ನಮ್ಮ ಬ್ಯಾಂಕು ಕನ್ನಡ ಬೇಕು: ಜು.11 ರಂದು ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರೇ ಕಡಿಮೆ ಎಂಬಂತಾಗಿರುವುದು ಹೊಸ ವಿಷಯವಲ್ಲ. ಕನ್ನಡ ಬಂದರೂ, ಮಾತನಾಡುವುದಕ್ಕೆ ಮುಜುಗರಪಡುವವರಿದ್ದಾರೆ. ಕನ್ನಡವನ್ನು ಬದಿಗಿಟ್ಟು, ಇಂಗ್ಲಿಷನ್ನೇ ನೆಚ್ಚಿಕೊಳ್ಳುವ ಕೆಲವರ ಶೋಕಿಯಿಂದಾಗಿ ಕರ್ನಾಟಕದಲ್ಲಿ ಕನ್ನಡದ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.
ಕನ್ನಡದಲ್ಲೇ ಸೇವೆ ನೀಡುವ 'ಶೆಲ್' ಉಳಿದವಕ್ಕೂ ಮಾದರಿಯಾಗಲಿ
ಹೀಗಿರುವಾಗ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವ ಬ್ಯಾಂಕ್ ಗಳಲ್ಲಿ ಕನ್ನಡವನ್ನೇ ಸಂವಹನ ಭಾಷೆಯನ್ನಾಗಿ ಬಳಸುವಂತೆ ಮಾಡುವ ಸಲುವಾಗಿ ಕನ್ನಡ ಗ್ರಾಹಕ ಕೂಟ(KGK)ವು #NammaBankuKannadaBeku ಎಂಬ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ಜುಲೈ 11, ಮಂಗಳವಾರ ಸಂಜೆ 6 ಗಂಟೆಯಿಂದ ನಡೆಯಲಿರುವ ಈ ಟ್ವಿಟ್ಟರ್ ಅಭಿಯಾನದಲ್ಲಿ, ಹೆಚ್ಚು ಹೆಚ್ಚು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೇಮಿಗಳು ಸಹಕರಿಸಬೇಕೆಂದು ಕೂಟ ಮನವಿ ಮಾಡಿಕೊಂಡಿದೆ.
ಭಾರತೀಯ ಭಾಷೆಗಳಲ್ಲಿ ಸೇವೆ ದೊರಕಿಸಬೇಕೆಂಬ ಕಾನೂನು ಇದ್ದರೂ ಬ್ಯಾಂಕುಗಳಲ್ಲಿ ಎಲ್ಲಾ ಸೇವೆಗಳೂ ಕನ್ನಡ ಭಾಷೆಯಲ್ಲಿ ದೊರಕುತ್ತಿಲ್ಲ ಎಂಬ ದೂರು ಎಂದಿಗೂ ಇದ್ದೇ ಇದೆ. ಬ್ಯಾಂಕಿಂಗ್ ನ ಎಷ್ಟೋ ವಿಷಯಗಳು ಅಕ್ಷರಸ್ಥರಿಗೇ ಅರ್ಥವಾಗುವುದಿಲ್ಲ. ಅಂತಾದ್ದರಲ್ಲಿ ಅನಕ್ಷರಸ್ಥರಿಗೆಲ್ಲ, ಅವರಿಗೆ ತಿಳಿಯದ ಭಾಷೆಯಲ್ಲಿ ಸಂವಹನ ನಡೆಸಿದರೆ ಹೇಗೆ ಅರ್ಥವಾಗಬೇಕು? ಬ್ಯಾಂಕ್ ನಲ್ಲಿ ಸಿಗುವ ಎಲ್ಲಾ ರೀತಿಯ ಅರ್ಜಿಗಳು, ಅಲ್ಲಿನ ಭಿತ್ತಿಪತ್ರಗಳು ಎಲ್ಲವೂ ಕನ್ನಡದಲ್ಲೇ ಇರಬೇಕೆಂಬ ಮನವಿಯೊಂದಿಗೆ ಕನ್ನಡ ಗ್ರಾಹಕ ಕೂಟ ಈ ಅಭಿಯಾನ ನಡೆಸುತ್ತಿದೆ.
ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ
ಇತ್ತೀಚೆಗೆ ತಾನೇ, ಶೆಲ್ ಪೆಟ್ರೋಲಿಯಂ ಸಂಸ್ಥೆಯಂತೆ ಎಲ್ಲ ಸಂಸ್ಥೆಗಳೂ ಕನ್ನಡದಲ್ಲೇ ಸೇವೆ ನೀಡುವಂತೆಯೂ ಕನ್ನಡ ಗ್ರಾಹಕ ಕೂಟ ಅಭಿಯಾನ ಆರಂಭಿಸಿತ್ತು.
ಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭ
ಕರ್ನಾಟಕದಲ್ಲಿರುವ ಹ್ಯುಂಡೈ ಕಾರು ಸರ್ವಿಸ್ ಕೇಂದ್ರಗಳಲ್ಲೂ ಅನಿಸಿಕೆ ಪತ್ರಗಳನ್ನು ಕನ್ನಡದಲ್ಲೇ ನೀಡಲಾಗುತ್ತಿದೆ. ಜರ್ಮನಿ ಮೂಲದ ಲುಫ್ತಾನ್ಸಾ ಏವರ್ ಲೈನ್ಸ್ ಕಂಪನಿಯೂ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ, ಕನ್ನಡದಲ್ಲೇ ಸೇವೆ ಆರಂಭಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.
|
ಸಾರ್ವಭೌಮತ್ವ ಪಡೆಯಲು
#NammaBankuKannadaBeku ಹ್ಯಾಶ್ ಟ್ಯಾಗ್ ಮೂಲಕ ಹಲವರು ಟ್ವೀಟ್ ಮಾಡಿ ತಮ್ಮ ಬೆಂಬಲ ಸೂಚಿಸುತ್ತಿದ್ದು, ಕರ್ನಾಟಕದಲ್ಲಿ ಕನ್ನಡರು ಸಾರ್ವಭೌಮತ್ವ ಪಡೆಯಲು ಸಹಾಯವಾಗುವ ಈ ಅಭಿಯಾನವನ್ನು ಬೆಂಬಲಿಸಿ ಎಂದು ಮಹೇಶ್ ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ನಮ್ಮತನವೆಂಬುದಿಲ್ಲ!
ಕನ್ನಡಿಗರು ಸ್ಥಾಪಿಸಿದ ಬ್ಯಾಂಕ್ ಗಳೇ ಇಂದು, ಕನ್ನ್ಡದಲ್ಲಿ ಸೇವೆ ನೀಡಲು ನಿರಾಕರಿಸುತ್ತಿವೆ ಎಂದು ಟ್ವೀಟ್ ಮಾಡಿರುವ ಪ್ರವೀರಾ ಶೆಟ್ಟಿ, ಕನ್ನಡಿಗರು ತಮ್ಮತನವನ್ನು ಮರೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
|
ಹಿಂದಿ ಹೇರಿಕೆಯೂ ನಿಲ್ಲಲಿ
ಬ್ಯಾಂಕಿನ ಠೇವಣಿ ಅರ್ಜಿಗಳಲ್ಲೂ ಇಂಗ್ಲಿಶ್ ಮತ್ತು ಹಿಂದಿಯನ್ನೇ ಬಳಸಲಾಗುತ್ತಿದೆ. ಬ್ಯಾಂಕುಗಳಲ್ಲೂ ಹಿಂದಿ ಹೇರಿಕೆ ನಿಲ್ಲಿಸಿ ಎಂದು ಪ್ರವೀಣ್ ಕಣಕಾಲ್ ತಿಳಿಸಿದ್ದಾರೆ.
|
ಕರ್ನಾಟಕ ಸರ್ಕಾರ ಗಂಭೀರವಾಗಿ ಯೋಚಿಸಲಿ
ಬ್ಯಾಂಕುಗಳಲ್ಲಿ ಕನ್ನಡ ಬಳಸುವ ಮನವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಕನ್ನಡವನ್ನಷ್ಟೇ ಬಲ್ಲ ಜನರಿಗಾಗಿ ಎಟಿಎಂ ನಲ್ಲಿಯೂ ಕನ್ನಡ ಬಳಸುವಂತಾಗಬೇಕು. ಕರ್ನಾಟಕ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಶ್ರೀನಿವಾಸ್ ಎಚ್ ಕೆ ಎನ್ನುವವರು ಟ್ವೀಟ್ ಮಾಡಿದ್ದಾರೆ.