ಮೇಯರ್ ಮತ್ತು ಆಯುಕ್ತರೇ ಎಲ್ಲಿದ್ದೀರಾ? ಆಮ್ ಆದ್ಮಿ ಪಕ್ಷದ ಹತ್ತು ಪ್ರಶ್ನೆಗಳು
ಬೆಂಗಳೂರು, ಮೇ 25: ಮಳೆಗಾಲ ಆರಂಭವಾದರೆ ಸಾಕು, ರಾಜಧಾನಿಯಲ್ಲಿ ಮರಗಳು ಧರೆಗುರುಳುವ ಪ್ರಕ್ರಿಯೆ ಕೂಡ ಶುರುವಾಗುತ್ತದೆ. ಮರಗಳು ಹೀಗೆ ಬೀಳದಂತೆ ನೋಡಿಕೊಳ್ಳಲು, ಕಾಲಕಾಲಕ್ಕೆ ದುರ್ಬಲ ಮರ, ಕೊಂಬೆಗಳನ್ನು ತೆರವುಗೊಳಿಸಲೆಂದೇ ಪಾಲಿಕೆಯ ಅರಣ್ಯ ವಿಭಾಗವಿದೆ. ಈ ಕಾರ್ಯಕ್ಕೆ ಪ್ರತಿ ದಿನ 3 ಲಕ್ಷ ಖರ್ಚಾಗುತ್ತದೆ. ಆದರೂ ಮರಗಳು ಬೀಳುತ್ತಲೇ ಇವೆ, ಬೆಂಗಳೂರಿನ ವಾತಾವರಣ ಹದಗೆಡುತ್ತಲೇ ಇದೆ, ಸಾವು-ನೋವು ಸಂಭವಿಸುತ್ತಲೇ ಇದೆ ಎಂದು ಆಮ್ ಆದ್ಮಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.
Recommended Video
ನಗರದ ಮರಗಳ ನಿರ್ವಹಣೆಗಾಗಿ ಬಿಬಿಎಂಪಿ ನಿತ್ಯ ನೀರಿನಂತೆ ಹಣ ವ್ಯಯಿಸುತ್ತಿದೆ. ಗಿಡ ನೆಡುವುದರಿಂದ ಹಿಡಿದು ಬಿದ್ದ ಮರಗಳನ್ನು ತೆರವುಗೊಳಿಸುವವರೆಗೂ ವಿವಿಧ ಹಂತಗಳಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತವೆ. ಪಾಲಿಕೆಯೇ ಹೇಳಿಕೊಂಡಂತೆ ವರ್ಷದ 365 ದಿನಗಳೂ ಈ ಕಾರ್ಯ ನಡೆದಿರುತ್ತದೆ. ಆದರೂ ಪ್ರತಿ ವರ್ಷ ನೂರಾರು ಮರಗಳು ಬೀಳುತ್ತಲೇ ಇವೆ. ಬಲಿ ಪಡೆಯುತ್ತಲೇ ಇವೆ.
ನಿತ್ಯ ಮೂರು ಲಕ್ಷ ಖರ್ಚು: ಬಿಬಿಎಂಪಿಯಲ್ಲಿ ಅರಣ್ಯ ವಿಭಾಗ 2006 ರಲ್ಲಿ ಆರಂಭವಾಗಿದ್ದು ಪ್ರತಿ ವರ್ಷ ಸರಾಸರಿ 10ರಿಂದ 12 ಕೋಟಿಗಳನ್ನು ಅರಣ್ಯ ವಿಭಾಗಕ್ಕೆ ಮೀಸಲಿಡಲಾಗುತ್ತಿದೆ. ದಿನಕ್ಕೆ ಅರಣ್ಯ ತಂಡವೊಂದಕ್ಕೆ 10 ಸಾವಿರ ಹಣವನ್ನೂ ವ್ಯಯಿಸಲಾಗುತ್ತಿದೆ. ಒಟ್ಟಾರೆಯಾಗಿ ದಿನಕ್ಕೆ 3 ಲಕ್ಷದಷ್ಟು ಮೊತ್ತ!!. ಗಿಡಗಳನ್ನು ನೆಡುವುದು, ಅಪಾಯ ತಂದಿಡಬಲ್ಲ ಮರಗಳನ್ನು ತೆರವುಗೊಳಿಸಲು ಈ ಅನುದಾನ ಬಳಸಲಾಗುತ್ತಿದೆ.ಆದರೆ ಈ ತಂಡಗಳನ್ನು ಬಿಬಿಎಂಪಿ ಸಮರ್ಪಕವಾಗಿ ಬಳಸದೆ ನಿರ್ಲಕ್ಷ್ಯ ತೋರಿದೆ. ಎಂದು ಎಎಪಿ ಆರೋಪ ಮಾಡಿದೆ.
