ಬಿಬಿಎಂಪಿ ಚುನಾವಣೆ: ಎಎಪಿಯಿಂದ ಸೂಕ್ತ ಸ್ಪರ್ಧಿಗಳ ಆಯ್ಕೆ ಕಸರತ್ತು
ಬೆಂಗಳೂರು, ಅಕ್ಟೋಬರ್ 21: ಮುಂಬರುವ 2020ರ ಬಿಬಿಎಂಪಿ ಚುನಾವಣೆಗೆ ಎಎಪಿಯಿಂದ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳೊಂದಿಗೆ ಸಂವಾದ ಶಿಬಿರವನ್ನು ಪಕ್ಷದ ವಿಜಯನಗರ ಕಚೇರಿಯಲ್ಲಿ ನಡೆಸಲಾಯಿತು.
ಆಮ್ ಆದ್ಮಿ ಪಕ್ಷವು ನವೀನ ಕಾರ್ಯಯೋಜನೆಗಳೊಂದಿಗೆ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು, ಉತ್ತಮ ರಸ್ತೆಗಳ ನಿರ್ಮಾಣ, ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಸೌಲಭ್ಯವನ್ನು ಒದಗಿಸುವುದು, ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಹೊಸ ಬೆಂಗಳೂರನ್ನು ಕಟ್ಟುವುದು ಪಕ್ಷದ ಗುರಿಯಾಗಿದೆ. ಜೊತೆಗೆ ಬಿಬಿಎಂಪಿಯಲ್ಲಿ ಪಾರದರ್ಶಕ ಆಡಳಿತ ತರಬೇಕೆಂದು ಪಕ್ಷವು ಪಣ ತೊಟ್ಟಿದೆ.
ಪಕ್ಷದ ಮುಖಂಡರು ಮತ್ತು ಸದಸ್ಯರು ಮನೆ ಮನೆಗೆ ಭೇಟಿ, ಪಾದಯಾತ್ರೆ, ಸದಸ್ಯತ್ವ ಅಭಿಯಾನ, ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಮಾಡುವ ಮೂಲಕ ಹೊಸ ರೀತಿಯಲ್ಲಿ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸಲಾಗುತ್ತದೆ. ಈಗಗಲೇ ಸೆಪ್ಟೆಂಬರ್ 29ರಂದು ಪಾದಯಾತ್ರೆಯ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ರೂಪಿಸಲಾಗುತ್ತಿದೆ. ಅಲ್ಲದೆ ಪ್ರಜೆಗಳಿಂದಲೇ ದೇಣಿಗೆ ಪಡೆದು ಚುನಾವಣೆಯನ್ನು ಎದುರಿಸಲು ಪಕ್ಷವು ಸಜ್ಜಾಗುತ್ತಿದೆ.

ಜನಪರ ಆಡಳಿತ, ಹೊಸರೀತಿಯ ಕಾರ್ಯಯೋಜನೆ, ಜನರ ಒಳಗೊಳ್ಳುವಿಕೆ, ಭ್ರಷ್ಟಾಚಾರ ವಿರೋಧಿ ನಿಲುವುಗಳು ಪಕ್ಷದ ಸಿದ್ಧಾಂತಗಳಾಗಿವೆ. ಈ ಸಿದ್ಧಾಂತಗಳ ಜೊತೆಗೆ ಬೆಂಗಳೂರನ್ನು ವಿಶ್ವ ದರ್ಜೆಯ ನಗರವನ್ನಾಗಿ ನಿರ್ಮಾಣ ಮಾಡಲು ಕ್ರಿಯಾತ್ಮಕ ಆಲೋಚನೆಯುಳ್ಳ ಜನಸಾಮಾನ್ಯರು ಅಭ್ಯರ್ಥಿಗಳಾಗಲು ಮುಂದಾಗಿದ್ದಾರೆ.
ಅಂತಹ ಆಕಾಂಕ್ಷಿಗಳಿಗೆ ಬಿಬಿಎಂಪಿ ಆಡಳಿತದ ಕಾರ್ಯವಿಧಾನ ಹಾಗೂ ಚುನಾವಣೆಯನ್ನು ಎದುರಿಸುವ ಕೌಶಲ್ಯಗಳ ಬಗೆಗೆ ತರಬೇತಿ ನೀಡಲಾಯಿತು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಕ್ಷದ ಅಭ್ಯರ್ಥಿಗಳಾಗಲು ಮುಂದಾಗಿದ್ದು, ಎಲ್ಲರ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ.
ಸಂವಾದ ಕಾರ್ಯಕ್ರಮವನ್ನು ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾ ದಾಮ್ಲೆಯವರು ನಡೆಸಿದರು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀರವರು, ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿಯವರು, ಪಕ್ಷದ ಮುಖಂಡರಾದ ಬಸವರಾಜ್ ಮುದಿಗೌಡರ್ ಮತ್ತು ಸಂತೋಷ್ ನರಗುಂದ್ ಅವರು, ಚನ್ನಪ್ಪಗೌಡ, ಸೀತಾರಾಂ.ಜಿ ರವರು ಭಾಗವಹಿಸಿದ್ದರು.












Click it and Unblock the Notifications