ಬೆಂಗಳೂರಿನಲ್ಲಿ ಮಾಜಿ ಇನ್ಫಿ ಉದ್ಯೋಗಿಗಳ ಕದನ
ಬೆಂಗಳೂರು, ಫೆ.21: ಇನ್ಫೋಸಿಸ್ ನ ಆಡಳಿತ ಮಂಡಳಿಯ ಮಾಜಿ ಸದಸ್ಯ ವಿ.ಬಾಲಕೃಷ್ಣನ್ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಕಾಂಗ್ರೆಸ್ ಪಕ್ಷಕ್ಕಾಗಿ ನಂದನ್ ನಿಲೇಕಣಿ ಪ್ರಚಾರ ಆರಂಭಿಸಿದ್ದಾರೆ. ಈ ಇಬ್ಬರು ಈ ಬಾರಿ ಬೆಂಗಳೂರಿನಿಂದಲೇ ಲೋಕಸಭೆ ಚುನಾವಣೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.
ನಂದನ್ ನಿಲೇಕಣಿ ಅವರು ಇನ್ಫೋಸಿಸ್ ತೊರೆದ ಮೇಲೆ ಆಧಾರ್ ಗುರುತಿನ ಚೀಟಿ ಯೋಜನೆ ಅಧ್ಯಕ್ಷರಾದರು. ನಂತರ ಯೋಜನೆ ಒಂದು ಹಂತ ತಲುಪಿದ ಮೇಲೆ ಸಕ್ರಿಯ ರಾಜಕೀಯಕ್ಕೆ ಧುಮುಕಿ ಈಗ ಲೋಕಸಭೆ ಚುನಾವಣೆ ಎದುರಿಸಲು ಅಣಿಯಾಗುತ್ತಿದ್ದಾರೆ. ಇವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತವಾಗಿದೆ.
ಇತ್ತ ಇನ್ಫೋಸಿಸ್ ತೊರೆದ ಮೇಲೆ ಅರವಿಂದ್ ಕೇಜ್ರಿವಾಲ್ ಅವರ ಜನ ಸಾಮಾನ್ಯರ ಪಕ್ಷ ಸೇರಿದ ಇನ್ಫೋಸಿಸ್ ನ ಮಾಜಿ ಸಿಎಫ್ ಒ ವಿ. ಬಾಲಕೃಷ್ಣನ್ ಅವರನ್ನು ಚುನಾವಣೆ ಕಣಕ್ಕಿಳಿಸಲು ಆಮ್ ಆದ್ಮಿ ಪಕ್ಷ ಚಿಂತನೆ ನಡೆಸಿದೆ. ಬಹುತೇಕ ಬೆಂಗಳೂರು ಕೇಂದ್ರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಆದರೆ, ಚುನಾವಣೆ ಸ್ಪರ್ಧಿಸುವ ಬಗ್ಗೆ ಬಾಲಕೃಷ್ಣನ್ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಒಂದು ವೇಳೆ ಬಾಲ ಕಣಕ್ಕಿಳಿದರೆ ಇನ್ಫೋಸಿಸ್ ನ ಇಬ್ಬರು ಅತಿರಥ ಮಹಾರಥರು ಚುನಾವಣೆ ಕಣಕ್ಕೆ ಶೋಭೆ ತರುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

