೇಲೆ ಹಿಂದೊಮ್ಮೆ ತಿರುಗಿ ನೋಡಿದರೆ ಅಚ್ಚರಿಯಾಗುತ್ತದೆ.
ನಾವು ಕಲಿತ ಶಾಲೆ, ಕೂರುತ್ತಿದ್ದ ಬೆಂಚ್, ಕಲಿಸಿದ ಗುರುಗಳು, ಆಟವಾಡಿದ ಮೈದಾನ, ನಡೆದಾಡಿದ ಕಾರಿಡಾರ್, ಆ ಸುಂದರ ಬಾಲ್ಯ ಕಣ್ಮುಂದೆ ಬಂದು ಮನಸ್ಸು ಹಸನಾಗುತ್ತದೆ. ಆದರೆ ಹೀಗೆ ನೆನಪಿಸಿಕೊಂಡು ಸುಮ್ಮನಾಗದೆ, ತಾವು ಕಲಿತ ಶಾಲೆಗೆ ಭೇಟಿ ನೀಡಿ, ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತ, ಆ ಸುವರ್ಣ ಯುಗಗಳನ್ನು ನೆನಪಿಸಿಕೊಳ್ಳುತ್ತ ತಾವು ಕಲಿತ ಶಾಲೆಗೆ ಈಗ ತಾವೇನು ನೀಡಬಹುದು ಎಂದು ಯೋಚಿಸುವವರು ಎಷ್ಟು ಜನ?
ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ!
ಆ ಕೆಲಸವನ್ನು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಗಳ ಹಳೇ ವಿದ್ಯಾರ್ಥಿಗಳು ಮಾಡಿದ್ದಾರೆ. ತಾವು ಕಲಿತ ಶಾಲೆಯ ಹಳೆ ವಿದ್ಯಾರ್ಥಿಗಳನ್ನೆಲ್ಲ ಒಂದುಗೂಡಿಸಿ, ಫೇಡರೇಶನ್ ಆಫ್ ಅಲುಮ್ನಿ ಅಸೋಸಿಯೇಶನ್ ಆಫ್ ಕೇಂದ್ರೀಯ ವಿದ್ಯಾಲಯ(ಕೇಂದ್ರೀಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ)ವನ್ನು ಕಟ್ಟಿಕೊಂಡಿದ್ದಾರೆ. ಶಾಲೆಯ ಹಳೆಯ ದಾಖಲೆಗಳ ಸಹಾಯದಿಂದ ಹಳೇ ವಿದ್ಯಾರ್ಥಿಗಳ ಸಂಪರ್ಕ ಸಂಖ್ಯೆಯನ್ನು ಪಡೆದು, ಅವರನ್ನು ಸಂಪರ್ಕಿಸಿದ್ದಾರೆ.
60 ವರ್ಷದ ವೃದ್ಧರಿಂದ ಹಿಡಿದು, 20 ವರ್ಷದ ಯುವಕರವರೆಗೂ ಕೇಂದ್ರಿಯ ವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳೆಲ್ಲ ಈ ಸಂಘವನ್ನು ಸೇರಿಕೊಳ್ಳುತ್ತಿದ್ದಾರೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ, ಶಾಲೆಯ ಬೆಳವಣಿಗೆಗೆ ಅಗತ್ಯ ಸಹಕಾರವನ್ನು ಮಾಡಲಿದ್ದಾರೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಪ್ರತಿಭಾನ್ವೇಷಣೆಯನ್ನೂ ಮಾಡಲಿದ್ದಾರೆ.
ಇದರೊಂದಿಗೆ ಸ್ವಚ್ಛ ಭಾರತ, ಭೇಟಿ ಬಚಾವೋ-ಭೇಟಿ ಪಡಾವೋ ಸೇರಿದಂತೆ ಸರ್ಕಾರದ ಉಪಯುಕ್ತ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ.
#GiveBacktoKV ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಮತ್ತು ತಮ್ಮ ಶಾಲೆಗೆ ಕೊಡುಗೆ ನೀಡುವ ಕಾರ್ಯವೂ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿದೆ. ನಿಜವಾದ ಗುರುದಕ್ಷಿಣೆ ಎಂದರೆ ಇದೇ ಅಲ್ಲವೇ?
ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಪಾಲಕರಿಗೆ ಆಗಾಗ ವರ್ಗಾವಣೆಯಾಗುವ ಕಾರಣ, ಅಂಥವರ ಮಕ್ಕಳಿಗಾಗಿಯೇ ಸ್ಥಾಪನೆಯಾದ ಕೇಂದ್ರೀಯ ವಿದ್ಯಾಲಯ, ಪಾಲಕರ ವರ್ಗಾವಣೆಯಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುತ್ತಿದೆ.