ಸದನಕ್ಕೆ ಜನಪ್ರತಿನಿಧಿಗಳ ಗೈರು: ವಾಟಾಳ್ ಕತ್ತೆ ಮೆರವಣಿಗೆ
ಬೆಂಗಳೂರು, ಫೆಬ್ರವರಿ 11: ವಿಧಾನಸಭೆ ಮತ್ತು ವಿಧಾನಪರಿಷತ್ ಗೆ ಸಚಿವರು, ಶಾಸಕರು ಪ್ರತಿ ಅಧಿವೇಶನದಲ್ಲೂ ಗೈರಾಗುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕತ್ತೆ ಮೆರಣವಣಿಗೆ ನಡೆಸಿದರು.
ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ಮಾಡಿ ಮಾತನಾಡಿದ ಅವರು, ಸಚಿವರು, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಗೌರವ ಸ್ಥಾನವಿದೆ. ಜವಾಬ್ಧಾರಿ ಅರಿತು ಕೆಲಸ ನಿರ್ವಹಿಸದೇ ಶಾಸಕರು ಅಧಿವೇಶನಗಳಿಗೆ ಗೈರು ಹಾಜರಾಗುವುದು ಪ್ರಭಾಪ್ರಭುತ್ವಕ್ಕೆ ಮಾಡುವ ಅವಮಾನ ಎಂದು ಕಿಡಿಕಾರಿದರು.[ಮೈಸೂರಲ್ಲಿ ವಾಟಾಳ್ ಏಕಾಂಗಿ ಪ್ರತಿಭಟನೆ]
ಇನ್ನು ಸಂವಿಧಾನದಲ್ಲಿ ತಿದ್ದುಪಡಿ ತಂದು ಅಧಿವೇಸನದಲ್ಲಿ ಸಚಿವರು, ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ಮಾಡಬೇಕು. ಸದನದ ಸಮಯವನ್ನು ಸದುಪಯೋಗ ಪಡಿಸಿಕೊಂಡು ಅರ್ಥಪೂರ್ಣ ಚರ್ಚೆ ನಡೆಸಿ ಉತ್ತಮ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದರು.
ಅದರೆ ಅಧಿಕಾರ ಸಿಕ್ಕ ಜನಪ್ರತಿನಿಧಿಗಳು ಮೊದಲು ಸದನಗಳಲ್ಲಿ ಭಾಗವಹಿಸುವುದಿಲ್ಲ. ಇನ್ನೊಂದು ಭಾಗವಹಿಸಿದರೂ ಸದನದಲ್ಲಿ ದನಿ ಎತ್ತುವುದೇ ಇಲ್ಲ. ಹೀಗಿದ್ದಾಗ ತಮ್ಮ ಕ್ಷೇತ್ರದ ಜನರಿಗೆ ಶಾಸನಗಳನ್ನು ಹೇಗೆ ರೂಪಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಗೈರು ಹಾಜರಾಗುವ ಜನಪ್ರತಿನಿಧಿಗಳ ಬಗ್ಗೆ ಜನರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.