'ಐಐಟಿ ಪದವಿಧರರೊಬ್ಬರ ಅತ್ಯಂತ ಯಶಸ್ವಿ ಕಂಪನಿ ಎಂದರೆ ಆಮ್ ಆದ್ಮಿ ಪಕ್ಷ. ದೇಶದಲ್ಲಿ ನಡೆಯುತ್ತಿರುವ ಈ ಕ್ರಾಂತಿಯಲ್ಲಿ ಭಾಗವಹಿಸಲು ನಾನು ಬಯಸುತ್ತೇನೆ. ಕೇವಲ 10 ರೂ. ಕೊಟ್ಟು ನಾನು ಪಕ್ಷದ ಸದಸ್ಯನಾಗಿದ್ದೇನೆ. ಎಎಪಿ ಜನ ಸಾಮಾನ್ಯರ ಒಳಿತಿಗೆ ಸಾಕಷ್ಟು ಕೆಲಸಗಳನ್ನು ಮಾಡಲಿದೆ ಎಂಬ ವಿಶ್ವಾಸ ನನಗಿದೆ'' ಎಂದು ಅವರು ಎಎಪಿ ಪಕ್ಷ ಸೇರಿದಾಗ ಬಾಲಕೃಷ್ಣನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿ ಬಾಲಕೃಷ್ಣನ್ ಜತೆಗೆ ಬುಡಕಟ್ಟು ಜನಾಂಗ ಪರ ಹೋರಾಟ ನಡೆಸಿದ್ದ ಸೋನಿ ಸೋರಿ, ಲೆ. ಜ(ನಿವೃತ್ತ)ಎಚ್ ಎಸ್ ಪನಾಗ್, ಲೆ. ಜ(ನಿ) ಟಿಕೆ ಛಡ್ಡಾ, ಬಿಎಲ್ ವೋಹ್ರಾ(ಐಪಿಎಸ್ ಅಧಿಕಾರಿ) ಅವರು ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸೇರಿದ್ದಾರೆ.
ಅಶೋಕ್ ವೆಮೂರಿ ಹಾಗೂ ಅಮೆರಿಕದ ಇನ್ಫೋಸಿಸ್ ನ ಯುಟಿಲಿಟಿಸ್ ಅಂಡ್ ರಿಸೋರ್ಸಸ್ ವಿಭಾಗದ ಮುಖ್ಯಸ್ಥ ಸ್ಟೀಫನ್ ಪ್ರಾಟ್, ಇನ್ಫೋಸಿಸ್ ಲ್ಯಾಬ್ಸ್ ನ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಸುಬ್ರಮಣ್ಯಂ(ಸುಬ್ಬು) ಗೋಪರಾಜು ಅವರ ನಂತರ ಇನ್ಫೋಸಿಸ್ ಬಿಪಿಒ ಮುಖ್ಯಸ್ಥ ವಿ. ಬಾಲಕೃಷ್ಣನ್ ಅವರು ಕಳೆದ ಡಿಸೆಂಬರ್ ನಲ್ಲಿ ಇನ್ಫೋಸಿಸ್ ತೊರೆದಿದ್ದರು.
ಇನ್ಫೋಸಿಸ್ ಬಿಪಿಒ, ಫಿನಾಕಲ್ ಹಾಗೂ ಇಂಡಿಯಾ ಬಿಸಿನೆಸ್ ಯೂನಿಟ್ ಮುಖ್ಯಸ್ಥ ಹಾಗೂ ಇನ್ಫೋಸಿಸ್ ನ ಲೊಡೆಸ್ಟೋನ್ ಚೇರ್ಮನ್ ಆಗಿದ್ದ ವಿ ಬಾಲಕೃಷ್ಣನ್ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ ಸಿ ಡಿಗ್ರಿ ಹೊಂದಿದ್ದಾರೆ. ಸಿಎ, ಎಸಿಎಸ್, ಎಐಸಿಡಬ್ಲ್ಯೂಎ ಡಿಗ್ರಿಗಳನ್ನು ಪಡೆದಿದ್ದಾರೆ. ಇನ್ಫೋಸಿಸ್ ಆರ್ಥಿಕ ವಿಭಾಗ ಹಾಗೂ ಬಿಪಿಒ ಬೆಳವಣಿಗೆಗೆ ಕಾರಣರಾಗಿದ್ದರು.. 2006ರಲ್ಲಿ ಮುಖ್ಯ ವಿತ್ತೀಯ ಅಧಿಕಾರಿಯಾಗಿದ್ದರು. ಮುಂದಿನ ಸಿಇಒ ಆಗುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಇನ್ಫೋಸಿಸ್ ತೊರೆದ ಬಾಲ ಅವರು ಎಎಪಿ ಸೇರಿದರು.












Click it and Unblock the Notifications