ಶಿಕ್ಷಣ ಸಚಿವರ ಮುಂದೆ ಪರೀಕ್ಷೆ ನಿಷೇಧಕ್ಕೆ ಕಾರಣ ನೀಡಿದ ಎಎಪಿ
ಬೆಂಗಳೂರು, ಜೂನ್ 15: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರನ್ನು ಇಂದು ಆಮ್ ಆದ್ಮಿ ಪಕ್ಷದ ನಿಯೋಗ ಭೇಟಿ ಮಾಡಿದೆ. ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿ, ಆನ್ಲೈನ್ ತರಗತಿ, ಶುಲ್ಕ ಹೆಚ್ಚಳ, ಮಕ್ಕಳ ಮುಂದಿನ ಶಿಕ್ಷಣದ ಕುರಿತು ಚರ್ಚೆ ನಡೆಸಿದೆ.
Recommended Video
ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶರತ್ ಖಾದ್ರಿ ಭಾಗವಹಿಸಿದ್ದರು.
ಚರ್ಚೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷವು ಕೆಲವು ಕಾರಣಗಳನ್ನು ನೀಡಿದೆ. ಕೊರೊನಾ ಕಡಿಮೆ ಆದ ತಕ್ಷಣ ದೆಹಲಿಯ ಸರಕಾರಿ ಶಾಲೆಗಳಿಗೆ ಬೇಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದು, ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕು ಜನರಿಗೆ ಹರಡಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಪರೀಕ್ಷೆ ನಡೆಸಬಾರದು ಎಂದು ಎಎಪಿ ತಿಳಿಸಿದೆ.

ಶುಲ್ಕ ಹೆಚ್ಚಳ ಮಾಡಿದರೆ ಕ್ರಮ
1. ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಳ ಮಾಡಿರುವುದರ ಕುರಿತು ಕ್ರಮ ಕೈಗೊಳ್ಳಿ ಎಂದು ನಿಯೋಗ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ವಿರುದ್ದ ಒಂದು ವಾರದ ಒಳಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಚಿಕ್ಕಮಗಳೂರಿನಲ್ಲಿ ಒಬ್ಬ, ಕಲಾಸಿಪಾಳ್ಯದ ಇಬ್ಬರು ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ. ಇದೇ ರೀತಿ ಸೋಂಕು ಇತರರಿಗೆ ಹರಡುವ ಆತಂಕ ಎದುರಾಗಿದೆ ಎಂದು ಎಎಪಿ ಪರೀಕ್ಷೆ ನಿಷೇಧದ ಕಾರಣ ನೀಡಿತು.

ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ
ಆನ್ಲೈನ್ ಶಿಕ್ಷಣ: ಆನ್ಲೈನ್ ತರಗತಿ ಕುರಿತಾಗಿ ಎಲ್ಲಾ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಕೆಲವೇ ದಿನದಲ್ಲಿ ತಜ್ಞರ ಸಮಿತಿ ಸಲ್ಲಿಸಿದ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಕೊರೊನಾ ಕಡಿಮೆ ಆದ ತಕ್ಷಣ ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಾಲೆಗಳ ಬಗ್ಗೆ ಹಾಗೂ ಪಠ್ಯ ಕ್ರಮಗಳ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳ ಓಡಾಟಕ್ಕೆ ತೊಂದರೆ
ದಕ್ಷಿಣ ಕನ್ನಡ, ಚಾಮರಾಜನಗರ, ತುಮಕೂರು ಗ್ರಾಮಾಂತರ, ಮಂಡ್ಯ, ಹಾಸನ ಹೀಗೆ ಒಂದಷ್ಟು ಜಿಲ್ಲೆಗಳು ತಮ್ಮ ದಿನನಿತ್ಯದ ಸಂಚಾರಕ್ಕೆ ಖಾಸಗಿ ಬಸ್ಗಳನ್ನೇ ಅವಲಂಭಿಸಿದ್ದಾರೆ. ಪರೀಕ್ಷೆ ಆರಂಭಿಸಿದರೆ ಗ್ರಾಮೀಣ ಭಾಗದ ಮಕ್ಕಳ ಓಡಾಟಕ್ಕೆ ಸಾಕಷ್ಟು ತೊಂದರೆ ಆಗಲಿದ್ದು, ಸರ್ಕಾರಿ ಬಸ್ಗಳ ವ್ಯವಸ್ಥೆ ಮಾಡಿದರೂ ಯಾವ ನಂಬಿಕೆ ಇಟ್ಟುಕೊಂಡು ಮಕ್ಕಳನ್ನು ಕಳುಹಿಸುವುದು. ಏಕೆಂದರೆ ಈಗಾಗಲೇ ಬಿಎಂಟಿಸಿ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಳಗೊಂಡಿದೆ.

ಫೇಲ್ ಆದ್ರೆ ಮಕ್ಕಳು ಖಿನ್ನತೆಗೆ
* ಲಾಕ್ಡೌನ್ ಪರಿಣಾಮ ಮಕ್ಕಳು ಪಠ್ಯದಿಂದ ದೂರ ಉಳಿದಿದ್ದಾರೆ. ಆದ ಕಾರಣ ಸಾಕಷ್ಟು ಅಂತರ ಉಂಟಾಗಿದೆ. ಅಲ್ಲದೇ ಪುನರ್ಮನನ ಸಹ ಆಗದೇ ಇರುವುದರಿಂದ "ನಪಾಸಾ"ಗುವ ಮಕ್ಕಳ ಸಂಖ್ಯೆ ಹೆಚ್ಚಿದೆ ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗಬಹುದು.
* ಅನೇಕ ತಿಂಗಳುಗಳ ನಂತರ ವಿದ್ಯಾರ್ಥಿಗಳು ಸೇರುವುದರಿಂದ ಇಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟದ ಕೆಲಸ.
* ಮಾಸ್ಕ್ ಹಾಕಿಕೊಂಡು ಗಂಟೆಗಟ್ಟಲೆ ಕುಳಿತುಕೊಂಡು ಪರೀಕ್ಷೆ ಬರೆಯುವುದು ಕಷ್ಟ ಹಾಗೂ ಸವಾಲಿನ ಕೆಲಸ. ಇದರಿಂದ ಬರೆಯುವ ಕ್ಷಮತೆ ಕುಗ್ಗುವ ಸಾಧ್ಯತೆ ಇದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಡಿ
* ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಿಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಬೇಕು. ಆದರೆ ಈಗಾಗಲೇ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇರುವುದರಿಂದ ಇದು ಸಾಧ್ಯವೇ ಎಂಬುದು ಅನುಮಾನ.
* ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಡಿ ಎಂದು ಸುಪ್ರೀಂ ಕೋರ್ಟಿಗೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಅಕಸ್ಮಾತ್ ನ್ಯಾಯಾಲಯ ಪರೀಕ್ಷೆ ನಡೆಸಬೇಡಿ ಎಂದರೆ, ನಾವು ಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿದರು.
* ಮುಂದಿನ ವಿದ್ಯಾಭ್ಯಾಸಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಮುಖವಾಗಿರುವುದರಿಂದ ಬೇರೆ ಬೇರೆ ಕೋರ್ಸುಗಳಿಗೆ ಸೇರ ಬಯಸುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಸಲಹೆ ನೀಡಿದೆ.












Click it and Unblock the Notifications