ಬಿಬಿಎಂಪಿ ಅಕ್ರಮ ತನಿಖೆಗೆ ನಾಗರಿಕರ ಸಮಿತಿ ರಚಿಸಿ: ಎಎಪಿ
ಬೆಂಗಳೂರು, ಅ. 6: ಆರ್ಥಿಕ ಶಿಸ್ತು ಇಲ್ಲದ, ಭ್ರಷ್ಟಾಚಾರಿಗಳ ತಾಣವಾಗಿರುವ ಬಿಬಿಎಂಪಿ ಹಣಕಾಸು ಸಮಸ್ಯೆಯಿಂದ ಸುಮಾರು ₹5 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಕತ್ತರಿ ಹಾಕಲು ಹೊರಟಿರುವ ಬಿಬಿಎಂಪಿ ಇದರ ಜತೆಗೆ ತನ್ನೆಲ್ಲಾ ಕರ್ಮಕಾಂಡ, ಪಾಪಗಳನ್ನು ಮುಚ್ಚಿ ಹಾಕಿಕೊಳ್ಳಲು ಹೊರಟಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
5 ನೇ ಹಣಕಾಸು ಆಯೋಗದ ಅನುದಾನ, ನವನಗರೋಥ್ಥಾನ, ಬಿಬಿಎಂಪಿಯ ಹಣ ಹೀಗೆ ಇನ್ನಿತರೇ ಯಾವ, ಯಾವ ಯೋಜನೆಗಳಿಂದ ಎಷ್ಟು ಹಣ ಬಂದಿದೆ, ಯಾವ ಯಾವ ಯೋಜನೆಗಳಿಗೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಇಟ್ಟು ಕಾಮಗಾರಿಗಳನ್ನು ನಿಲ್ಲಿಸಬೇಕಾಗಿ ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.
ಕಳೆದ 5 ವರ್ಷಗಳಿಂದ ಬೆಂಗಳೂರಿನ ಶಾಸಕರ, ಬಿಬಿಎಂಪಿ ಸದಸ್ಯರ ಹಿಂಬಾಲಕರಿಗೆ ತಿನ್ನಿಸಲು ಸಾಕಷ್ಟು ಅನವಶ್ಯಕ ಕಾಮಗಾರಿಗಳನ್ನು ಮಾಡಲಾಗಿದೆ. ಈಗಾಗಲೇ ಸಂಪೂರ್ಣವಾಗಿ ಮುಗಿದಿರುವ ಕಾಮಗಾರಿಗಳಲ್ಲಿ ಶೇ 90ರಷ್ಟು ಕಳಪೆಯಿಂದ ಕೂಡಿದ್ದು, ಈ ಎಲ್ಲಾ ಅವ್ಯವಹಾರಗಳ ತನಿಖೆಗೆ ಸಮಿತಿ ರಚಿಸಬೇಕು ಅದರ ಮೂಲಕ ಎಲ್ಲಾ ಕಾಮಗಾರಿಗಳ ಸತ್ಯಾಸತ್ಯತೆ, ಗುಣಮಟ್ಟ ತಿಳಿದುಕೊಳ್ಳಬೇಕು.

ಬೋಗಸ್ ಬಿಲ್ಲುಗಳು ಸೃಷ್ಟಿ:
ರಾಜರಾಜೇಶ್ವರಿ ನಗರ, ಗೋವಿಂದರಾಜ ನಗರ, ಗಾಂಧಿನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿ ಕೊಳ್ಳೆ ಹೊಡೆದ ಉದಾಹರಣೆಗಳು ಸಾಕಷ್ಟಿವೆ. ಶೇ 35 - 40 ರಷ್ಟು ಬೋಗಸ್ ಬಿಲ್ಗಳೇ ಇವೆ. ಜನಪ್ರತಿನಿಧಿಗಳು ತಮ್ಮ ಹಿಂಬಾಲಕರನ್ನು ಸಾಕುವ ಸಲುವಾಗಿ ಕೋಟ್ಯಂತರ ಹಣವನ್ನು ಬಿಬಿಎಂಪಿ ಬೊಕ್ಕಸದಿಂದ ಲಪಟಾಯಿಸಿದ್ದಾರೆ ಎಂದು ಎಎಪಿ ಆರೋಪಿಸುತ್ತದೆ.
ಆಡಳಿತಾಧಿಕಾರಿ ಗೌರವ್ ಗುಪ್ತ ಒಂದು ವಾರದ ಹಿಂದೆ ಎಲ್ಲಾ ಕಾಮಗಾರಿ ಅದರ ಪ್ರಗತಿ ಹಾಗೂ ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಹೇಳಿದ್ದರು. ಆದರೆ ಈಗ ದಿಡೀರ್ ಎಂದು ಕಾಮಗಾರಿಗಳನ್ನು ನಿಲ್ಲಿಸುವ ಕುರಿತಾಗಿ ಚರ್ಚೆ ಮುನ್ನೆಲೆಗೆ ಬರಲು ಕಾರಣ ಏನು?
1 ವಾರದ ಒಳಗೆ ಈಗಾಗಲೆ ಮುಗಿದಿರುವ ಎಲ್ಲಾ ಕಾಮಗಾರಿಗಳ ಗುಣಮಟ್ಟ, ಖರ್ಚಾಗಿರುವ ಹಣ, ಯಾವ ಇಲಾಖೆಯ ಹಣಕಾಸಿನ ಅಡಿಯಲ್ಲಿ ಎಷ್ಟಷ್ಟು ಅನುದಾನ ಬಂದಿದೆ ಎನ್ನುವುದನ್ನು ಸಾರ್ವಜನಿಕವಾಗಿ ಮುಂದೆ ಇಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಹೋರಾಟಗಳನ್ನು ಸಹ ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ತಿಳಿಸಿದರು.












Click it and Unblock the Notifications