ಮಳೆ ಹಾನಿಯಿಂದ ಉಂಟಾಗುವ ಸಾವಿಗೆ ಬಿಬಿಎಂಪಿ ಹೊಣೆ- ಎಎಪಿ ಎಚ್ಚರ
ಹಾಗಿದ್ದರೆ, ಮರಗಳ ನಿರ್ವಹಣೆಗೆ ಸುರಿಯುವ ದುಡ್ಡು ಯಾರ ಹೊಟ್ಟೆಗೆ ಸೇರುತ್ತಿದೆ? ಅಷ್ಟಕ್ಕೂ ಮರಗಳೇಕೆ ಬೀಳುತ್ತಿವೆ? ತೆರವುಗೊಳಿಸಿದ ಮರಗಳು ಏನಾಗುತ್ತಿವೆ? ಬೀಳುವ ಮೊದಲೇ ಗುರುತಿಸಿ ತೆರವುಗೊಳಿಸುವ ಮುಂದಾಲೋಚನೆ ಇವರಿಗೆ ಏಕಿಲ್ಲ? *ಊರಿಗೆ ಬೆಂಕಿ ಬಿದ್ದಾಗ ಬಾವಿ ತೋಡುವ ನಿಮ್ಮ ಪರಿಪಾಠ ನಿಲ್ಲುವುದೆಂದು? ಎಂದು ಎಎಪಿ ಪ್ರಶ್ನೆ ಮಾಡಿದೆ.
ದುರ್ಬಲ ಮರಗಳ ತೆರವು
ಬಿಬಿಎಂಪಿ ಅಧಿಕಾರಿಗಳು ದುರ್ಬಲ ಮರಗಳ ತೆರವಿಗೆ ಪರಿಸರವಾದಿಗಳ ವಿರೋಧವಿದೆ ಎಂದು ಸಮಜಾಯಿಷಿ ನೀಡಿ ತಮ್ಮ ಕರ್ತವ್ಯದಿಂದ ಜಾರಿಕೊಳ್ಳುತ್ತಿದ್ದಾರೆ. ಬೇರುಗಳು ದುರ್ಬಲಗೊಂಡು ಅಪಾಯವನ್ನು ತಂದೊಡ್ಡಬಲ್ಲ ಮರಗಳನ್ನು ತೆರವು ಮಾಡಲು ಯಾರ ವಿರೋಧವೂ ಇಲ್ಲ. ದುರ್ಬಲ ಮರಗಳ ತೆರವಿಗೆ ಬಿಬಿಎಂಪಿ ವಿವೇಚಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಹೀಗೆ ಮಾಡಿದ್ದಲ್ಲಿ ಸಾರ್ವಜನಿಕರು ವಿರೋಧ ಮಾಡುತ್ತಿರಲಿಲ್ಲ. ಅದಾವುದನ್ನೂ ಮಾಡದೆ ಪಿಳ್ಳೆ ನೆವ ಹೂಡಿ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವ ಅಧಿಕಾರಿಗಳಿಗೆ ಛೀಮಾರಿ ಹಾಕಬೇಕಿದೆ. ಇವರ ಬೇಜವಾಬ್ದಾರಿ ನಡೆಯಿಂದಾಗಿ ಇಂದು ಪ್ರಾಣ ಹಾನಿಗಳು ಸಂಭವಿಸುತ್ತಿವೆ.
