ಬೆಂಗಳೂರಿಗೆ ಬಂತು ಜಯಲಲಿತಾ ಅಮ್ಮಾ ಕ್ಯಾಂಟೀನ್!
ಬೆಂಗಳೂರು, ಫೆ.16 : ತಮಿಳುನಾಡು ಮುಖ್ಯಮಂತ್ರಿ ಜಯಲಿಲಿತಾ ಅವರ ಮಹತ್ವದ ಮತ್ತು ಪ್ರಸಿದ್ಧ ಯೋಜನೆ ಅಮ್ಮಾ ಕ್ಯಾಂಟೀನ್ ಬೆಂಗಳೂರಿಗೆ ಬಂದಿದೆ. ಹೌದು. ಫೆ.16ರ ಭಾನುವಾರದಿಂದ ಅಮ್ಮಾ ಕ್ಯಾಂಟೀನ್ ಕಲಾಸಿಪಾಳ್ಯದಲ್ಲಿ ಆರಂಭವಾಗಿದೆ.
ಜಯಲಲಿತಾ ಅವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಕಲಾಸಿಪಾಳ್ಯದ ನಾಗೇಶ್ವರ ಗಾರ್ಡನ್ ನಲ್ಲಿ ಅಮ್ಮಾ ಕ್ಯಾಂಟೀನ್ ಆರಂಭಿಸಲಾಗಿದೆ ಎಂದು ಎಐಎಡಿಎಂಕೆ ಕರ್ನಾಟಕ ಶಾಖೆಯ ಮಾಜಿ ಕಾರ್ಯದರ್ಶಿ ಕೆ.ಆರ್.ಕೃಷ್ಣರಾಜು ಹೇಳಿದ್ದಾರೆ. [ಅಮ್ಮಾ ಮಿನರಲ್ ವಾಟರ್]

ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇದನ್ನು ಆರಂಭಿಸುತ್ತಿರುವುದಾಗಿ ಕೃಷ್ಣರಾಜು ಹೇಳಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಫೆ.23ರಂದು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. [ದೆಹಲಿಯಲ್ಲಿ ಅಮ್ಮಾ ಮೆಸ್]
1ರೂ.ಗೆ ಇಡ್ಲಿ, 5 ರೂಗೆ ಪೊಂಗಲ್ ಅನ್ನ ಸಾಂಬಾರ್ : ಕಲಾಸಿಪಾಳ್ಯದ ಅಮ್ಮಾ ಕ್ಯಾಂಟೀನ್ ನಲ್ಲಿ 1 ರೂ.ಗೆ ಇಡ್ಲಿ, 5 ರೂ.ಗೆ ಪೊಂಗಲ್, ಅನ್ನಸಾಂಬಾರ್. 3 ರೂ.ಗೆ ಮೊಸರನ್ನ ನೀಡಲಾಗುವುದು ಎಂದು ಕೃಷ್ಣರಾಜು ಹೇಳಿದ್ದಾರೆ. ಆರಂಭದಲ್ಲಿ ಕೇವಲ ಭಾನುವಾರ ಮಾತ್ರ 1 ರೂ.ಗೆ 1 ಇಡ್ಲಿ ನೀಡಲಾಗುವುದು ನಂತರ ಪ್ರತಿದಿನಕ್ಕೆ ಯೋಜನೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಸರ್ಕಾರ ನೀಡುವಂತೆ ಅಮ್ಮಾ ಕ್ಯಾಂಟೀನ್ ಗೆ ಸರ್ಕಾರ ಅಗತ್ಯ ಬೆಂಬಲ ನೀಡಿದರೆ, ಬೆಂಗಳೂರಿನ ಹಲವು ಕಡೆ ಕ್ಯಾಂಟೀನ್ ತೆರೆಯಲು ನಾವು ಸಿದ್ಧರಿದ್ದೇನೆ ಎಂದು ಕೃಷ್ಣರಾಜು ತಿಳಿಸಿದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.












Click it and Unblock the Notifications