ನೆರೆ ಪೀಡತರ ನೆರವಿಗೆ ದಾನಕ್ಕಾಗಿ ಮನವಿ ಮಾಡಿದ ಯಡಿಯೂರಪ್ಪ
ಬೆಳಗಾವಿ, ಆಗಸ್ಟ್ 08: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ದಾನಿಗಳು ಮುಂದೆ ಬರಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಪ್ರವಾಹ ವೀಕ್ಷಣೆಯಲ್ಲಿ ತೊಡಗಿರುವ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು ಮೂರು ಸಾವಿರ ಮನೆಗಳನ್ನು ಕಟ್ಟಿಕೊಡಬೇಕು, ಜೊತೆಗೆ ಪರಿಹಾರ ಕಾರ್ಯಕ್ಕೆ 5000 ಕೋಟಿ ಹಣದ ಅಗತ್ಯ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪ್ರವಾಹವು ಭಾರಿ ಪ್ರಮಾಣದ ಆಸ್ತಿ-ಪಾಸ್ತಿಯನ್ನು ಹಾಳು ಮಾಡಿದ್ದು, ಪರಿಹಾರ ಕಾರ್ಯದಲ್ಲಿ ಸರ್ಕಾರಕ್ಕೆ ನೆರವಾಗಲು ಸಾರ್ವಜನಿಕರಿಗೆ ಸಿಎಂ ಕರೆ ನೀಡಿದ್ದು, ದಾನಿಗಳಿಂದ ನೆರವಿನ ಹಸ್ತ ಬೇಡಿದ್ದಾರೆ.

ಮುಂದುವರೆದು ಮಾತನಾಡಿದ ಯಡಿಯೂರಪ್ಪ, ಕಾರ್ಯಾಚರಣೆಗೆ ಬೇಕಾದ ದೋಣಿ, ಹೆಲಿಕಾಪ್ಟರ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದರು.
ಪರಿಹಾರ ಕೇಂದ್ರಗಳ ವ್ಯವಸ್ಥೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ ಅವರು, ಪರಿಹಾರ ಕೇಂದ್ರಗಳು ಸುವ್ಯವಸ್ಥಿತವಾಗಿದ್ದು, ಪರಿಹಾರ ಕೇಂದ್ರಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಾನು ಇನ್ನೂ ಮೂರು ದಿನಗಳ ಕಾಲ ಇಲ್ಲೇ ಇರುತ್ತೇನೆ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ, ಪರಿಹಾರ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಅವರು ನೆರೆ ಸಂತ್ರಸ್ತರಿಗಾಗಿ ಹತ್ತು ಕೋಟಿ ದೇಣಿಗೆ ನೀಡಿದ್ದು, ಸುಧಾ ಮೂರ್ತಿ ಅವರಿಗೆ ಯಡಿಯೂರಪ್ಪ ಅವರು ಧನ್ಯವಾದ ಅರ್ಪಿಸಿದರು.












Click it and Unblock the Notifications