ಮರಗಳಿಂದ ಜನರ ಪ್ರಾಣಕ್ಕೆ ಸಂಚಕಾರ
2017-2018 ಹಾಗೂ 2018-2019 ರ ಎರಡು ವರ್ಷಗಳಲ್ಲಿ ಮರ ತೆರವು ಮಾಡುವ ಕಂಟ್ರಾಕ್ಟರ್ ಗಳಿಗೆ 10 ಕೋಟಿಗಳಷ್ಟು ಬಾಕಿ ಮೊತ್ತವನ್ನು ನೀಡದೆ ಸತಾಯಿಸುತ್ತಿದೆ. ಪ್ರತಿ ದಿನ ಒಬ್ಬ ಕಂಟ್ರಾಕ್ಟರ್ಗೆ 10,350 ರೂಪಾಯಿ ನೀಡಬೇಕಾಗುತ್ತದೆ. ಆದರೆ ಸರಿಯಾದ ಅವಧಿಯಲ್ಲಿ ಪಾವತಿ ಮಾಡದೇ ಇರುವುದರಿಂದ ಅವರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ಅವರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಇದರ ಪರಿಣಾಮ ಅಪಾಯಕಾರಿ ಮರಗಳು ಜನರ ಪ್ರಾಣಕ್ಕೆ ಸಂಚಕಾರ ತರುತ್ತಿವೆ. ಎಂದು ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಮೇಯರ್ ಹಾಗೂ ಆಯುಕ್ತರಿಗೆ ಹತ್ತು ಪ್ರಶ್ನೆಗಳು
1) ಕೊರೊನಾ ನೆಪ ಹೇಳಿಕೊಂಡು ತಣ್ಣಗೆ ಮಲಗಿರುವ ಬಿಬಿಎಂಪಿ ಅಧಿಕಾರಿಗಳು ಹಲವು ಭಾಗಗಳು ಹಾನಿಯಾಗಿ ಸಾವು ನೋವುಗಳು ಸಂಭವಿಸುವ ಮುನ್ನೆಚ್ಚರಿಕೆ ಗೊತ್ತಿದ್ದರೂ ಸಹ ನಿರ್ಲಕ್ಷ್ಯ ಮಾಡಿಕೊಂಡೇ ಬಂದ ಕಾರಣ ಭಾನುವಾರ ಮಧ್ಯಾಹ್ನದಿಂದ ರಾತ್ರಿಯ ತನಕ ಸುರಿದ ಮಳೆಗೆ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಬಿಬಿಎಂಪಿಯ ಈ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದ ಜನರಿಗೆ ಏಕೆ ಶಿಕ್ಷೆ ಮಾನ್ಯ ಮೇಯರ್ ಗೌತಮ್ ಕುಮಾರ್ ಅವರೇ ಉತ್ತರಿಸಿ.
ಪ್ರತಿ ವರ್ಷ 10 ರಿಂದ 12 ಕೋಟಿ ಖರ್ಚು
2) ಬೆಂಗಳೂರಿನ ರಸ್ತೆ ಬದಿಯಲ್ಲಿ ಅಪಾಯದ ಸ್ಥಿತಿಯಲ್ಲಿ ಇರುವ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಪ್ರತಿ ವರ್ಷ 10 ರಿಂದ 12 ಕೋಟಿ ಖರ್ಚು ಮಾಡುತ್ತದೆ. ಆದರೂ ನೂರಾರೂ ಮರಗಳು ಬಿದ್ದು ಆಸ್ತಿ ಹಾನಿ, ಪ್ರಾಣ ಹಾನಿ ಉಂಟಾಗುತ್ತಿದೆ. ಹಾಗಾದರೆ ಇಷ್ಟೊಂದು ಮೊತ್ತ ಯಾರ ಜೇಬು ಸೇರುತ್ತಿದೆ ಆಯುಕ್ತರೇ??
3) ಮಳೆಯಿಂದ ಆದ ಹಾನಿಯ ಬಳಿಕ ನೀವು ಮರಗಳನ್ನು ತೆರವು ಮಾಡಲು 28 ತಂಡಗಳನ್ನು ರಚನೆ ಮಾಡಿದ್ದೀರಾ. ಹಾಗಾದರೆ ಹಿಂದೆ ಇದ್ದಂತಹ ತಂಡಗಳು ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ ಎಂದೇ ಅರ್ಥವಲ್ಲವೇ?
4) ಇನ್ನೂ ಮೂರು- ನಾಲ್ಕು ದಿನ ಭಾರಿ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯನ್ನು ನೀವುಗಳು ನಿರ್ಲಕ್ಷಿಸಿದ್ದೀರಾ.ಇದರ ಪರಿಣಾಮ ಬೆಂಗಳೂರಿನ ಜನ ಇನ್ನೆಷ್ಟು ದಿನ ಹೀಗೆ ಅನುಭವಿಸುತ್ತಲೇ ಇರಬೇಕು?
