ತವರು ರಾಜ್ಯದಿಂದ ವಾಪಸ್ ಬಂದ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಸೋಂಕು
ಬೆಂಗಳೂರು, ಅಕ್ಟೋಬರ್ 14: ಲಾಕ್ ಡೌನ್ ಸಮಯದಲ್ಲಿ ತವರು ರಾಜ್ಯಕ್ಕೆ ಹೋಗಿದ್ದ ನಮ್ಮ ಮೆಟ್ರೋ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಇದರಿಂದಾಗಿ ಬಿಎಂಆರ್ಸಿಎಲ್ ಸಿಬ್ಬಂದಿಗಳಲ್ಲಿಯೂ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ.
ನಮ್ಮ ಮೆಟ್ರೋ 2ನೇ ಹಂತದ 72 ಕಿ. ಮೀ. ಕಾಮಗಾರಿಯಲ್ಲಿ ತೊಡಗಿರುವ 465 ಯೋಜನಾ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಕೋವಿಡ್ ಸೋಂಕು ತಗುಲಿದೆ. ನಾಲ್ವರು ಇದುವರೆಗೂ ಮೃತಪಟ್ಟಿದ್ದಾರೆ.
407 ಜನರು ಇದುವರೆಗೂ ಕೋವಿಡ್ ಸೋಂಕಿನಿಂದಾಗಿ ಗುಣಮುಖರಾಗಿದ್ದಾರೆ. 54 ಜನರು ಆಸ್ಪತ್ರೆ/ಕ್ವಾರಂಟೈನ್ ಸೆಂಟರ್ಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬಿಎಂಆರ್ಸಿಎಲ್ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡವರಲ್ಲಿ ವಲಸೆ ಕಾರ್ಮಿಕರು ಹೆಚ್ಚು. ಲಾಕ್ ಡೌನ್ ಘೋಷಣೆಯಾದಾಗ ತವರು ರಾಜ್ಯಕ್ಕೆ ಹೋಗಿದ್ದ ಅವರೆಲ್ಲರೂ ಈಗ ಕೆಲಸಕ್ಕೆ ವಾಪಸ್ ಆಗುತ್ತಿದ್ದಾರೆ.
ಇದುವರೆಗೂ ಮೆಟ್ರೋ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಸೇರಿದಂತೆ 254 ಬಿಎಂಆರ್ಸಿಎಲ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಇವರಲ್ಲಿ 87 ಸ್ವಚ್ಛತೆ/ಟಿಕೆಟಿಂಗ್ ಸಿಬ್ಬಂದಿ, 74 ಭದ್ರತಾ ಸಿಬ್ಬಂದಿಗಳು ಸೋಂಕಿಗೆ ಸೇರಿದ್ದರು. ಇವರೆಲ್ಲರೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕೋವಿಡ್ ಲಾಕ್ ಡೌನ್ ಘೋಷಣೆಯಾದ ಬಳಿಕ ಮಾರ್ಚ್ 22ರಿಂದ ನಮ್ಮ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಸೆಪ್ಟೆಂಬರ್ 7ರಂದು ಪುನಃ ರೈಲು ಸಂಚಾರವನ್ನು ಆರಂಭಿಸಲಾಗಿದೆ.
ಸೆಪ್ಟೆಂಬರ್ 7ರಂದು 18,925 ಜನರು ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಿದ್ದರು. ಅಕ್ಟೋಬರ್ 5ರಂದು 52,962 ಜನರು ಸಂಚಾರ ನಡೆಸಿದ್ದಾರೆ. ಈಗ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ನಡೆಸುತ್ತಿದ್ದಾರೆ.
7,500 ಹೊಸ ಸಿಬ್ಬಂದಿಗಳು ಕೆಲಸಕ್ಕೆ ಸೇರಿದ್ದಾರೆ. ಕೋವಿಡ್ ಪರಿಸ್ಥಿತಿಗೂ ಹಿಂದೆ ಇದ್ದಂತೆ ಪ್ರಸ್ತುತ 9,500 ಜನರು ಕೆಲಸ ಮಾಡುತ್ತಿದ್ದಾರೆ. ಬಿಎಂಆರ್ಸಿಎಲ್ ಸಿಬ್ಭಂದಿಗಳಿಗಾಗಿಯೇ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.
ಬಿಎಂಆರ್ಸಿಎಲ್ ವಿವಿಧ ಯೋಜನೆಗಳಿಗೆ ಕಾರ್ಮಿಕರನ್ನು ಕರೆತರಲು ಉಪ ಗುತ್ತಿಗೆ ನೀಡಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯದ ಹಲವು ಕಾರ್ಮಿಕರು ವಿವಿಧ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ವಲಸೆ ಕಾರ್ಮಿಕರು ಬೇರೆ ರಾಜ್ಯದಿಂದ ಆಗಮಿಸಿದರೆ 14 ದಿನದ ಕ್ವಾರಂಟೈನ್ನಲ್ಲಿ ಇರಬೇಕಾದ ಅಗತ್ಯವಿಲ್ಲ. ಅವರಿಗೆ ಬೆಂಗಳೂರಿಗೆ ಆಗಮಿಸಲು ಯಾವುದೇ ಇ-ಪಾಸುಗಳು ಸಹ ಬೇಡವಾಗಿದೆ.












Click it and Unblock the Notifications