ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ: ಎಐಎಡಿಎಂಕೆ
ಬೆಂಗಳೂರು, ಜುಲೈ 24: ಶಶಿಕಲಾ ನಟರಾಜನ್ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸವಲತ್ತು ಒದಗಿಸಲಾಗಿದೆ ಎಂದು ಆರೋಪಿಸಿದ ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಐಎಡಿಎಂಕೆ ಬೆದರಿಕೆ ಹಾಕಿದೆ.
ಪಕ್ಷದ ಬೆಂಗಳೂರು ಘಟಕವು ಈ ಸಂಬಂಧ ನಿರ್ಣಯ ಕೈಗೊಂಡಿದೆ. "ನಾವು ವಿನಯ್ ಕುಮಾರ್ ಅವರ ವರದಿಗಾಗಿ ಕಾಯುತ್ತಿದ್ದೇವೆ. ಅದು ಬಂದ ನಂತರ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಅವರ ಹತ್ತಿರ ಸಾಕ್ಷ್ಯಗಳಿದ್ದಲ್ಲಿ ಕೋರ್ಟ್ ನಲ್ಲಿ ಹಾಜರುಪಡಿಸಲಿ. ಅನಗತ್ಯವಾಗಿ ನಮ್ಮ ಮರ್ಯಾದೆ ಕಳೆದಿದ್ದಾರೆ" ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇನ್ನೇನು ಬರುವ ವೇಳೆಯಲ್ಲಿ ಇಂಥ ಆರೋಪ ಮಾಡಲಾಗಿದೆ. ಮತ್ತು ಅದೇಕೆ ಇಂಥ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಪುಗಳೇಂದಿ ಹೇಳಿದ್ದಾರೆ.
ಪಕ್ಷ ಹಾಗೂ ಶಶಿಕಲಾ ಅವರ ವರ್ಚಸ್ಸಿಗೆ ಹಾನಿ ಮಾಡುವ ಪ್ರಯತ್ನವಾಗಿ ರೂಪಾ ಇಂಥ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಇಬ್ಬರು ಐಪಿಎಸ್ ಅಧಿಕಾರಿಗಳ ವೈಯಕ್ತಿಕ ಕಿತ್ತಾಟದಲ್ಲಿ ಶಶಿಕಲಾ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಪಕ್ಷದ ಮುಖಂಡ ಹಾಗೂ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಆರೋಪ ಮಾಡಿದ್ದಾರೆ.












Click it and Unblock the Notifications