ವಿಪತ್ತು ನಿರ್ವಹಣಾ ಪಡೆ ವೈಫಲ್ಯ
5) ಕಳೆದ ತಿಂಗಳು ವಿಪತ್ತು ನಿರ್ವಹಣಾ ಪಡೆಯನ್ನು ಸ್ಥಾಪಿಸಲಾಗಿತ್ತು ಆ ನಿಮ್ಮ 'ಪಡೆ' ಏನು ಕೆಲಸ ಮಾಡಿದೆ?
6) ವಿಪತ್ತು ನಿರ್ವಹಣೆ ವೈಫಲ್ಯದ ಕುರಿತಾಗಿ ಆಮ್ ಆದ್ಮಿ ಪಕ್ಷವು ಎಚ್ಚೆತ್ತುಕೊಳ್ಳುವಂತೆ ಹಲವು ಬಾರಿ ಎಚ್ಚರಿಕೆಯನ್ನು, ದೂರುಗಳನ್ನು ,ಮನವಿ ಪತ್ರಗಳನ್ನು ನೀಡಿದ್ದರೂ ಸೌಜನ್ಯಕ್ಕೆ ಒಮ್ಮೆಯಾದರೂ ಉತ್ತರಿಸಿದ್ದೀರಾ??
7) ತಗ್ಗು ಪ್ರದೇಶಗಳ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ಉಂಟಾಗುವ ಕೃತಕ ನೆರೆ ನಿಯಂತ್ರಣಕ್ಕೆ ನಿಮ್ಮ ಬಳಿ ಯಾವ ಪರಿಹಾರವಿದೆ?, ಮಳೆ ನೀರಿನ ವೈಜ್ಞಾನಿಕ ಬಳಕೆಯ ಕುರಿತು ಈ ಹಿಂದೆ ತಯಾರಿಸಿದ ವರದಿಗಳು ಎಲ್ಲಿ ಹೋದವು?
1,380 ಕೋಟಿ ನಷ್ಟ
8) ಕಳೆದ ವರ್ಷ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 1,380 ಕೋಟಿ ಯಷ್ಟು ಹಣ ಬೆಂಗಳೂರು ನಗರ ಒಂದರಲ್ಲೆ ನಷ್ಟ ಉಂಟಾಗಿತ್ತು. ಈ ಮೊತ್ತವನ್ನು ಯಾರಿಂದ ವಸೂಲಿ ಮಾಡಬೇಕು.
9) ಬೆಂಗಳೂರಿನ ಶಾಸಕರೇ, ಸಂಸದರೇ, ಪಾಲಿಕೆ ಸದಸ್ಯರೇ, ಅಧಿಕಾರಿಗಳೇ ನಿಮ್ಮ ಜೇಬು ತುಂಬಲು ಇನ್ನೆಷ್ಟು ಬಡ ಜನರ ಬದುಕು ಮುಳುಗಬೇಕು. ಕಳೆದ ಎರಡು ತಿಂಗಳಿನಲ್ಲಿ 5 ಕ್ಕೂ ಹೆಚ್ಚು ಬಾರಿ ಅನಾಹುತ ಸಂಭವಿಸಿದರೂ ಒಮ್ಮೆಯೂ ಒಟ್ಟಿಗೆ ಕಾಣಿಸಿಕೊಳ್ಳದ ಆಯುಕ್ತರು, ಮೇಯರ್ ಅವರು ನಿಮ್ಮ ಒಣ ಪ್ರತಿಷ್ಟೆ ಜನರ ಕಷ್ಟಕ್ಕಿಂತ ಹೆಚ್ಚೇ..
10) ಅವಘಡಗಳ ನಿಯಂತ್ರಣಕ್ಕೆ ಒಮ್ಮೆಯಾದರೂ ಇತರೆ ಇಲಾಖೆಗಳ ಜತೆ ಸಮನ್ವಯ ಸಾಧಿಸಿದ್ದೀರಾ ಭ್ರಷ್ಟ ಅಧಿಕಾರಿಗಳೇ.