Rama cut-out fall: ಬೆಂಗಳೂರಿನಲ್ಲಿ ಧರೆಗುರುಳಿದ ಶ್ರೀರಾಮನ 40 ಅಡಿ ಎತ್ತರದ ಬೃಹತ್ ಕಟೌಟ್
ಬೆಂಗಳೂರು ಜನವರಿ 24: ದೇಶದೆಲ್ಲೆಡೆ ಶ್ರೀರಾಮ ನಾಮ ಜಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ರಾರಾಜಿಸುತ್ತಿದ್ದಾನೆ. ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.
ಬೆಂಗಳೂರಿನ ನಂದಿನ ಲೇಔಟ್ನ ಕೃಷ್ಣಾನಂದ ನಗರ ಸರ್ಕಲ್ನಲ್ಲಿ ಹಾಕಲಾಗಿದ್ದ 40 ಅಡಿಯ ರಾಮನ ಕಟೌಟ್ ಧರೆಗುರುಳಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು ರಾಮ ಭಕ್ತರಿಗೆ ಬೇಸರ ತಂದಿದೆ. ಈ ಕಟೌಟ್ ಉರುಳಿ ಬೀಳಲು ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬೃಹತ್ ಕಟೌಟ್ ಸರಿಯಾಗಿ ಹಾಕಲಾಗಿದ್ದರೂ ಕೆಳಗೆ ಹೇಗೆ ಬಿತ್ತು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಅದ್ದೂರಿ ಸಮಾರಂಭವನ್ನು ಸೋಮವಾರ ನೆರವೇರಿಸಲಾಯಿತು. ಇದಕ್ಕಾಗಿ ದೇಶಾದ್ಯಂತ ಭಕ್ತರು ಶ್ರೀರಾಮನನ್ನು ಬರಮಾಡಿಕೊಳ್ಳುತ್ತಾ ಹಬ್ಬವನ್ನೇ ಆಚರಿಸಿದ್ದಾರೆ. ರಸ್ತೆ, ಬೀದಿ, ಗಲ್ಲಿ, ಮನೆಗಳ ಮೇಲೂ ರಾಮನ ಫ್ಲೆಕ್ಸ್ ಹಾಕುವ ಮೂಲಕ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿದರು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ನೇರ ಪ್ರಸಾರದ ಮೂಲಕ ಕಣ್ತುಂಬಿಕೊಂಡರು. ಜೊತೆಗೆ ಹಲವೆಡೆ ಬೃಹತ್ ಕಟೌಟ್ಗಳನ್ನೂ ಹಾಕಲಾಗಿತ್ತು.
ಹೀಗೆ ಬೆಂಗಳೂರಿನಲ್ಲಿ ಹಾಕಲಾಗಿದ್ದ ಕಟೌಟ್ ಧರೆಗುರುಳಿ ಬಿದ್ದಿದೆ. ಅದೃಷ್ಟವಶಾತ್ ಕಟೌಟ್ ಬೀಳೋ ಸಮಯದಲ್ಲಿ ಯಾವುದೇ ವಾಹನಗಳು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಭಾರೀ ದುರಂತ ತಪ್ಪಿದೆ. ಇನ್ನೂ ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಈ ಕಟೌಟ್ ಗಾಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ ಈ ಕಟೌಟ್ ಅನ್ನು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಹಾಕಲಾಗಿತ್ತು. ಆದರೆ ಇದು ಏಕಾಏಕಿ ಗಾಳಿಗೆ ಬಿದ್ದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕಿಡಿಗೇಡಿಗಳು ಕಟೌಟ್ ಕೆಡವಿದ್ದಾರೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಸೀಲನೆ ನಡೆಸಿದ್ದಾರೆ. ಜೊತೆಗೆ ಕಟೌಟ್ ಹಾಕಿದವರ ಮಾಹಿತಿ ಕೂಡ ಪಡೆಯಲಾಗುತ್ತಿದೆ.












Click it and Unblock the Notifications