ಗುಪ್ತಚರ ಇಲಾಖೆಗೆ 100 ಎಸ್ಐಗಳ ನೇಮಕ : ಸಿಎಂ
ಬೆಂಗಳೂರು, ಮೇ 09 : ಗುಪ್ತಚರ ಇಲಾಖೆಗೆ ಶೀಘ್ರದಲ್ಲಿಯೇ 100 ಸಬ್ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗುಪ್ತಚರ ಇಲಾಖೆಯನ್ನು ಬಲಪಡಿಸಲು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಶನಿವಾರ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುಪ್ತಚರ ಇಲಾಖೆಯನ್ನು ಬಲಪಡಿಸುವ ಸಲುವಾಗಿ ಪ್ರತ್ಯೇಕ ನೇಮಕಾತಿ ಮಾಡಲಾಗುತ್ತದೆ. ಇಲಾಖೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಹೇಳಿದರು. [ರೌಡಿ ಮುಲಾಮ ಬಂಧನ]

ಶೀಘ್ರದಲ್ಲಿಯೇ ಗುಪ್ತಚರ ಇಲಾಖೆಗೆ 100 ಸಬ್ಇನ್ಸ್ಪೆಕ್ಟರ್ಗಳನ್ನು ನೇಮಕಮಾಡಲಾಗುತ್ತದೆ. ಜಿಲ್ಲಾ ಅಪರಾಧ ತಡೆಗೆ 'ಜಿಲ್ಲಾ ಅಪರಾಧ ದಾಖಲೀಕರಣ ವಿಭಾಗ' ಮತ್ತು 'ಜಿಲ್ಲಾ ಅಪರಾಧ ಗುಪ್ತಚರ ವಿಭಾಗ' ವನ್ನು ಕ್ರಿಯಾಶೀಲಗೊಳಿಸಲಾಗುವುದು ಎಂದರು. [ಬಿ.ದಯಾನಂದ ಅಧಿಕಾರ ಸ್ವೀಕಾರದ ಚಿತ್ರಗಳು]
ಅಧಿಕಾರಿಗಳು ಹೊಣೆ : ಜೈಲುಗಳಲ್ಲಿ ನಡೆಯುವ ಅವ್ಯವಹಾರಗಳಿಗೆ ಅಧಿಕಾರಿಗಳೇ ನೇರವಾಗಿ ಹೊಣೆಯಾಗುತ್ತಾರೆ. ರೌಡಿಗಳು, ಕೋಮುಗಲಭೆ ಸೃಷ್ಠಿಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಕ್ಲರ್ಕ್ ರೀತಿ ಕೆಲಸ ಮಾಡಬೇಡಿ : ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ಸಂಭವಿಸಿದರೆ, ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು. ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕ್ಲರ್ಕ್ ರೀತಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ ಎಂದು ಸಿಎಂ ಸಲಹೆ ನೀಡಿದರು.
ವರ್ಗಾವಣೆ ಮಾಡಿ : ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಿ ಎಂದು ಗೃಹ ಸಚಿವರಿಗೆ ಸೂಚಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಅಪರಾಧ ಮಾಡುವವರ ಜೊತೆ ಕೆಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್, ಐಜಿ, ಡಿಜಿಪಿ ಓಂ ಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಗೃಹ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.













Click it and Unblock the Notifications