ಕಾವೇರಿ ನಮ್ಮದು: ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಪ್ರೇಮ್: ನೆಟ್ಟಿಗರು ಹೇಳಿದ್ದೇನು
ಕಾವೇರಿ ವಿವಾದ ಸದ್ಯ ಜೋರಾಗಿದ್ದು, ಕರ್ನಾಟಕದ ಪ್ರತಿಭಟನೆ, ಆಕ್ರೋಶದ ನಡುವೆಯೂ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಆದೇಶ ನೀಡಿದ್ದು ಪ್ರತಿಭಟನೆ ಮತ್ತಷ್ಟು ಜೋರಾಗಿದೆ. ಇದರ ನಡುವೆ ನಟ ನೆನಪಿರಲಿ ಪ್ರೇಮ್ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಹೌದು, ನಟ ನೆನಪಿರಲಿ ಪ್ರೇಮ್ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. "ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ, ದಯವಿಟ್ಟು ನಮ್ಮ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ. ಕಾವೇರಿ ನಮ್ಮದು" ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಕ್ತದಲ್ಲಿ ಪತ್ರ ಬರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಅನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 25 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ 29ರಂದು ನಡೆದ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲ ವ್ಯಕ್ತಪಡಿಸಿತ್ತು. ಬಂದ್ನಲ್ಲಿ ಪ್ರಮುಖ ನಟ-ನಟಿಯರು ಭಾಗವಹಿಸಿ ವಿವಾದ ಬಗೆಹರಿಸುವಂತೆ ಒತ್ತಾಯಿಸಿದರು.
ನೆಟ್ಟಿಗರ ಪ್ರತಿಕ್ರಿಯೆ ಏನು?
ನೆನಪಿರಲಿ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಕ್ಕೆ ನೆಟ್ಟಿಗರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಲವರು ಪ್ರೇಮ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದರೆ ಇನ್ನೂ ಕೆಲವರು ದೂಷಿಸಿದ್ದಾರೆ.
ಮೋದಿ ಅವರನ್ನು ಕಾವೇರಿ ವಿವಾದದಲ್ಲಿ ಯಾಕೆ ತರುತ್ತೀರಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿ ಎಂದು ಕೆಲವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಇದ್ದಾರೆ ಅವರನ್ನು ಕೇಳಲು ಧೈರ್ಯ ಮಾಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, "ಸಿಎಂಗೆ ಹೇಳೋಕೆ ಆಗದೆ ಇರೋರು ಪ್ರಧಾನಿಗೆ ಏನು ಹೇಳ್ತೀರಾ?, ನಮ್ ಸಿಎಂ ಸ್ಟ್ರಾಂಗ್ ಇದ್ರೆ ಯಾವ ಪ್ರಧಾನಿ ಏನು ಮಾಡೋಕೆ ಆಗುತ್ತೆ, ನೀರು ಬಿಡಲ್ಲ ಎಂದು ಹೇಳಲಿ, ಪ್ರಧಾನಿ ಬಂದು ಏನು ಕೆಆರ್ ಎಸ್ ಗೇಟ್ ಓಪನ್ ಮಾಡ್ತಾರ, ಮೊದಲು ನಮ್ ಸಿಎಂಗೆ ಪತ್ರ ಬರಿರಿ, ಆಮೇಲೆ ಪ್ರಧಾನಿಗೆ ಬರಿರಿ, ನೀವು ಸೆಲೆಬ್ರಟಿಗಳು ಹೀಗೆ ರಕ್ತದಲ್ಲಿ ಬರೆದ್ರೆ, ಅಭಿಮಾನಿಗಳು ಅದನ್ನೇ ಮಾಡುತ್ತಾರೆ" ಎಂದು ಹೇಳಿದ್ದಾರೆ.












Click it and Unblock the Notifications